ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈರೂತ್ ಸ್ಫೋಟ ಪ್ರಕರಣದಲ್ಲಿ ರಾಜಕೀಯ ಬೆರಸಬೇಡಿ: ಇರಾನ್‌

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ಬಾಸ್ ಮೌಸವಿ
Last Updated 10 ಆಗಸ್ಟ್ 2020, 7:33 IST
ಅಕ್ಷರ ಗಾತ್ರ

ದುಬೈ: ಲೆಬನಾನ್‌ ರಾಜಧಾನಿ ಬೈರೂತ್‌ನಲ್ಲಿ ಸಂಭವಿಸಿದ ಭಾರಿ ಸ್ಫೋಟ ಪ್ರಕರಣದ ವಿಷಯದಲ್ಲಿ ಯಾವ ದೇಶಗಳೂ ರಾಜಕೀಯ ಬೆರಸಬಾರದು, ಪ್ರಾಮಾಣಿಕವಾಗಿ ತನಿಖೆ ನಡೆಸಲು ಸಹಕರಿಸಬೇಕು ಎಂದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ಬಾಸ್ ಮೌಸವಿ ಹೇಳಿದ್ದಾರೆ.

ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ’ಕೆಲವು ದೇಶಗಳು ತಮ್ಮ ಸ್ವಹಿತಾಸಕ್ತಿಗಾಗಿ ಈ ಪ್ರಕರಣವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿವೆ. ಆದರೆ, ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ರಾಜಕೀಯ ಬೆರೆಸಬಾರದು. ಎಲ್ಲ ರಾಷ್ಟ್ರಗಳು ಈ ಸ್ಫೋಟದ ತನಿಖೆಯನ್ನು ಎಚ್ಚರಿಕೆಯಿಂದ ನಡೆಸಲು ಅನುವು ಮಾಡಿಕೊಡಬೇಕು’ ಎಂದು ಹೇಳಿದ್ದಾರೆ.

’ಅಮೆರಿಕ, ಲೆಬನಾನ್‌ಗೆ ನೀಡುತ್ತಿರುವ ಸಹಾಯಾಸ್ತ ನೈಜವಾಗಿದ್ದರೆ, ಮೊದಲು ಲೆಬನಾನ್‌ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೊನ್‌ ಅವರು ಇತ್ತೀಚೆಗೆ ಬೇರೂತ್‌ಗೆ ಭೇಟಿ ನೀಡಿ, ಸ್ಫೋಟದಿಂದ ತೀವ್ರವಾಗಿ ಹಾನಿಗೊಳಗಾಗಿರುವ ಪ್ರದೇಶಗಳ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ಈ ವೇಳೆ ’ದಶಕಗಳಿಂದ ಇಲ್ಲಿ ನಡೆಯುತ್ತಿರುವ ಭ್ರಷ್ಟರಾಜಕೀಯವನ್ನು ಕೊನೆಗೊಳಿಸಿ’ ಎಂದು ಜನರು ಒತ್ತಾಯಿಸಿದ್ದರು. ಮ್ಯಾಕ್ರೊನ್ ಭೇಟಿ ಕುರಿತು ಕೇಳಿದ ಪ್ರಶ್ನೆಗೆ ಮೌಸವಿ, ’ಕೆಲವರು ಈ ಪ್ರಕರಣವನ್ನು ಸ್ವ ಹಿತಾಸಕ್ತಿಗಾಗಿ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT