ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹಿನ್‌ ಶಾಲೆಯ ವಿವಾದಾತ್ಮಕ ನಾಟಕ ಪ್ರದರ್ಶನ ಪ್ರಕರಣ: ಮಕ್ಕಳ ನಿರಂತರ ವಿಚಾರಣೆ

Last Updated 4 ಫೆಬ್ರುವರಿ 2020, 18:30 IST
ಅಕ್ಷರ ಗಾತ್ರ

ಬೀದರ್‌:ಶಾಹಿನ್‌ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ವಿವಾದಾತ್ಮಕ ನಾಟಕ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರವೂ ಶಾಲೆಗೆ ಭೇಟಿ ನೀಡಿ ಮಕ್ಕಳನ್ನು ವಿಚಾರಣೆಗೊಳಪಡಿಸಿದರು.

ಪೊಲೀಸ್‌ ಠಾಣೆಯ ಮಕ್ಕಳ ಘಟಕದ ಸಿಬ್ಬಂದಿ ನಾಲ್ಕು ದಿನಗಳಿಂದ ಶಾಲೆಗೆ ಭೇಟಿ ಕೊಟ್ಟು, ನಾಟಕದಲ್ಲಿ ಪಾತ್ರ ಮಾಡಿದ ಮಕ್ಕಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೊಬೈಲ್‌ನಲ್ಲಿರುವ ದೃಶ್ಯವನ್ನು ತೋರಿಸಿ ಪಾಲಕರ ಮಾಹಿತಿಯನ್ನೂ ಪಡೆಯುತ್ತಿದ್ದಾರೆ.

‘ಶಾಲಾ ಆಡಳಿತ ಮಂಡಳಿ ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯಬೇಕಾಗಿದೆ. ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ತಲೆಮರೆಸಿಕೊಂಡಿದ್ದು, ನಮ್ಮ ವಿಶೇಷ ತಂಡ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿಸಿದೆ’ ಎಂದು ತನಿಖಾಧಿಕಾರಿ ಬೀದರ್‌ ಡಿವೈಎಸ್ಪಿ ಬಸವೇಶ್ವರ ಹೀರಾ ಹೇಳಿದರು.

ಬಾಲಕಿ ಅತಂತ್ರ: ಇದಕ್ಕೆ ಸಂಬಂಧಿಸಿ ದಾಖಲಾಗಿರುವ ದೇಶದ್ರೋಹ ಪ್ರಕರಣದಲ್ಲಿ, ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದ ಬಾಲಕಿಯ ತಾಯಿ ಅಂಜುನ್ನೀಸಾ ಅವರನ್ನು ಬಂಧಿಸಿ ಜೈಲಿಗಟ್ಟಲಾಗಿದ್ದು, ಅವರ ಮಗಳು ಅತಂತ್ರಳಾಗಿದ್ದಾಳೆ.

ಹಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡದಲ್ಲಿ ವಾಸವಾಗಿದ್ದ ಅಂಜುನ್ನೀಸಾ ಪತಿಯ ನಿಧನದ ನಂತರ ಮಗಳೊಂದಿಗೆ ಬೀದರ್‌ಗೆ ಬಂದು ಖಾಸಗಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದರು.ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಾಟಕವಾಡಿಸಿದ ಸಂದರ್ಭದಲ್ಲಿ ಮಗಳಿಗೆ ಚಪ್ಪಲಿಕೊಟ್ಟು ‘ಸಿಎಎ, ಎನ್ಆರ್‌ಸಿಗೆ ಯಾರಾದರೂ ದಾಖಲೆ ಕೇಳಲು ಬಂದರೆ ಚಪ್ಪಲಿಯಿಂದ ಹೊಡೆಯುತ್ತೇನೆ’ ಎಂದು ನಾಟಕದಲ್ಲಿ ಆಡಬೇಕು ಎಂದು ಹೇಳಿ ಕಳಿಸಿದ್ದರು ಎಂಬುದು ಪೊಲೀಸರ ವಾದ.

ನ್ಯೂಟೌನ್‌ ಪೊಲೀಸರು ಜನವರಿ 30ರಂದು ಅಂಜುನ್ನೀಸಾ ಅವರನ್ನು ಬಂಧಿಸಿದ್ದಾರೆ.ಜನವರಿ 30ರಂದು ಶಾಲೆಯಿಂದ ಮನೆಗೆ ಬಂದ ಬಾಲಕಿಗೆ ಪಕ್ಕದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕುಟುಂಬ ಆಶ್ರಯ ಒದಗಿಸಿದೆ. ಐದು ದಿನಗಳಿಂದ ಪಕ್ಕದ ಮನೆಯವರೇ ನಿತ್ಯ ಬಾಲಕಿಯನ್ನು ಶಾಲೆಗೆ ಕಳಿಸಿಕೊಡುತ್ತಿದ್ದಾರೆ.

‘ತಾಯಿಯ ಬಂಧನದ ನಂತರ ಬಾಲಕಿ ಗಾಬರಿಗೊಂಡಿದ್ದು, ಅವಳಲ್ಲಿ ಆತಂಕ ಮನೆ ಮಾಡಿದೆ. ಸರಿಯಾಗಿ ಊಟ–ನಿದ್ದೆ ಮಾಡುತ್ತಿಲ್ಲ. ನಡು ರಾತ್ರಿಯಲ್ಲಿ ಕಿರುಚುತ್ತ ಎದ್ದು ಕುಳಿತುಕೊಳ್ಳುತ್ತಿದ್ದಾಳೆ. ಮುಂದೆ ಏನಾಗುತ್ತದೆ ಎಂದು ಗೊತ್ತಿಲ್ಲ. ಮಾನವೀಯ ನೆಲೆಯಲ್ಲಿ ಬಾಲಕಿಗೆ ಆಶ್ರಯ ನೀಡಿದ್ದೇವೆ’ ಎಂದು ಬಾಲಕಿಗೆ
ಆಶ್ರಯ ಕೊಟ್ಟಿರುವ ಪೋಷಕರು ತಿಳಿಸಿದ್ದಾರೆ.

‘ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕ ಪ್ರದರ್ಶನ ನಡೆದಿದ್ದು ನಿಜ. ಬಾಲಕಿ ವಿವಾದಾತ್ಮಕ ಶಬ್ದ ಬಳಸಿದ ನಂತರ ತಕ್ಷಣ ನಾಟಕ ಪ್ರದರ್ಶನ ನಿಲ್ಲಿಸಲಾಯಿತು. ಆದರೆ ಯಾರೊ ಒಬ್ಬರು ದೂರು ಕೊಟ್ಟ ಕಾರಣ ನನ್ನನ್ನು ಹೊಣೆ ಮಾಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಬಾಲಕಿಯ ತಾಯಿ ಅನಕ್ಷರಸ್ಥಳಾಗಿದ್ದು, ಘಟನೆಯ ನಂತರ ಅವಳ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಅವಳು ಮಾತ್ರೆಗಳನ್ನು
ತೆಗೆದುಕೊಳ್ಳುತ್ತಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಜೈಲಿನಲ್ಲಿರುವ ಫರೀದಾ ಬೇಗಂ ತಿಳಿಸಿದರು

ರಿಜ್ವಾನ್ ಭೇಟಿ: ದೇಶದ್ರೋಹ ಪ್ರಕರಣದ ಅಡಿ ಬಂಧನಕ್ಕೊಳಗಾದ ಮುಖ್ಯಶಿಕ್ಷಕಿ ಹಾಗೂ ಬಾಲಕಿಯ ತಾಯಿಯನ್ನು ಶಾಸಕ ರಿಜ್ವಾನ್‌ ಅರ್ಷದ್‌ ಅವರು ಮಂಗಳವಾರ ಜೈಲಿನಲ್ಲಿ ಭೇಟಿಯಾದರು.

ಶಾಹಿನ್ ಶಿಕ್ಷಣ ಸಂಸ್ಥೆಯ ಸಿಇಒ ತೌಸಿಫ್ ಮಡಿಕೇರಿ, ಮನ್ನಾನ್‌ ಶೇಟ್ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌. ಅವರನ್ನೂ ಭೇಟಿಯಾದರು.

‘ಮಕ್ಕಳ ನಾಟಕವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಬಾಲಕಿಯ ತಾಯಿ ಹಾಗೂ ಮುಖ್ಯ ಶಿಕ್ಷಕಿಯ ವಿರುದ್ಧ ದಾಖಲಿಸಿರುವ ದೇಶ ದ್ರೋಹಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT