ಬೆಂಗಳೂರು:ರಾಜೀನಾಮೆ ನೀಡಿರುವ ಶಾಸಕ ರಾಮಲಿಂಗಾರೆಡ್ಡಿ ಅವರೊಂದಿಗೆ ಸಚಿವ ಡಿ.ಕೆ. ಶಿವಕುಮಾರ್ ಅವರು ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದೆ.
ಶಿವಕುಮಾರ ಅವರ ಮಾತಿಗೆ ರಾಮಲಿಂಗಾರೆಡ್ಡಿ ಅವರು ಕಿಂಚಿತ್ತು ಕಿವಿಗೊಡುತ್ತಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಎಲ್ಲವನ್ನೂ ಸರಿಪಡಿಸೋಣ ರಾಜೀನಾಮೆ ವಾಪಸ್ ಪಡೆಯುವಂತೆ ಶಿವಕುಮಾರ್ ಮನವಿ ಮಾಡಿದ್ದರು. ಆದರೆ, ರಾಮಲಿಂಗಾರೆಡ್ಡಿ ಮನವೊಲಿಸುವಲ್ಲಿ ಅವರು ವಿಫಲರಾಗಿದ್ದಾರೆ. ‘ಸರಿಪಡಿಸೋದು ಏನೂ ಇಲ್ಲ, ಎಲ್ಲವೂ ಕೈ ಮೀರಿ ಹೋಗಿದೆ’ ಎಂದು ಹೇಳಿ ರೆಡ್ಡಿ ಸಂಧಾನದಿಂದ ಹೊರಬಂದಿದ್ದಾರೆ.
‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ.ವಾಪಸ್ ಪಡೆಯುವ ಮಾತೇ ಇಲ್ಲ.ನನ್ನ ರಾಜೀನಾಮೆ ಕಾರಣ ಮಾಧ್ಯಮದವರಿಗೆ ಗೊತ್ತು.ಬಿಜೆಪಿಗೆ ಹೋಗಲ್ಲ. ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ.ಅತೃಪ್ತರ ಜೊತೆಯಾಗಲಿ,ರಮೇಶ ಜಾರಕಿಹೊಳಿ ಜೊತೆಯಲ್ಲಿರುವ ಶಾಸಕರ ಜೊತೆ ನಾನು ಗುರುತಿಸಿಕೊಂಡಿಲ್ಲ’ ಎಂದು ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.