ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಸರ್ಕಾರವಿದ್ದಾಗ ಆಗಿದ್ದೇನು; ದಶಕದ ಬಳಿಕ ಅದೇ ಸ್ಥಿತಿ ಉಂಟಾಯ್ತಾ?

Last Updated 11 ಜುಲೈ 2019, 6:49 IST
ಅಕ್ಷರ ಗಾತ್ರ

ಬೆಂಗಳೂರು: ನಾನ್ಯಾಕೆ ರಾಜೀನಾಮೆ ನೀಡಲಿ? ಅದರ ಅಗತ್ಯವೇನಿದೆ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, 2008–09ರಲ್ಲಿ ಯಡಿಯೂರಪ್ಪ ಸರ್ಕಾರವಿದ್ದಾಗ ಏನಾಗಿತ್ತು ಎಂದು ಕೇಳಿದರು. ಹಾಗಾಗರೆ ಆಗಲೂ ಇದೇ ಸ್ಥಿತಿ ನಿರ್ಮಾಣವಾಗಿತ್ತಾ? ಯಡಿಯೂರಪ್ಪ ಏನು ಮಾಡಿದ್ದರು? ಸಂಪೂರ್ಣ ವಿವರ ಇಲ್ಲಿದೆ.

2009ರ ಅಕ್ಟೋಬರ್‌ನಲ್ಲಿ ಉತ್ತರ ಕರ್ನಾಟಕದ 15 ಜಿಲ್ಲೆಗಳಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಬಂದಿತ್ತು. ಅದೇ ಸಂದರ್ಭದಲ್ಲಿ `ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಡಬೇಕು, ನಾವು ಹೇಳಿದ ಕೆಲ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಬದಲಾಯಿಸಬೇಕು, ಶಾಸಕರನ್ನು ನಿರ್ಲಕ್ಷ್ಯ ಮಾಡುವ ಮುಖ್ಯಮಂತ್ರಿಗಳ ಧೋರಣೆ ಬದಲಾಗಬೇಕು ಎಂದು ಪಟ್ಟು ಹಿಡಿದು ಜನಾರ್ಧನ ರೆಡ್ಡಿ ಬಣದಿಂದ ಭಿನ್ನಮತ ಶುರುವಾಯಿತು.

ಸಚಿವ ಜಿ.ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಗೋವಾ, ಹೈದರಾಬಾದ್‌ಗೆ ತೆರಳಿದ 40ಕ್ಕೂ ಅಧಿಕ ಶಾಸಕರು ರೆಸಾರ್ಟ್‌ನಲ್ಲಿ ಬಿಡಾರ ಹೂಡಿ, ಯಡಿಯೂರಪ್ಪ ಪದಚ್ಯುತಿಗೆ ಒತ್ತಾಯಿಸಿದರು. ಎಂ.ಪಿ.ರೇಣುಕಾಚಾರ್ಯ ಆಗ ರೆಡ್ಡಿಗಳ ಬಣದಲ್ಲಿದ್ದರು.

ಒತ್ತಡಕ್ಕೆ ಮಣಿದ ಯಡಿಯೂರಪ್ಪ ಆಗ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಟ್ಟರು. ಬಳಿಗಾರ್ ಎತ್ತಂಗಡಿ ಆದರು. ಸ್ಪೀಕರ್ ಆಗಿದ್ದ ಜಗದೀಶ ಶೆಟ್ಟರ ಅವರನ್ನು ಸಂಪುಟಕ್ಕೆ ತೆಗೆದುಕೊಂಡರು. ಹೈಕಮಾಂಡ್ ಮಧ್ಯಪ್ರವೇಶದಿಂದಾಗಿ ಸಮನ್ವಯ ಸಮಿತಿ ರಚನೆಯಾಯಿತು. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗಬೇಕು ಎಂದು ಹೈಕಮಾಂಡ್ ಸೂಚನೆ ನೀಡಿತು. ಅಲ್ಲಿಗೆ ಬಿಕ್ಕಟ್ಟು ಕೊನೆಗೊಂಡಿತು.

ರೆಡ್ಡಿಗಳು ನೀಡಿದ ಪೆಟ್ಟಿನಿಂದ ಪಾರಾದ ಒಂದು ವರ್ಷಕ್ಕೆ ಅಂದರೆ 2010ರ ಅಕ್ಟೋಬರ್ 4ರಂದು ರೇಣುಕಾಚಾರ್ಯ ನೇತೃತ್ವದಲ್ಲಿ 17 ಶಾಸಕರು ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದು ಅವರ ಪದಚ್ಯುತಿಗೆ ಪಟ್ಟುಹಿಡಿದರು. ಯಡಿಯೂರಪ್ಪ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಅವರಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿರುವುದಾಗಿ ರಾಜ್ಯಪಾಲರಿಗೆ ಪತ್ರ ಬರೆದರು.

ಆಗ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ವಿಶ್ವಾಸಮತ ಯಾಚಿಸುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದರು. ಬಹುಮತ ಸಾಬೀತುಪಡಿಸುವ ಮೊದಲೇ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು, ಐವರು ಪಕ್ಷೇತರರು ಸೇರಿದಂತೆ 16 ಜನ ಶಾಸಕರನ್ನು ಅನರ್ಹಗೊಳಿಸಿದರು. ಇದರಿಂದ ಸಿಟ್ಟಿಗೆದ್ದ ಅನರ್ಹಗೊಂಡ ಐವರು ಪಕ್ಷೇತರ ಶಾಸಕರು ಸ್ಪೀಕರ್ ಕ್ರಮ ಕಾನೂನುಬಾಹಿರ ಎಂದು ಘೋಷಿಸಿ ಸದನದಲ್ಲಿ ಗದ್ದಲವನ್ನುಂಟು ಮಾಡಿದರು. ಇದರ ನಡುವೆಯೇ ಯಡಿಯೂರಪ್ಪ ಅಕ್ಟೋಬರ್ 11ರಂದು ಧ್ವನಿಮತದ ಮೂಲಕ ವಿಶ್ವಾಸಮತ ಪಡೆದರು.

ಆದರೆ ಇದು ಕಾನೂನುಬಾಹಿರ ಎಂದು ಘೋಷಿಸಿದ ರಾಜ್ಯಪಾಲರು, ರಾಷ್ಟ್ರಪತಿ ಆಡಳಿತ ಜಾರಿಗೆ ಶಿಫಾರಸು ಮಾಡಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ರಾಷ್ಟ್ರಪತಿ ಆಡಳಿತ ಜಾರಿಗೆ ಹಿಂಜರಿದ ಕೇಂದ್ರ ಸರ್ಕಾರ, ಮತ್ತೊಮ್ಮೆ ವಿಶ್ವಾಸಮತ ಯಾಚಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿ ಎಂದು ರಾಜ್ಯಪಾಲರಿಗೆ ಸಲಹೆ ಮಾಡಿತು. ಅದರಂತೆ ಅಕ್ಟೋಬರ್ 14ರಂದು ಮತ್ತೊಮ್ಮೆ ವಿಶ್ವಾಸಮತ ಯಾಚಿಸಿದರು.

ಅನರ್ಹತೆಯ ವಿರುದ್ಧ ಶಾಸಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಕೇಹರ್ ಹಾಗೂ ನ್ಯಾ. ಕುಮಾರ್ ಶಾಸಕರ ಅನರ್ಹತೆ ಕುರಿತು ವಿಭಿನ್ನ ನಿಲುವು ತಳೆದ ಹಿನ್ನೆಲೆಯಲ್ಲಿ ಅರ್ಜಿಯನ್ನು ನ್ಯಾ. ವೈ.ಜಿ. ಸಭಾಹಿತ್ ಪೀಠಕ್ಕೆ ವರ್ಗಾಯಿಸಲಾಯಿತು. ಅವರೂ ಅನರ್ಹತೆ ತೀರ್ಮಾನವನ್ನು ಎತ್ತಿ ಹಿಡಿದಿದ್ದರು. ಇದನ್ನು ವಿರೋಧಿಸಿ ಶಾಸಕರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

‘ಬಿಜೆಪಿ ಹಾಗೂ ಪಕ್ಷೇತರ ಶಾಸಕರನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ ಸ್ಪೀಕರ್ ಅಸಂಬದ್ಧ ಮತ್ತು ಪಕ್ಷಪಾತಿ ಧೋರಣೆಯಿಂದ ವರ್ತಿಸಿದ್ದಾರೆ’ ಎಂದು ಹೇಳಿ ಸ್ಪೀಕರ್‌ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಅಸಿಂಧುಗೊಳಿಸಿತ್ತು.

ರಾಜೀನಾಮೆ ನೀಡಿದ್ದ ಬಿಜೆಪಿ ಶಾಸಕರು

ಗೋಪಾಲಕೃಷ್ಣ ಬೇಳೂರು (ಸಾಗರ), ಆನಂದ್ ವಿ. ಆಸ್ನೋಟಿಕರ್ (ಕಾರವಾರ), ಬಾಲಚಂದ್ರ ಜಾರಕಿಹೊಳಿ (ಅರಭಾವಿ), ಡಾ.ಸಾರ್ವಭೌಮ ಬಗಲಿ (ಇಂಡಿ), ಭರಮಗೌಡ ಕಾಗೆ (ಕಾಗವಾಡ), ವೈ. ಸಂಪಂಗಿ (ಕೆಜಿಎಫ್), ಜಿ.ಎನ್. ನಂಜುಂಡಸ್ವಾಮಿ (ಕೊಳ್ಳೆಗಾಲ), ಎಂ.ವಿ. ನಾಗರಾಜು (ನೆಲಮಂಗಲ), ಶಿವನಗೌಡ ನಾಯಕ್ (ದೇವದುರ್ಗ), ಡಾ. ಎಚ್.ಎಸ್. ಶಂಕರಲಿಂಗೇಗೌಡ (ಚಾಮರಾಜ), ಎಸ್.ಕೆ. ಬೆಳ್ಳುಬ್ಬಿ (ಬಸವನ ಬಾಗೆವಾಡಿ)

ಪಕ್ಷೇತರರರು

ಡಿ.ಸುಧಾಕರ್ (ಹಿರಿಯೂರು),ಗೂಳಿಹಳ್ಳಿ ಶೇಖರ್ (ಹೊಸದುರ್ಗ),ಪಿ.ಎಂ.ನರೇಂದ್ರ ಸ್ವಾಮಿ (ಮಳವಳ್ಳಿ),ಶಿವರಾಜ ತಂಗಡಗಿ (ಕನಕಗಿರಿ),ವೆಂಕಟ ರಮಣಪ್ಪ (ಪಾವಗಡ)

ರೇಣುಕಾಚಾರ್ಯ ಮತ್ತು ನರಸಿಂಹ ನಾಯಕ್ ಇದೇ ತರಹದ ಪತ್ರಗಳನ್ನು ರಾಜ್ಯಪಾಲರಿಗೆ ಬರೆದಿದ್ದರು. ಆದರೆ, ಅವರು ನಿಲುವು ಬದಲಿಸಿದ ಹಿನ್ನೆಲೆಯಲ್ಲಿ ಅವರ ಸದಸ್ಯತ್ವ ಉಳಿದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT