ವಿಶ್ವಸಂಸ್ಥೆ: ಅಫ್ಗಾನಿಸ್ತಾನವು ತಾಲಿಬಾನ್ ಉಗ್ರರ ಕೈವಾಶವಾಗಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರೊಂದಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಚರ್ಚೆ ನಡೆಸಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಫ್ಗನ್ ಪರಿಸ್ಥಿತಿ ಬಗ್ಗೆ ಚರ್ಚಿಸಲು ತುರ್ತು ಸಭೆ ಕರೆದಿರುವ ಹಿನ್ನೆಲೆಯಲ್ಲಿ ಜೈಶಂಕರ್ ಅವರು ಸೋಮವಾರ ನ್ಯೂಯಾರ್ಕ್ಗೆ ತೆರಳಿದ್ದರು. ಭಾರತದ ಅಧ್ಯಕ್ಷತೆಯಲ್ಲಿ ಭದ್ರತಾ ಮಂಡಳಿಯು 10 ದಿನಗಳಲ್ಲಿ ಎರಡನೇ ಬಾರಿ ಸಭೆ ಸೇರಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಜೈಶಂಕರ್, ‘ಗುಟೆರಸ್ ಅವರನ್ನು ಭೇಟಿಯಾದೆ. ಭದ್ರತಾ ಮಂಡಳಿ ಸಭೆ ಬಳಿಕ ಅಫ್ಗಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಅವರೊಂದಿಗೆ ಚರ್ಚಿಸಿದೆ’ ಎಂದು ಹೇಳಿದ್ದಾರೆ.
ಜೈ ಶಂಕರ್ ಅವರು ಎಸ್ಟೋನಿಯಾದ ವಿದೇಶಾಂಗ ವ್ಯವಹಾರಗಳ ಸಚಿವೆ ಇವಾ-ಮರಿಯಾ ಲೈಮೆಟ್ಸ್ ಅವರನ್ನೂ ಭೇಟಿಯಾದರು.
‘ಸಮುದ್ರ, ಸೈಬರ್ ಭದ್ರತೆ ಮತ್ತು ಇತರ ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಉಭಯ ರಾಷ್ಟ್ರಗಳು ಜೊತೆಯಾಗಿ ಕೆಲಸ ಮಾಡುವುದರ ಕುರಿತು ಇವಾ ಅವರೊಂದಿಗೆ ಚರ್ಚಿಸಿದೆ. ಅಫ್ಗಾನಿಸ್ತಾನದ ಪರಿಸ್ಥಿತಿ ಬಗ್ಗೆ ಉಭಯ ರಾಷ್ಟ್ರಗಳ ದೃಷ್ಟಿಕೋನವನ್ನೂ ನಾವು ಹಂಚಿಕೊಂಡೆವು’ ಎಂದು ಜೈಶಂಕರ್ ಹೇಳಿದ್ದಾರೆ.
ಜೈಶಂಕರ್ ಆಗಸ್ಟ್ 19ರಂದು ಭಯೋತ್ಪಾದನೆ ನಿಗ್ರಹದ ಕುರಿತು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.