ಮೈಸೂರು: ‘ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡುವುದು, ಹೋಮ–ಹವನದಲ್ಲಿ ಪಾಲ್ಗೊಳ್ಳುವುದು ಅವರವರ ವೈಯಕ್ತಿಕ ವಿಚಾರ. ಆದರೆ ಮುಖ್ಯಮಂತ್ರಿಯಾದವರು ತಮ್ಮ ಸ್ಥಾನದ ಜವಾಬ್ದಾರಿ ಅರಿತು ಕೆಲಸ ಮಾಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಶುಕ್ರವಾರ ಇಲ್ಲಿ ಕಿಡಿಕಾರಿದರು.
‘ಕಡಿಮೆ ಸ್ಥಾನಗಳನ್ನು ಪಡೆದರೂ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಜನರ ಸೇವೆ ಮಾಡಲು ಸಾಕಷ್ಟು ಅವಕಾಶಗಳು ಇವೆ ಎಂಬುದನ್ನು ಎಚ್.ಡಿ. ಕುಮಾರಸ್ವಾಮಿ ಅರಿತುಕೊಳ್ಳಲಿ. ಅವರ ತಂದೆ ಈ ಹಿಂದೆ ಪ್ರಧಾನಿಯಾಗಿದ್ದರು. ಆಡಳಿತ ಹೇಗೆ ನಡೆಸಬೇಕು ಎಂದು ಮಗನಿಗೆ ಮಾರ್ಗದರ್ಶನ ಮಾಡಲಿ’ ಎಂದು ಕುಟುಕಿದರು.
‘ಜನಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಇತ್ತೀಚಿನ ದಿನಗಳಲ್ಲಿ ಸಭ್ಯತೆ ಮೀರಿ ಮಾತನಾಡುತ್ತಿದ್ದಾರೆ. ಕೆಟ್ಟ ಪದಗಳನ್ನು ಬಳಸಿ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಭ್ಯತೆಯಿಂದ ಮಾತನಾಡಬೇಕು. ಇಲ್ಲದಿದ್ದರೆ ಜನರು ಹಗುರವಾಗಿ ಕಾಣುತ್ತಾರೆ’ ಎಂದರು.