ರಾಯಚೂರು: ಕೆರೆಯಲ್ಲಿ ಕಾಲುಜಾರಿ ಬಿದ್ದು ಮೂವರು ಬಾಲಕರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸಿಂಧನೂರು ತಾಲ್ಲೂಕು ರೌಡಕುಂದಾ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ವಿರೇಶ ಗದುಗಿನವರ ಮಕ್ಕಳಾದ ರವಿ (11), ನಾಗರಾಜ (10) ಹಾಗೂ ಅಜ್ಜನ ಮನೆಗೆ ಬಂದಿದ್ದ ಯಲಬುರ್ಗಾ ತಾಲ್ಲೂಕಿನ ಮಲಕಸಮುದ್ರ ಗ್ರಾಮದ ಕಾರ್ತಿಕ್ ಮಲ್ಲೇಶ (6) ಮೃತಪಟ್ಟಿದ್ದು, ಗ್ರಾಮದಲ್ಲಿ ಪಾಲಕರ ಆಕ್ರಂದನ ಮುಗಿಲುಮುಟ್ಟಿದೆ.
ಮೂವರು ಬಾಲಕರು ಒಂದೇ ಕುಟುಂಬದವರು. ಕುಡಿಯುವ ನೀರು ತರುವುದಕ್ಕಾಗಿ ತಳ್ಳುಗಾಡಿಯಲ್ಲಿ ಕೊಡಗಳನ್ನಿಟ್ಟುಕೊಂಡು ಗ್ರಾಮದ ಪಕ್ಕದಲ್ಲಿರುವ ಕೆರೆಗೆ ಹೋಗಿದ್ದ ವೇಳೆ ಕಾಲು ಜಾರಿದೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.