ಬೆಂಗಳೂರು: ಮತೀಯ ಗಲಭೆ ಹುಟ್ಟುಹಾಕಲು ಹಾಗೂ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ ಆರೋಪದಲ್ಲಿ ಬಂಧಿತರಾಗಿರುವ ನಾಲ್ವರು ಶಂಕಿತ ಉಗ್ರರನ್ನು ನಗರದ 52 ನೇ ಸಿಸಿಎಚ್ ವಿಶೇಷ ನ್ಯಾಯಾಲಯ ಇದೇ 27ರವರೆಗೆ ಸಿಸಿಬಿ ವಶಕ್ಕೆ ನೀಡಿದೆ.
ಮೆಹಬೂಬ್ ಪಾಷಾ, ಮೊಹಮದ್ ಮನ್ಸೂರ್, ಜಬಿವುಲ್ಲಾ ಮತ್ತು ಸಯ್ಯದ್ ಅಜ್ಮತ್ತುಲ್ಲಾ ಬಂಧಿತರು. ಸಿಸಿಬಿ ಮತ್ತು ರಾಜ್ಯ ಗುಪ್ತದಳ ಜಂಟಿ ಕಾರ್ಯಾಚರಣೆ ನಡೆಸಿ ಗುರಪ್ಪನಪಾಳ್ಯದಲ್ಲಿ ಆರೋಪಿಗಳನ್ನು ಗುರುವಾರ ವಶಕ್ಕೆ ಪಡೆದಿತ್ತು. ಸಿಸಿಬಿ ಎಸಿಪಿಗಳಾದ ವೇಣುಗೋಪಾಲ್, ನಾಗರಾಜ್ ತಂಡ ಆರೋಪಿಗಳ ವಿಚಾರಣೆ ನಡೆಸಲಿದೆ.
ತಮಿಳುನಾಡಿನ ಪೊಲೀಸರು ಬೆಂಗಳೂರಿನಲ್ಲಿ ಮೂವರು ಶಂಕಿತ ಉಗ್ರರನ್ನು ಇತ್ತೀಚೆಗೆ ಬಂಧಿಸುತ್ತಿದ್ದಂತೆ ಮೆಹಬೂಬ್ ಪಾಷಾ ಹಾಗೂ ಆತನ 16 ಸಹಚರರು ತಲೆಮರೆಸಿಕೊಂಡಿದ್ದರು. ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಜೊತೆ ನಂಟು ಹೊಂದಿದ್ದ ಪಾಷಾನ ಪತ್ತೆಗೆ ಕೆಲವು ದಿನಗಳಿಂದ ತೀವ್ರ ಶೋಧ ನಡೆದಿತ್ತು. ಅವರೆಲ್ಲರ ವಿರುದ್ಧ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಿವಮೊಗ್ಗ, ರಾಮನಗರ, ಕೋಲಾರ ಹಾಗೂ ಬೆಂಗಳೂರಿನಲ್ಲಿ ಪಾಷಾ ಮತ್ತು ಆತನ ಸಹಚರರು ತಲೆಮರೆಸಿಕೊಂಡು ಓಡಾಡುತ್ತಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ಬೆಂಗಳೂರು ‘ಜಿಹಾದಿ’ ತಂಡದ ನೇತೃತ್ವವನ್ನು ಪಾಷಾ ವಹಿಸಿದ್ದ ಎನ್ನಲಾಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿ ‘ಅಲ್ ಹಿಂದ್‘ ಟ್ರಸ್ಟ್ ಸ್ಥಾಪಿಸಿ ಜಿಹಾದಿ ಸಂಘಟನೆ ಕಟ್ಟಲು ಯೋಜನೆ ಹಾಕಿಕೊಂಡಿದ್ದ ಎಂಬ ವಿಷಯ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.