ಬೆಂಗಳೂರು: ‘ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟ. ಇಂತಹ ತೋಟಕ್ಕೆ ಆರ್ಎಸ್ಎಸ್ ಎಂಬ ವೈರಸ್ ಹರಡುತ್ತಿದೆ. ನಾವೆಲ್ಲರೂ ಒಗ್ಗೂಡಿ ಪ್ರತಿಭಟಿಸುವ ಮೂಲಕ ಈ ವೈರಸ್ ಅನ್ನು ನಿಯಂತ್ರಿಸಬೇಕು’ ಎಂದುಸಿಪಿಐ ಹಿರಿಯ ಮುಖಂಡ ಸಿದ್ದನಗೌಡ ಪಾಟೀಲ ತಿಳಿಸಿದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಆರ್ಪಿಐ) ರಾಜ್ಯ ಘಟಕದ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಜ್ಜಾಗಿರುವ ಆರ್ಎಸ್ಎಸ್ ತ್ರಿವರ್ಣ ಧ್ವಜವನ್ನೇ ಒಪ್ಪಿಕೊಂಡಿಲ್ಲ. ಇಡೀ ದೇಶ ಗೌರವಿಸುವ ಕೇಸರಿ, ಬಿಳಿ, ಹಸಿರು ಬಣ್ಣದ ಧ್ವಜಕ್ಕಿಂತ ತಮ್ಮ ಕೇಸರಿಧ್ವಜಕ್ಕೆ ಹೆಚ್ಚು ಗೌರವ ನೀಡುತ್ತಾರೆ’ ಎಂದರು.
‘ಸಂವಿಧಾನ ಅಪಾಯದಲ್ಲಿ ಸಿಲುಕಿದ್ದು, ಅದರ ಮಹತ್ವವೂ ಹೆಚ್ಚಾಗಿದೆ. ದೇಶದಲ್ಲಿ ನಡೆಯುತ್ತಿರುವ ಚಳವಳಿ ಹಾಗೂ ಪ್ರತಿಭಟನೆಗಳಿಂದ ಜನಸಾಮಾನ್ಯರೆಲ್ಲ ಸಂವಿಧಾನದ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವಅಮಿತ್ ಶಾ ಅವರಿಗೆ ಧನ್ಯವಾದಗಳು’ ಎಂದರು.
ಲೇಖಕ ಬಂಜಗೆರೆ ಜಯಪ್ರಕಾಶ್, ‘ಮೋದಿ ಅಧಿಕಾರಕ್ಕೆ ಬಂದ ಮೇಲೆ ಮಸೂದೆಗಳ ಪರ್ವನಡೆದಿದೆ. ದೇಶದ ಹಿಂದಿನ ಸ್ಥಿತಿಗತಿಗಳನ್ನು ಅರಿಯದೆ, ಮಸೂದೆಗಳನ್ನು ಜಾರಿ ಮಾಡುವ ಮೂಲಕ ಅದನ್ನೇ ಭಾರತದ ಪ್ರಗತಿ ಎಂದು ಬಿಂಬಿಸುತ್ತಿದ್ದಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.