ಕಾಬೂಲ್: ತಾಲಿಬಾನ್ ಅತಿಕ್ರಮಣದ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ಈಶಾನ್ಯ ಅಫ್ಗಾನಿಸ್ತಾನದ ಪಂಜ್ಷಿರ್ ಕಣಿವೆಯಲ್ಲಿ ಸಿದ್ಧತೆ ನಡೆದಿದೆ. ಪಂಜ್ಷಿರ್ ಕಣಿವೆ ಪ್ರಾಂತವು ಇನ್ನೂ ತಾಲಿಬಾನಿಗಳ ಕೈಶವಶವಾಗಿಲ್ಲ. ಹೀಗಾಗಿತಾಲಿಬಾನ್ ಅತಿಕ್ರಮಣವನ್ನು ವಿರೋಧಿಸಿದ ರಾಜಕೀಯ ಗುಂಪುಗಳ ನಾಯಕರು ಈ ಕಣಿವೆ ಪ್ರಾಂತದಲ್ಲಿ ಒಟ್ಟಾಗಿದ್ದಾರೆ.
ಪತನವಾದ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿದ್ದ ಅಮರುಲ್ಲಾ ಸಾಲಿಹ್ ಅವರು ತಮ್ಮನ್ನು ತಾವು ಪ್ರಭಾರಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ. ತಾಲಿಬಾನಿಗಳ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ತಾಲಿಬಾನ್ ವಿರೋಧಿಗಳನ್ನು ಒಗ್ಗೂಡಿಸುತ್ತಿದ್ದಾರೆ.
90ರ ದಶಕದಲ್ಲಿ ತಾಲಿಬಾನ್ ವಿರೋಧಿ ಹೋರಾಟಗಾರರ ಕೇಂದ್ರವಾಗಿದ್ದ ಪಂಜ್ಷಿರ್ ಕಣಿವೆ ಪ್ರಾಂತದಲ್ಲಿ ಹೋರಾಟಕ್ಕೆ ಸಿದ್ಧತೆ ನಡೆದಿದೆ. ಅಂದು ತಾಲಿಬಾನ್ ವಿರುದ್ಧ ನಾಗರಿಕರನ್ನು ಸಂಘಟಿಸಿದ್ದ ಅಹ್ಮದ್ ಶಾ ಮಸೂದ್ ಅವರ ಪುತ್ರ, ಅಹ್ಮದ್ ಮಸೂದ್ ಈಗ ತಾಲಿಬಾನಿಗಳ ವಿರುದ್ಧ ಹೋರಾಟ ಸಂಘಟಿಸುತ್ತಿದ್ದಾರೆ.
‘ನನ್ನ ಅಪ್ಪನ ಹೋರಾಟದ ಹಾದಿಯಲ್ಲೇ ನಾನೂ ನಡೆಯುತ್ತೇನೆ. ಆದರೆ ಈ ಹೋರಾಟಕ್ಕೆ ನಮಗೆ ಹೆಚ್ಚಿನ ಶಸ್ತ್ರಗಳು ಮತ್ತು ಮದ್ದುಗುಂಡುಗಳ ಅವಶ್ಯಕತೆ ಇದೆ’ ಎಂದು ಅಹ್ಮದ್ ಹೇಳಿದ್ದಾರೆ. ಶಸ್ತ್ರಾಸ್ತ್ರ ಪೂರೈಸುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಅವರು ಮನವಿ ಮಾಡಿದ್ದಾರೆ.