ಲಂಡನ್ :ಬ್ರಿಟನ್ ಮತ್ತು ಭಾರತದ ನಡುವಿನ ಬಾಂಧವ್ಯವನ್ನು ಪರಸ್ಪರ ವಿನಿಮಯದ ಮತ್ತು ಉಭಯತ್ರರಿಗೂ ಹೆಚ್ಚು ಅನುಕೂಲವಾಗುವಂತೆ ಬದಲಿಸುವ ಬಯಕೆ ಇದೆ. ಇದರಿಂದ ಬ್ರಿಟನ್ ವಿದ್ಯಾರ್ಥಿಗಳಿಗೆ ಮತ್ತು ಕಂಪನಿಗಳಿಗೂ ಸುಲಭವಾಗಿ ಭಾರತಕ್ಕೆ ಪ್ರವೇಶ ಸಿಗಲಿದೆ ಎಂದುಬ್ರಿಟನ್ನ ಮೊದಲ ಭಾರತೀಯ ಮೂಲದ, ಹಿಂದೂ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
ಇತ್ತೀಚೆಗೆ ಉತ್ತರ ಲಂಡನ್ನಲ್ಲಿ ಭಾರತೀಯ ಕನ್ಸರ್ವೇಟಿವ್ ಸ್ನೇಹ ಬಳಗ (ಸಿಎಫ್ಐಎನ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಮೂಲದಕನ್ಸರ್ವೇಟಿವ್ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದ ರಿಷಿ ಸುನಕ್, ಸದ್ಯ ದೇಶವು ಹಣದುಬ್ಬರದ ಕಷ್ಟಕರ ಸ್ಥಿತಿಯಲ್ಲಿದೆ. ಸುರಕ್ಷಿತ ಮತ್ತು ಉತ್ತಮವಾದ ಬ್ರಿಟನ್ ಕಟ್ಟುವ ಸವಾಲು ನಮ್ಮ ಮುಂದಿದೆ ಎಂದು ಹೇಳಿದ್ದರು.
ಸಿಎಫ್ಐಎನ್ನ ಸಹ ಅಧ್ಯಕ್ಷೆ ರೀನಾ ರೇಂಜರ್ ಅವರುಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧದ ಕುರಿತು ಕೇಳಿದ ಪ್ರಶ್ನೆಗೆ ‘ಭಾರತ– ಬ್ರಿಟನ್ ಬಾಂಧವ್ಯ ತುಂಬಾ ಮುಖ್ಯಾವಾದುದು ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಾವು ನಮ್ಮ ಎರಡು ದೇಶಗಳ ನಡುವಿನ ಜೀವಂತ ಸೇತುವೆಯ ಪ್ರತಿನಿಧಿಗಳು’ ಎಂದು ರಿಷಿ ಹೇಳಿದ್ದರು.
ಇದಕ್ಕೂ ಮೊದಲು ರಿಷಿ ಅವರು ಸಭಿಕರನ್ನು ಉದ್ದೇಶಿಸಿ‘ನಮಸ್ತೆ, ಸಲಾಂ, ಖೇಮ್ ಚೋ ಅಂಡ್ ಕಿಡ್ಡಾ’ ಎಂದು ಸ್ವಾಗತಿಸಿ, ನಂತರ ಹಿಂದಿಯಲ್ಲಿ ‘ಆಪ್ ಸಬ್ ಮೇರೆ ಪರಿವಾರ್ ಹೋ’ (ನೀವೆಲ್ಲರೂ ನನ್ನ ಕುಟುಂಬ) ಎಂದು ಹೇಳುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದರು.
ಸೌತ್ಹ್ಯಾಂಪ್ಟನ್ನಲ್ಲಿ ಜನಿಸಿದ ರಿಷಿ ಸುನಕ್ ಅಪ್ಪಟ ಹಿಂದೂ. ಸದಾ ದೇವಸ್ಥಾನಕ್ಕೆ ಹೋಗುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ತಮ್ಮ ಇಬ್ಬರು ಪುತ್ರಿಯರಾದ ಕೃಷ್ಣಾ ಮತ್ತು ಅನೂಷ್ಕಾ ಅವರನ್ನು ಭಾರತೀಯ ಸಂಸ್ಕೃತಿ ಅನುಸಾರ ಬೆಳೆಸುತ್ತಿದ್ದಾರೆ. ಪುತ್ರಿ ಅನೂಷ್ಕಾ ತನ್ನ ಸಹಪಾಠಿಗಳ ಜತೆಗೆ ವೆಸ್ಟ್ಮಿನಿಸ್ಟರ್ ಅಬೆಯಲ್ಲಿ ಜೂನ್ನಲ್ಲಿ ನಡೆದ ರಾಣಿಯ ಅಮೃತ ಮಹೋತ್ಸವದ ಆಚರಣೆ ಸಮಾರಂಭದಲ್ಲಿ ಕೂಚುಪುಡಿ ನೃತ್ಯ ಪ್ರದರ್ಶಿಸಿದ್ದರು. ಈ ವಿಡಿಯೊ ಅನ್ನು ಇತ್ತೀಚೆಗಷ್ಟೇ ಸುನಕ್ ಹಂಚಿಕೊಂಡಿದ್ದರು.