ಲಾಹೋರ್ (ಪಿಟಿಐ): ‘ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ ತೆಹ್ರೀಕ್ ಇ–ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರ ಮೇಲೆ ನವೆಂಬರ್ 3 ರಂದು ನಡೆದಿದ್ದ ಹತ್ಯೆ ಯತ್ನವು ಪೂರ್ವ ಯೋಜಿತ ಪಿತೂರಿ’ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಜಂಟಿ ತನಿಖಾ ತಂಡ (ಜೆಐಟಿ) ತಿಳಿಸಿದೆ.
ವಜೀರಾಬಾದ್ನಲ್ಲಿ ನಡೆದಿದ್ದ ರ್ಯಾಲಿ ವೇಳೆ ಇಬ್ಬರು ದುಷ್ಕರ್ಮಿಗಳು ಇಮ್ರಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆಗ ಅವರ ಬಲಗಾಲಿಗೆ ಗುಂಡು ತಗುಲಿತ್ತು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಜಾಬ್ ಪ್ರಾಂತ್ಯದ ಗೃಹ ಸಚಿವ ಓಮರ್ ಸರ್ಫರಾಜ್ ಚೀಮಾ, ‘ಇಮ್ರಾನ್ ಮೇಲಿನ ದಾಳಿಯು ಸಂಘಟಿತ ಹಾಗೂ ಪೂರ್ವ ಯೋಜಿತ ಕೃತ್ಯ. ದಾಳಿಕೋರರು ಇಮ್ರಾನ್ ಅವರನ್ನು ಹತ್ಯೆಮಾಡುವ ಉದ್ದೇಶ ಹೊಂದಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದಿದ್ದಾರೆ.
‘ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ನವೀದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ಆತ ಸದ್ಯ ಜೆಐಟಿ ವಶದಲ್ಲಿದ್ದಾನೆ. ತನಿಖಾ ತಂಡವು ಆತನನ್ನು ವಿಚಾರಣೆಗೆ ಒಳಪಡಿಸಿದೆ. ಆತ ತರಬೇತಿ ಹೊಂದಿದ ಹಂತಕ ಎಂಬುದು ಗೊತ್ತಾಗಿದೆ. ರ್ಯಾಲಿಯಲ್ಲಿ ಭಾಗಿಯಾಗಿದ್ದವರು ಆಜಾನ್ ಸಮಯದಲ್ಲೇ ಜೋರಾಗಿ ಹಾಡು ಹಾಕಿದ್ದರಿಂದ ಸಿಟ್ಟಿಗೆದ್ದು ಇಮ್ರಾನ್ ಅವರನ್ನು ಹತ್ಯೆ ಮಾಡಲು ಮುಂದಾಗಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ’ ಎಂದು ಹೇಳಿದ್ದಾರೆ.