ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ವ್ಯವಸ್ಥೆಯ ಬದಲಾವಣೆ- ಇಸ್ರೇಲ್‌ ಪ್ರಧಾನಿ ವಿರುದ್ಧ ಆಕ್ರೋಶ

Last Updated 27 ಮಾರ್ಚ್ 2023, 14:43 IST
ಅಕ್ಷರ ಗಾತ್ರ

ಜೆರುಸಲೆಂ (ಎ.ಪಿ): ‘ನ್ಯಾಯಾಂಗ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ನಿರ್ಧಾರವನ್ನು ತಕ್ಷಣದಿಂದ ಕೈಬಿಡಬೇಕು‘ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರಿಗೆ ಅಧ್ಯಕ್ಷ ಐಸಾಕ್‌ ಹೆರ್ಜೋಗ್ ಸೂಚಿಸಿದ್ದಾರೆ.

ನಿರ್ಧಾರ ಕೈಬಿಡುವಂತೆ ಈ ಮೊದಲು ಸಲಹೆ ಮಾಡಿದ್ದ ರಕ್ಷಣಾ ಸಚಿವ ಯೋವ್‌ ಗಲಾಂಟ್ ಅವರನ್ನು ಪ್ರಧಾನಿ ಸಂಪುಟದಿಂದ ವಜಾ ಮಾಡಿದ್ದರು. ಪ್ರಧಾನಿಯವರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಜನರು ಬೀದಿಗಿಳಿದು ಪ್ರತಿಭಟಿಸಿದ್ದರು. ಪ್ರತಿಭಟನೆಯು ತೀವ್ರಗೊಂಡಂತೆ ಅಧ್ಯಕ್ಷರ ಸೂಚನೆಯು ಹೊರಬಿದ್ದಿದೆ.

ಪ್ರತಿಭಟನೆ, ಧರಣಿ ಹಿನ್ನೆಲೆಯಲ್ಲಿ ಇಸ್ರೇಲ್‌ನಾದ್ಯಂತ ಗೊಂದಲದ ಸ್ಥಿತಿ ಇದೆ. ಹೀಗಾಗಿ, ನ್ಯಾಯಾಂಗ ವ್ಯವಸ್ಥೆಯನ್ನು ಬದಲಿಸುವ ಕ್ರಮಗಳನ್ನು ತಾತ್ಕಾಲಿಕವಾಗಿ ಕೈಬಿಡಬೇಕು ಎಂದು ರಕ್ಷಣಾ ಸಚಿವರು ಕೋರಿದ್ದರು. ಇದರ ಹಿಂದೆಯೇ ಅವರ ವಜಾ ಆದೇಶ ಹೊರಬಿದ್ದಿತ್ತು.

ಜನರು ಈಗಾಗಲೇ ನ್ಯಾಯಾಂಗ ವ್ಯವಸ್ಥೆ ಬದಲಿಸುವ ನಿರ್ಧಾರಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಸಚಿವರ ವಜಾ ಕ್ರಮದ ಬಳಿಕ ಆಕ್ರೋಶ ಇನ್ನಷ್ಟು ಭುಗಿಲೆದ್ದಿದೆ. ಪ್ರಧಾನಿ ನಿಲುವಿಗೆ ಉದ್ಯಮ, ಕಾನೂನು ಕ್ಷೇತ್ರ ಹಾಗೂ ಸೇನೆಯ ಪ್ರಮುಖರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ: ಪ್ರಧಾನಿ ನೇತನ್ಯಾಹು ವಿರುದ್ಧ ಸಹಸ್ರಾರು ಜನರು ಬೀದಿಗಿಳಿದಿದ್ದು, ಟೆಲ್‌ ಅವಿವ್‌ನಲ್ಲಿ ಹೆದ್ದಾರಿಯನ್ನು ಅಡ್ಡಗಟ್ಟಿದ್ದರು. ಜೆರುಸಲೆಂನಲ್ಲಿ ಪ್ರಧಾನಿ ಖಾಸಗಿ ನಿವಾಸದ ಬಳಿ ಸೇರಿದ್ದ ಗುಂಪನ್ನು ಪೊಲೀಸರು ಚದುರಿಸಿದರು.

ಟೆಲ್‌ಅವೀವ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಸಾವಿರಾರು ಜನ ಸೇರಿದ್ದು, ಇಸ್ರೇಲ್‌ನ ಧ್ವಜಗಳು ರಾರಾಜಿಸುತ್ತಿದ್ದವು. ಬೀರ್ಶೆಬಾ, ಹೈಫಾ, ಜೆರುಸಲೆಂನಲ್ಲಿಯೂ ಇಂತಹುದೇ ಚಿತ್ರವಿತ್ತು. ಪೊಲೀಸರು ಗುಂಪು ಚದುರಿಸಲು ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದರು.

ರಕ್ಷಣಾ ಸಚಿವರ ವಜಾ ಕುರಿತು ಪ್ರಧಾನಿಕಚೇರಿ ಟ್ವೀಟ್ ಮಾಡಿದೆ. ಅದರ ಹಿಂದೆಯೇ ‘ನಿರಾಕರಣೆಯ ವಿರುದ್ಧ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಿದೆ’ ಎಂದು ಪ್ರಧಾನಿ ನೇತನ್ಯಾಹು ಅವರು ಪ್ರತ್ಯೇಕವಾಗಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT