ಬ್ಯೂನಸ್ ಐರಿಸ್: ಭಾರತದಲ್ಲಿ ಅಭಿವೃದ್ಧಿಪಡಿಸಿ, ತಯಾರಿಸಲಾಗುತ್ತಿರುವ ‘ತೇಜಸ್’ ಯುದ್ಧ ವಿಮಾನಗಳ ಖರೀದಿಗೆ ಅರ್ಜೆಂಟೀನಾ ಆಸಕ್ತಿ ವ್ಯಕ್ತಪಡಿಸಿದೆ.
ಅರ್ಜೆಂಟೀನಾ ಪ್ರವಾಸದಲ್ಲಿರುವವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ಹಾಗೂ ಸ್ಯಾಂಟಿಯಾಗೊ ಕೆಫಿರೊ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು ಎಂದು ಸಭೆ ನಂತರ ಬಿಡುಗಡೆಯಾದ ಪ್ರಕಟಣೆ ತಿಳಿಸಿದೆ.
‘ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ತೇಜಸ್ ಯುದ್ಧ ವಿಮಾನಗಳ ಖರೀದಿಯ ಪ್ರಸ್ತಾವಕ್ಕೆ ಹೆಚ್ಚು ಮಹತ್ವ ಇರಲಿದೆ. ಭದ್ರತಾ ಪಡೆಗಳಿಂದ ತರಬೇತಿ, ಸಮರಾಭ್ಯಾಸ ಹಾಗೂ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಸಹಭಾಗಿತ್ವಕ್ಕೆ ಉಭಯ ನಾಯಕರು ಸಮ್ಮತಿಸಿದರು’.
ಅರ್ಜೆಂಟೀನಾದಲ್ಲಿ ಆಯುರ್ವೇದ ಪದ್ಧತಿಗೆ ಒಲವು ಹೆಚ್ಚುತ್ತಿದೆ. ಹೀಗಾಗಿ ದೇಶದ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯಡಿ ಆಯುರ್ವೇದಕ್ಕೆ ಮಾನ್ಯತೆ ನೀಡುವಂತೆ ಭಾರತ ಈ ಸಂದರ್ಭದಲ್ಲಿ ಮನವಿ ಮಾಡಿತು ಎಂದೂ ಪ್ರಕಟಣೆ ತಿಳಿಸಿದೆ.