ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೊಂದಿಗಿರಲಿ ಭಾವನಾತ್ಮಕ ಬೆಸುಗೆ

Published 17 ನವೆಂಬರ್ 2023, 23:30 IST
Last Updated 17 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಗ್ರಾಮೀಣ ಪ್ರದೇಶವಿರಲಿ, ನಗರವಿರಲಿ ಆಧುನಿಕ ಕಾಲದ ಪೋಷಕರ ಸವಾಲುಗಳು ಹಲವು. ಪುಟ್ಟ ಮಗುವಿನಿಂದ ಹಿಡಿದು ಶಾಲೆಗೆ ಹೋಗುವ ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಬಹುತೇಕ ಪೋಷಕರದ್ದು. ಸಮಯದ ಅಭಾವ, ದುಡಿಮೆ, ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವಿಕೆಯ ಜತೆಗೇ ಮಕ್ಕಳ ದೈಹಿಕ–ಮಾನಸಿಕ ಬೆಳವಣಿಗೆಯತ್ತ ಗಮನ ನೀಡಬೇಕಾದ್ದು ಅಗತ್ಯ. ಗ್ಯಾಜೆಟ್‌ಗಳ ನಡುವೆ ಸದ್ದಿಲ್ಲದೆ ಕಳೆದುಹೋಗುತ್ತಿರುವ ಪೋಷಕ– ಮಕ್ಕಳ ಭಾವನಾತ್ಮಕ ಸಂಬಂಧ ಭವಿಷ್ಯದಲ್ಲಿ ಅಪಾಯಕಾರಿಯಾಗಬಲ್ಲದು. ಮಕ್ಕಳ ಬೆಳವಣಿಗೆಯ ಆರಂಭಿಕ ಹಂತದಲ್ಲೇ ಇವೆಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿದಲ್ಲಿ ಭಾವಿ ಪ್ರಜೆಗಳಾಗುವ ಮಕ್ಕಳ ಭವಿಷ್ಯವೂ ಆರೋಗ್ಯಕರವಾಗಿರಬಲ್ಲದು. ಆಧುನಿಕ ಪೋಷಕತ್ವದ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಕೆಲ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ.

ಹೊಂದಾಣಿಕೆ

ಮಗುವಿನ ಮೊದಲ ಎರಡ್ಮೂರು ವರ್ಷ ಅಮೂಲ್ಯವಾದದ್ದು. ಇದು ಪೋಷಕರ ಜತೆಗೆ ಮಗು ಅನ್ಯೋನ್ಯತೆ ಬೆಳೆಸಿಕೊಳ್ಳುವ ಸಮಯ. ಹಾಗಾಗಿ, ಪೋಷಕರಲ್ಲಿ ಒಬ್ಬರಾದರೂ ಕಡ್ಡಾಯವಾಗಿ ಮಗುವಿಗೆ ಪೂರ್ಣ ಸಮಯ ಮೀಸಲಿಡುವುದು ಅಗತ್ಯ. ಉದ್ಯೋಗಸ್ಥ ಪೋಷಕರಲ್ಲಿ ಇಬ್ಬರಲ್ಲಿ ಒಬ್ಬರಾದರೂ ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಈ ಹಂತವು ಮಗುವಿಗೆ ತಂದೆ–ತಾಯಿಯ ಜೊತೆಗೆ ಭಾವನಾತ್ಮಕ ಸಂಬಂಧ ಬೆಸೆಯುವ ಹಂತ. ಹಾಗಾಗಿ, ಮೂರು ವರ್ಷಕ್ಕಿಂತ ಚಿಕ್ಕ ಮಗುವನ್ನು ಕ್ರಶ್‌ನಲ್ಲಿ ಬಿಡುವುದು ಸರಿಯಲ್ಲ. ಹಾಗಾಗಿ, ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರು ಕಡಿಮೆ ವರ್ಕ್‌ಲೋಡ್ ಇರುವ ಇಲ್ಲವೇ ಪಾರ್ಟ್ ಟೈಂ ಕೆಲಸ ಮಾಡಬಹುದು ಎನ್ನುತ್ತಾರೆ ‘ಮನೋಸಂವಾದ’ದ ಮಾನಸಿಕ ತಜ್ಞ ಅಕ್ಷರ ದಾಮ್ಲೆ.

ಅಜ್ಜ–ಅಜ್ಜಿಯೇ ಅಪ್ಪ–ಅಮ್ಮ!

ಅಪ್ಪ–ಅಮ್ಮ ಇಬ್ಬರೂ ಹೊರಗೆ ದುಡಿಯುವವರಾದರೆ ಎಷ್ಟೋ ಮನೆಗಳಲ್ಲಿ ಮಕ್ಕಳು ಅಜ್ಜ–ಅಜ್ಜಿಯರ ಆರೈಕೆಯಲ್ಲಿ ಬೆಳೆಯುತ್ತವೆ. ಈ ವೇಳೆ ಹೆತ್ತವರೊಂದಿಗೆ ಭಾವನಾತ್ಮಕವಾಗಿ ಬೆರೆಯದ ಮಕ್ಕಳು ಅಜ್ಜ– ಅಜ್ಜಿಯರನ್ನೇ ಅಪ್ಪ–ಅಮ್ಮ ಎಂದುಕೊಳ್ಳುವುದುಂಟು. ಹೆತ್ತವರೊಂದಿಗೆ ಸಕಾಲಕ್ಕೆ ಮೈತ್ರಿ ಅಥವಾ ಸಂಬಂಧ ಬೆಳೆಯದಿದ್ದರೆ ಈ ಸಮಸ್ಯೆ ಉಂಟಾಗುತ್ತದೆ. ಮಕ್ಕಳು ದೊಡ್ಡವರಾದ ಮೇಲೆ ಅಪ್ಪ–ಅಮ್ಮನ ಅಪರಿಚಿತನವನ್ನು ಸಹಿಸಿಕೊಳ್ಳಲಾಗದೇ ಕೋಪ, ಹತಾಶೆಯ ಸ್ಥಿತಿ ತಲುಪಬಹುದು. ಮಕ್ಕಳು ತಮ್ಮ ಮನಸಿನ ಭಾವನೆಗಳನ್ನು ಹಂಚಿಕೊಳ್ಳಲಾಗದೇ ಹೆತ್ತವರೊಂದಿಗೆ ಪರಿಚಯವೇ ಇಲ್ಲದಂತೆ ವರ್ತಿಸಬಹುದು.

ಕೇಳಿದ್ದನ್ನೆಲ್ಲಾ ಕೊಡಿಸದಿರಿ

ಕೆಲ ಹೆತ್ತವರು ಮಕ್ಕಳನ್ನು ಕ್ರಶ್ ಇಲ್ಲವೇ ಕಿಂಡರ್ ಗಾರ್ಡನ್‌ನಲ್ಲಿ ಬಿಟ್ಟು ಹೋದಾಗ ತಮ್ಮ ಬಗ್ಗೆಯೇ ಗಿಲ್ಟ್‌ ಮಾಡಿಕೊಳ್ಳುತ್ತಾರೆ. ಆಗ ‘ನಾವು ಭಾವನಾತ್ಮಕವಾಗಿ ಮಗುವಿನೊಂದಿಗೆ ಇಲ್ಲ ಕನಿಷ್ಠ ಮೆಟಿರಿಯಲಿಸ್ಟ್‌ ಆಗಿ ಮಗು ಕೇಳಿದ್ದನ್ನಾದರೂ ಕೊಡಿಸೋಣ’ ಎಂದು ಭಾವಿಸುತ್ತಾರೆ. ಇನ್ನು ಕೆಲವರು ‘ನಮಗೆ ಇಂಥದ್ದು ಸಿಕ್ಕಿಲ್ಲ ನಮ್ಮ ಮಗುವಿಗಾದರೂ ಸಿಗಲಿ’ ಎಂದು ಮಗು ಕೇಳಿದ್ದನ್ನೆಲ್ಲಾ ಕೊಡಿಸುತ್ತಾ ಹೋಗುತ್ತಾರೆ. ಆದರೆ, ಇದು ಮಗುವಿನಲ್ಲಿ ಹೆತ್ತವರು ಕೇಳಿದ್ದನ್ನೆಲ್ಲಾ ಕೊಡಿಸುತ್ತಾರೆ ಎನ್ನುವ ಒಂದು ರೀತಿಯ ಸಲೀಸು ಭಾವನೆ ಪೋಷಿಸುತ್ತದೆ. ಇದರಿಂದ ಮಗುವಿನಲ್ಲಿ ಕಷ್ಟಪಟ್ಟು ಗಳಿಸುವ ಪ್ರವೃತ್ತಿಯೇ ಬೆಳೆಯುವುದಿಲ್ಲ. ಹೆತ್ತವರು ಇರುವುದೇ ಕೊಡಿಸಲಿಕ್ಕೆ ಎನ್ನುವ ಭಾವವೂ ಬೆಳೆಯುತ್ತದೆ. ಮಗು ಕೇಳಿದ ವಸ್ತು ಅದಕ್ಕೆ ನಿಜವಾಗಿಯೂ ಅಗತ್ಯವಿದೆಯೇ, ನಮ್ಮ ಮಿತಿಯಲ್ಲಿ ಖರೀದಿಸಲು ಸಾಧ್ಯವೇ ಎಂಬದುನ್ನು ಹೆತ್ತವರು ಯೋಚಿಸುವುದು ಅಗತ್ಯ ಎನ್ನುತ್ತಾರೆ ಅಕ್ಷರ ದಾಮ್ಲೆ.

ಸೋಲನ್ನೂ ಪರಿಚಯಿಸಿ

ಹೆತ್ತವರು ಮಗುವಿಗೆ ಗೆಲುವಿನ ಜತೆಗೆ ಸೋಲನ್ನೂ ಪರಿಚಯಿಸುವುದು ಅಗತ್ಯ. ಅದು ವಸ್ತುಗಳ ಖರೀದಿಯಲ್ಲಾದರೂ ಇರಲಿ ಅಥವಾ ಆಟದಲ್ಲಾದರೂ ಇರಲಿ ಸೋಲು–ಗೆಲುವು ಎರಡನ್ನೂ ಪರಿಚಯಿಸಬೇಕು. ಇದರಿಂದ ಮಗು ದೊಡ್ಡದಾದ ಮೇಲೆ ಜೀವನದಲ್ಲಿ ಕಷ್ಟ ಎದುರಾದಾಗ ಅದನ್ನು ಎದುರಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ಅತಿ ಕಾಳಜಿ ಬೇಡ

ಮಗು ಚಿಕ್ಕದಿರುವಾಗ ಕನಿಷ್ಠ ಒಂದು ಮೆಟ್ಟಿಲು ಹತ್ತುವಾಗಲೂ ಹೆತ್ತವರು ಓವರ್ ಪ್ರೊಟೆಕ್ಟಿವ್‌ ಭಾವ ಪ್ರದರ್ಶಿಸುತ್ತಾರೆ. ವಾಸ್ತವವಾಗಿ ಮಗುವಿಗೆ ತನ್ನದೇ ಆದ ಸಹಜವಾಗಿ ಪ್ರಕೃತಿದತ್ತವಾಗಿ ಎತ್ತರ, ಆಳವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಅಪ್ಪ– ಅಮ್ಮ ನಿನಗೆ ಅದು ಮಾಡಲಾಗದು ಅಂತ ಹೇಳಿದರೆ ಮಗುವೂ ತನಗೆ ಇದು ಸಾಧ್ಯವಾಗುವುದಿಲ್ಲವೇನೋ ಅಂತ ಭಾವಿಸುತ್ತದೆ. ಓವರ್ ಪ್ರೊಟೆಕ್ಟಿವ್ ಪೇರೆಂಟಿಗ್‌ನ ಸಮಸ್ಯೆ ಇದು. ಇದರಿಂದಾಗಿ ಮಗುವಿಗೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ಸಿಗುವುದಿಲ್ಲ.

ಮಗು ಬಿದ್ದಾಗ ತಾನಾಗೇ ಮೇಲೇಳಲು ಕಲಿಯುತ್ತದೆ. ಇಂಥ ಸಹಜವನ್ನು ಹೆತ್ತವರು ರೂಢಿಸಿಕೊಳ್ಳಬೇಕು. ಮಗುವಿನ ಸ್ವಾತಂತ್ರ್ಯಕ್ಕೆ ಅಡ್ಡಿ ತಾರದೇ, ಮಾರ್ಗದರ್ಶನ ಮಾಡಿದರೂ ಸಾಕು.

ಬಾಲ್ಯದ ನೋವು ಜೀವನ ಪರ್ಯಂತ

ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಅದನ್ನು ತನ್ನ ಹೆತ್ತವರು ಗಮನಿಸಲಿ ಎನ್ನುವ ಭಾವ ಮಕ್ಕಳಿಗಿರುತ್ತದೆ. ಪೋಷಕರಿಂದ ಪ್ರೋತ್ಸಾಹವನ್ನೂ ನಿರೀಕ್ಷಿಸುತ್ತಾರೆ. ಅದು ದಕ್ಕದೇ ಹೋದಾಗ ಆ ನೋವು ಮಗುವಿಗೆ ಜೀವನ ಪರ್ಯಂತ ಕಾಡುವ ಸಾಧ್ಯತೆ ಇರುತ್ತದೆ. ಅಂತೆಯೇ ಕೆಲ ಹೆತ್ತವರು ತಮ್ಮ ಬಾಲ್ಯವನ್ನು ಮಗುವಿನ ಬಾಲ್ಯದೊಂದಿಗೆ ವಿನಾ ಕಾರಣ ಹೋಲಿಸಿ ಮಾತನಾಡುತ್ತಿರುತ್ತಾರೆ. ಇದು ಕೂಡಾ ಮಗುವಿನ ಮನಸಿನ ಮೇಲೆ ಪರಿಣಾಮ ಬೀರಬಹುದು. ತಮಗೆ ಸಿಗದಿರುವ ಸೌಕರ್ಯಕ್ಕಿಂತ ಸಿಕ್ಕಿರುವುದರ ಬಗ್ಗೆ ಹೇಳಿದರೆ ಮಕ್ಕಳೂ ಆಸಕ್ತಿಯಿಂದ ಕೇಳಬಲ್ಲರು.

ಸಾರ್ವಜನಿಕ ಓಡಾಟ ರೂಢಿಸಿ

ಮಕ್ಕಳಿಗೆ ಸಾರ್ವಜನಿಕ ಸಾರಿಗೆಯಲ್ಲೂ ಸಂಚರಿಸುವ ಅವಕಾಶ ಕಲ್ಪಿಸಬೇಕು. ಇದರಿಂದ ಮಕ್ಕಳು ಹೊರಜಗತ್ತು, ಜನರೊಂದಿಗೆ ಬೆರೆಯುವ ಗುಣ ಬೆಳೆಸಿಕೊಳ್ಳುತ್ತಾರೆ. ವ್ಯವಹಾರ ಕೌಶಲವನ್ನೂ ರೂಢಿಸಿಕೊಳ್ಳಲು ನೆರವಾಗುತ್ತದೆ.

ಕೆಲ ಮಕ್ಕಳು ಮನೆಯಲ್ಲಿ ಕೆಲಸ ಮಾಡುವ ತಮ್ಮ ತಾಯಂದಿರನ್ನು ನಿರ್ಲಕ್ಷ್ಯದಿಂದ ಕಾಣುತ್ತಾರೆ. ದುಡಿಯುವ ಅಪ್ಪನಿಗಷ್ಟೇ ಗೌರವ ಕೊಡುತ್ತಾರೆ. ಅಮ್ಮ ದುಡಿಯುವುದಿಲ್ಲ, ಹೆಚ್ಚು ಓದಿಲ್ಲ ಎನ್ನುವ ನೆಗಟೀವ್ ಇಮೇಜ್ ಕೂಡಾ ಬೆಳೆಸಿಕೊಂಡಿರುತ್ತಾರೆ. ಆದರೆ, ತಂದೆಯಾದವನು, ‘ತಾಯಿ ಕನಿಷ್ಠಳಲ್ಲ, ಗೃಹಿಣಿಯ ಕೆಲಸವೂ ತನ್ನಷ್ಟೇ ಮಹತ್ವದ್ದು’ ಎಂದು ಆಕೆಯ ಮಾನ್ಯತೆ ಎತ್ತಿಹಿಡಿಯಬೇಕು. ಇದರಿಂದ ಮಕ್ಕಳು ಅಪ್ಪ–ಅಮ್ಮ ಇಬ್ಬರನ್ನೂ ಸಮಾನಭಾವದಿಂದ ಕಾಣುವಂತಾಗುತ್ತದೆ.

ತಂದೆ–ತಾಯಿಯನ್ನು ಹೆಸರು ಹಿಡಿದು ಕರೆಯುವ ಅಭ್ಯಾಸ ಕೆಲ ಮಕ್ಕಳಿಗಿರುತ್ತದೆ. ಪೋಷಕರೂ ಇದನ್ನು ಸ್ನೇಹದ ಹೆಸರಿನಲ್ಲಿ ಸಮರ್ಥಿಸಿಕೊಳ್ಳಬಹುದು. ಆದರೆ, ಅದರಾಚೆಗೂ ಮಕ್ಕಳ ಮೇಲಿನ ಅಥಾರಿಟಿಯ ಹಕ್ಕನ್ನು ಹೆತ್ತವರು ಪ್ರಜ್ಞಾಪೂರ್ವಕವಾಗಿ ಉಳಿಸಿಕೊಳ್ಳಬೇಕು. ಒಂದು ಹಂತದ ಅಂತರವನ್ನು ಉಳಿಸಿ ಕೊಳ್ಳಬೇಕು. ಹೆತ್ತವರು ಎಷ್ಟೇ ಬ್ಯುಸಿಯಾಗಿದ್ದರೂ ಮಕ್ಕಳ ಬಗ್ಗೆ ನಿಗಾ ಇಡುವುದೊಳಿತು. ಇದು ಮಕ್ಕಳು ಕೆಟ್ಟ ಚಟಗಳಿಗೆ ದಾಸರಾಗುವುದನ್ನೂ ತಡೆಯಲು ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT