ಢಾಕಾ: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ದುರ್ಗಾ ಪೂಜೆಯ ವೇಳೆ ಹಿಂದೂಗಳ ಮೇಲೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.
ಇಕ್ಬಾಲ್ ಹುಸ್ಸೇನ್(35) ಬಂಧಿತ ವ್ಯಕ್ತಿ. ಈತನನ್ನು ಗುರುವಾರ ರಾತ್ರಿ ಕಾಕ್ಸ್ ಬಜಾರ್ ಬೀಚ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೊಮಿಲ್ಲಾ ಜಿಲ್ಲೆಯಲ್ಲಿ ನಡೆದ ದುರ್ಗಾ ಪೂಜೆ ವೇಳೆ ಪೆಂಡಾಲ್ನಲ್ಲಿದ್ದ ಹನುಮಂತನ ಮೂರ್ತಿಯ ಪಾದದ ಬಳಿಮುಸ್ಲಿಮರ ಪವಿತ್ರ ಗ್ರಂಥ ಕುರ್–ಆನ್ ಪ್ರತಿ ಇರಿಸಿದ ಆರೋಪಿಗಳಲ್ಲಿ ಬಂಧಿತ ಇಕ್ಬಾಲ್ ಕೂಡ ಒಬ್ಬ ಎಂದು ಶಂಕಿಸಲಾಗಿದೆ ಎಂದು ಬಿಡಿನ್ಯೂಸ್24.ಕಾಮ್ ವರದಿ ಮಾಡಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಫಿಕ್ ಉಲ್ಲಾ ಇಸ್ಲಾಮ್ ಅವರು ಇಕ್ಬಾಲ್ ಹುಸ್ಸೇನ್ನನ್ನು ಗುರುವಾರ ರಾತ್ರಿ 10 ಗಂಟೆ ಸಮಯದಲ್ಲಿ ಕಾಕ್ಸ್ ಬಜಾರ್ ಬೀಚ್ ಪ್ರದೇಶದಲ್ಲಿ ಬಂದಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಈ ವಿಷಯವನ್ನು ಗೃಹ ಸಚಿವ ಅಸಾದುಝಮನ್ ಖಾನ್ ಕಮಲ್ ಕೂಡ ಖಚಿತಪಡಿಸಿದ್ದಾರೆ.