ಬೆಂಗಳೂರು: ಏಪ್ರಿಲ್ 5ರಂದು ಎಲ್ಲರೂ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ ರಾತ್ರಿ 9 ಗಂಟೆಗೆ ಸರಿಯಾಗಿ, ಒಂಬತ್ತು ನಿಮಿಷಗಳು ದೀಪ, ಮೇಣದ ಬತ್ತಿ, ಟಾರ್ಚ್ ಅಥವಾ ಮೊಬೈಲ್ ಫ್ಲ್ಯಾಶ್ಲೈಟ್ ಬೆಳಗುವಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೊ ಸಂದೇಶದ ಮೂಲಕ ಕರೆ ನೀಡಿದ್ದಾರೆ. ಕೊರೊನಾ ವೈರಸ್ ವಿರುದ್ಧ ದೇಶದ ಒಗ್ಗಟ್ಟಿನ ಹೋರಾಟವನ್ನು ಪ್ರತಿಬಿಂಬಿಸುವ ಪ್ರಯತ್ನವಾಗಿ ಈ ಆಚರಣೆ ನಡೆಸುವಂತೆ ಕೇಳಲಾಗಿದೆ. ಆದರೆ, ಮೋದಿ ಸಂದೇಶಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಗಳ ಪಟಾಕಿಗಳು ಸದ್ದು ಮಾಡುತ್ತಿವೆ.
ನೆಟಿಜನ್ನರಿಗೆ ಪ್ರಧಾನಿ ನೀಡಿರುವ ಸಂದೇಶ ನಗೆಗಡಲಲ್ಲಿ ತೇಲಿಸುವ ಮೀಮ್ಗಳ ಸೃಷ್ಟಿಗೆ ಸ್ಫೂರ್ತಿ ನೀಡಿದಂತೆ ತೋರುತ್ತಿದೆ. ಈಗಾಗಲೇ ಟ್ವಿಟರ್ನಲ್ಲಿ ಮೋದಿ ಸಂದೇಶಕ್ಕೆ ಸಂಬಂಧಿಸಿದಂತೆ ಹಲವು ಹ್ಯಾಷ್ಟ್ಯಾಗ್ಗಳು ಟ್ರೆಂಡಿನ್ನಲ್ಲಿವೆ. #9Baje9Minute,#PMModi,#diyajalao, #Diwali, #ModiVideoMessag, ಇನ್ನೂ ಹಲವು ಹ್ಯಾಷ್ಟ್ಯಾಗ್ಗಳನ್ನು ಬಳಸಿ ದೀಪ ಬೆಳಗುವ ಬಗ್ಗೆ ಸಂದೇಶಗಳನ್ನು ಪ್ರಕಟಿಸಿಕೊಳ್ಳುತ್ತಿದ್ದಾರೆ.
'ಈ ಬಾರಿ ದೇಶದಲ್ಲಿ 6 ತಿಂಗಳು ಮುಂಚಿತವಾಗಿಯೇ ದೀಪಾವಳಿ ಆಚರಿಸಲಾಗುತ್ತಿದೆ. ಎಲ್ಲರೂ ಏಪ್ರಿಲ್ 5ರಂದು ದೀಪ ಬೆಳಗಿಸಿ', 'ಏಪ್ರಿಲ್ 6ರಂದು ಹುಡುಗಿಯ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ ಡಿಪಿಗಳು ಹೇಗಿರಬಹುದು?', 'ಏಪ್ರಿಲ್ ರಂದೇ ಆಯ್ಕೆ ಮಾಡಿಕೊಳ್ಳಲು ಏನು ಕಾರಣ, 9 ಗಂಟೆಯೇ ಏಕೆ, ಏಕೆ 9 ನಿಮಿಷ ಮಾತ್ರ ದೀಪ ಹಚ್ಚಬೇಕು...? ಇವುಗಳ ಬಗ್ಗೆ ವಾಟ್ಸ್ಆ್ಯಪ್ ಥಿಯರಿಗಳು ಆಗಲೇ ಶುರುವಾಗಿವೆ', 'ಕೊರೊನಾ ವಿರುದ್ಧ ಭಾರತದ ಅತ್ಯುತ್ತಮ ಅಸ್ತ್ರಕ್ಕೆ ಪ್ರಧಾನಿ ಚಾಲನೆ ನೀಡಿದ್ದಾರೆ' ಎಂದೆಲ್ಲ ಹಲವರು ವ್ಯಂಗ್ಯವಾಡಿದ್ದಾರೆ. ಇನ್ನೂ ಕೆಲವು ಒಗ್ಗಟ್ಟು ಪ್ರದರ್ಶನದ ಸೂಕ್ತ ದಾರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಇನ್ನೂ ಹಲವು ವಲಸಿಗರು ಸಂಕಷ್ಟದಲ್ಲಿದ್ದಾರೆ, ಸೋಂಕು ಪ್ರಕರಣಗಳು ಹೆಚ್ಚುತ್ತಿವೆ, ಸೂಕ್ತ ಮದ್ದು ಅಭಿವೃದ್ಧಿಯಾಗಿಲ್ಲ, ಪರಿಹಾರ ಕಾರ್ಯಗಳೇನು ಎಂಬುದರ ಕುರಿತು ಯೋಚಿಸುವ ಬದಲು ಇದೆಂಥ ಹುಚ್ಚಾಟ,..' ಎಂದೂ ಟೀಕೆಯೂ ವ್ಯಕ್ತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.