ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ತಿಡಗುಂದಿ ವಿಸ್ತರಣಾ ನಾಲೆಗೆ ನಿರ್ಮಿಸಿರುವ ದೇಶದಲ್ಲೇ ಅತೀ ಉದ್ದನೆಯ ಮತ್ತು ಎತ್ತರದ ಜಲಸೇತುವೆ(ಅಕ್ವಾಡಕ್ಟ್)ಯನ್ನು ಶಾಸಕ ಎಂ.ಬಿ.ಪಾಟೀಲ ಲೋಕಾರ್ಪಣೆ ಮಾಡಿದರು.
ತಾಲ್ಲೂಕಿನ ಬುರಾಣಪುರ ಗೋದಾಮು ಬಳಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಾಲೆಗೆ ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಿ ಮಾತನಾಡಿದ ಅವರು, 14.73 ಕಿ.ಮೀ.ಉದ್ದನೆಯ ಈ ಮೇಲ್ಸೇತುವೆ ಕಾಲುವೆಯನ್ನು ₹ 280.26 ಕೋಟಿ ವೆಚ್ಚದಲ್ಲಿ ಎರಡು ವರ್ಷದಲ್ಲಿ ನಿರ್ಮಿಸಲಾಗಿದೆ ಎಂದರು.
ಈ ಕಾಲುವೆಯಿಂದ ವಿಜಯಪುರ ಮತ್ತು ಇಂಡಿ ತಾಲ್ಲೂಕಿನ 29 ಗ್ರಾಮಗಳ ಸುಮಾರು 63,190 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯವಾಗಲಿದೆ ಹಾಗೂ 25 ಕೆರೆಗಳು ಭರ್ತಿಯಾಗಲಿವೆ ಎಂದು ಹೇಳಿದರು.
ದೇಶಕ್ಕೆ ಮಾದರಿ:ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ತಿಡಗುಂದಿ ಕಾಲುವೆ ಜಲಸೇತುವೆಯು ದೇಶಕ್ಕೆ ಮಾದರಿಯಾಗಿದೆ. ಈ ಕಾಲುವೆ ನಿರ್ಮಾಣದಿಂದಾಗಿ ಕೃಷ್ಣೆಯ ನೀರು ರಾಜ್ಯದ ಗಡಿಯವರೆಗೂ ತಲುಪಿದಂತಾಗಿದೆ. ಯೋಜನೆಯ ರೂವಾರಿ ಎಂ.ಬಿ.ಪಾಟೀಲಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಆಲಮಟ್ಟಿ ಜಲಾಶಯದಿಂದ ವಿಜಯಪುರ ಜಿಲ್ಲೆಯ ಪಾಲಿನ ನೀರು ಬಳಕೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ನಿಟ್ಟಿನಲ್ಲಿ ಶ್ರಮಿಸಲಿದೆ ಎಂದು ಹೇಳಿದರು.
ಜಲಸೇತುವೆಯಲ್ಲಿ ವಾಹನ ಸಂಚಾರ:ತಾಲ್ಲೂಕಿನ ಬುರಾಣಪುರ ಗೋದಾಮಿನ ಬಳಿಯಿಂದ ಆರಂಭಗೊಂಡು ಭೂತನಾಳ ವರೆಗೂ ನೆಲಮಟ್ಟದಿಂದ ಸರಾಸರಿ 30 ಮೀಟರ್ ಎತ್ತರದಲ್ಲಿ ತಲೆ ಎತ್ತಿ ನಿಂತಿರುವ ನಾಲೆಯ ಜಲ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೂ ಅವಕಾಶವಿರುವುದು ವಿಶೇಷವಾಗಿದೆ.
ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ಪ್ರೊ.ರಾಜು ಅಲಗೂರ, ವಿಠಲ ಕಟಕದೋಂಡ ಮತ್ತು ಡಾ.ಮಹಾಂತೇಶ ಬಿರಾದಾರ, ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು, ರೈತರು ಇದ್ದರು.
ವಿಜಯಪುರ ಜಿಲ್ಲೆಯ ತಿಡಗುಂದಿ ವಿಸ್ತರಣಾ ನಾಲೆಗೆ ನಿರ್ಮಿಸಿರುವ ದೇಶದಲ್ಲೇ ಅತೀ ಉದ್ದನೆಯ ಮತ್ತು ಎತ್ತರದ ಜಲಸೇತುವೆ–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ