ಬೆಳಗಾವಿ: ಇಲ್ಲಿನ ಆದಿತ್ಯ ಗಾರ್ಮೆಂಟ್ಸ್ನಿಂದ ತಯಾರಿಸಿರುವ ಲಾವಂಚ ಬೇರುಳ್ಳ ಆಯುರ್ವೇದ ಮಾಸ್ಕ್ (ಮುಖಗವಸು) ಅನ್ನು ಗುರುವಾರ ಖಾಸಬಾಗ್ನ ಬನಶಂಕರಿ ದೇವಸ್ಥಾನ ಆವರಣದಲ್ಲಿ ನಡೆದ ಮಾಸ್ಕ್ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಬಿಡುಗಡೆ ಮಾಡಿದರು.
‘ಹತ್ತಿ ಬಟ್ಟೆಯ ಮಾಸ್ಕ್ (3 ಲೇಯರ್) ಇದಾಗಿದೆ. ಒಳಭಾಗದಲ್ಲಿ ಸಣ್ಣದಾದ ಜೇಬಿನ ರೀತಿ ಮಾಡಿ ಅದರಲ್ಲಿ ಲಾವಂಚದ ಬೇರಿನ ತುಂಡುಗಳನ್ನು ಹಾಕಲಾಗಿರುತ್ತದೆ. ಇದರಿಂದ ಧರಿಸುವವರಿಗೆ ಉಸಿರಾಟಕ್ಕೆ ತೊಂದರೆ ಆಗುವುದಿಲ್ಲ. ಸುವಾಸನೆಯೂ ಸಿಗುತ್ತದೆ. ಲಾವಂಚವು ಆಯುರ್ವೇದ ಔಷಧಿಯ ಗುಣಗಳನ್ನು ಹೊಂದಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೂ ಸಹಕಾರಿಯಾಗಿದೆ. ಮಾಸ್ಕೊಂದಕ್ಕೆ ₹ 60 ದರ ನಿಗದಿಪಡಿಸಿದ್ದೇವೆ’ ಎಂದು ಗಾರ್ಮೆಂಟ್ಸ್ನ ಅಮಿತ್ ಹನಮನ್ನವರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ತೊಳೆದು ಒಣಗಿಸಿ ಪುನರ್ ಬಳಸಬಹುದಾದ ಮೊದಲ ಆಯುರ್ವೇದ ಮಾಸ್ಕ್ ಇದಾಗಿದೆ. ಸಹಜ ಸುವಾಸನೆ ಬೀರುವ ಲಾವಂಚದ ಬೇರುಗಳಲ್ಲಿ ಔಷಧ ಗುಣಗಳಿವೆ. 4ರಿಂದ 6 ತಿಂಗಳವರೆಗೆ ತೊಳೆದು ಪುನರ್ ಬಳಕೆ ಮಾಡಬಹುದಾಗದೆ’ ಎಂದು ತಿಳಿಸಿದರು.
‘ಕೋವಿಡ್–19 ಲಾಕ್ಡೌನ್ನಿಂದಾಗಿ ನೇಕಾರರಿಗೆ ಕೆಲಸ ಇಲ್ಲವಾಗಿದೆ. ಹೀಗಾಗಿ ಕೆಲವರಿಗೆ ಮಾಸ್ಕ್ ತಯಾರಿಸುವ ಕೆಲಸ ಕೊಟ್ಟಿದ್ದೇವೆ’ ಎಂದು ತಿಳಿಸಿದರು.
‘ನಾವೆಲ್ಲರೂ ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸಲೇಬೇಕಾಗಿದೆ. ಇದಕ್ಕೆ ಮುಖಗವಸುಗಳು ಪೂರಕವಾಗಿವೆ. ಮಾಸ್ಕ್ ಧರಿಸುವ ಮೂಲಕ ಸೋಂಕಿನಿಂದ ದೂರ ಇರಬಹುದು’ ಎಂದು ಸಂಜಯ ಪಾಟೀಲ ಹೇಳಿದರು.