ವಾಷಿಂಗ್ಟನ್: ಭಾರತ-ಚೀನಾ ಗಡಿಯಲ್ಲಿ ಪೂರ್ವ ಲಡಾಖ್ ಭಾಗದಲ್ಲಿ ಚೀನಾದಿಂದ ಭೂ ಅತಿಕ್ರಮಣ ಯತ್ನವನ್ನು ಖಂಡಿಸಿ ಇಲ್ಲಿನ ಭಾರತ-ಅಮೆರಿಕನ್ನರ ಸಮೂಹವು ಇಲ್ಲಿನ ಚೀನಾ ರಾಯಭಾರ ಕಚೇರಿಯ ಎದುರು ಭಾನುವಾರ ಶಾಂತಿಯುತಪ್ರತಿಭಟನೆ ನಡೆಸಿತು.
ಚೀನಾ ವಿರೋಧಿ ಭಿತ್ತಿಪತ್ರಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಚೀನಾದ ವಿರುದ್ಧ ಘೋಷಣೆಗಳನ್ನು ಕೂಗಿದರು. ಚೀನಾ ಮೂಲದ ಸೋಂಕು ವಿಶ್ವದಾದ್ಯಂತ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದ್ದು, ಆರ್ಥಿಕತೆಯನ್ನು ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು.
ಸಮೂಹದ ಕಾರ್ಯಕರ್ತ ಮನೋಜ್ ಶ್ರೀನಿಲಯಂ ಅವರು, ಚೀನಾದಿಂದ ಭೂಭಾಗ ಅತಿಕ್ರಮಣ, ಭಾರತೀಯ ಯೋಧರ ಹತ್ಯೆ ಕೃತ್ಯಗಳನ್ನು ನಾವು ಖಂಡಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು. ಹಲವು ದಶಕಗಳಿಂದ ಚೀನಾ ಭಾರತ, ಇತರೆ ರಾಷ್ಟ್ರಗಳ ಜೊತೆಗೆ ತಗಾದೆ ತೆಗೆಯುತ್ತಿದೆ ಎಂದು ಮತ್ತೊಬ್ಬ ಕಾರ್ಯಕರ್ತ ಮಹೀಂದ್ರಾ ಸಪಾ ಹೇಳಿದರು.
ಭಾರತೀಯ ಅಮೆರಿಕನ್ನರ ಸಮೂಹದ ಮೆರ್ರಿಲ್ಯಾಂಡ್, ವರ್ಜಿನಿಯಾ, ವಾಷಿಂಗ್ಟನ್ ಡಿ.ಸಿ. ಭಾಗದ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಗಳ ಸದಸ್ಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.