ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕುರಿತು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ವೋಲ್ಕನ್ ಬೊಜ್ಕಿರ್ ನೀಡಿರುವ ಹೇಳಿಕೆಗೆ ಭಾರತ ತಿರುಗೇಟು ನೀಡಿದ್ದು, ಇಂತಹ ದಾರಿ ತಪ್ಪಿಸುವ, ಪೂರ್ವಾಗ್ರಹ ಪೀಡಿತ ಹೇಳಿಕೆಗಳು ಅವರು ಹೊಂದಿರುವ ಹುದ್ದೆಗೆ ಅಪಚಾರ ಮಾಡಿದಂತೆ ಎಂದು ಹೇಳಿದೆ.
ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರೊಂದಿಗೆ ಗುರುವಾರ ಇಸ್ಲಾಮಾಬಾದ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೊಜ್ಕಿರ್ ಅವರು ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಬಲವಾಗಿ ಪ್ರಸ್ತಾಪಿಸುವುದು ಪಾಕಿಸ್ತಾನದ ಕರ್ತವ್ಯ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದನ್ನು ಬಲವಾಗಿ ಖಂಡಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯವು (ಎಂಇಎ), ಬೊಜ್ಕಿರ್ ಹೇಳಿಕೆಯುಸ್ವೀಕಾರಾರ್ಹವಲ್ಲ ಮತ್ತು ಭಾರತದ ಕೇಂದ್ರಾಡಳಿತ ಪ್ರದೇಶವನ್ನು ಉಲ್ಲೇಖಿಸುವುದು ಅನಗತ್ಯ ಎಂದು ಹೇಳಿದೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷರು ತಪ್ಪು ದಾರಿಗೆಳೆಯುವ ಮತ್ತು ಪೂರ್ವಾಗ್ರಹಪೀಡಿತ ಮನಸ್ಥಿತಿಯ ಹೇಳಿಕೆಗಳು ಅವರು ಹೊಂದಿರುವ ಹುದ್ದೆಗೆ ಅಪಚಾರ ಮಾಡಿದಂತಾಗಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ ವರ್ತನೆ ನಿಜಕ್ಕೂ ವಿಷಾದನೀಯ ಮತ್ತು ಜಾಗತಿಕ ವೇದಿಕೆಯಲ್ಲಿ ಅವರ ನಿಲುವನ್ನು ಖಂಡಿತವಾಗಿಯೂ ಕಿರಿದಾಗಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆ ನೀಡಿದ್ದಾರೆ.