ಕೊಲಂಬೊ: ವಿರೋಧ ಪಕ್ಷಗಳನ್ನೂ ಸೇರಿಸಿಕೊಂಡು ಹೊಸ ಸರ್ಕಾರ ರಚಿಸುವ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಪ್ರಸ್ತಾವವನ್ನು ವಿರೋಧ ಪಕ್ಷಗಳು ತಿರಸ್ಕರಿಸಿವೆ. ಎಲ್ಲ ಪಕ್ಷಗಳನ್ನು ಒಳಗೊಂಡ ಒಗ್ಗಟ್ಟಿನ ಸರ್ಕಾರ ರಚನೆಯ ಪ್ರಸ್ತಾವವೇ ಅಸಂಬದ್ಧ. ಅಂತಹ ಸರ್ಕಾರ ರಚನೆಯ ಪ್ರಯತ್ನದ ಬದಲು ರಾಜಪಕ್ಸ ಅವರು ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ದಿನಕಳೆದಂತೆ ತೀವ್ರಗೊಳ್ಳುತ್ತಿದೆ. ಆಹಾರ, ಇಂಧನ, ಔಷಧ ಕೊರತೆ ತೀವ್ರವಾಗಿದೆ. ರಾಜಪಕ್ಸ ಅವರು ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಹಾಗೂ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
‘ರಾಷ್ಟ್ರೀಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಎಲ್ಲರೂ ಕೈಜೋಡಿಸಬೇಕು’ ಎಂದು ರಾಜಪಕ್ಸ ಅವರು ಹೇಳಿದ್ದಾರೆ. ಶ್ರೀಲಂಕಾ ಸಚಿವ ಸಂಪುಟದ ಎಲ್ಲ ಸಚಿವರು ಭಾನುವಾರ ತಡರಾತ್ರಿ ರಾಜೀನಾಮೆ ನೀಡಿದ್ದರು. ಎಲ್ಲರನ್ನೂ ಒಳಗೊಂಡ ರಾಷ್ಟ್ರೀಯ ಸರ್ಕಾರ ರಚನೆಗೆ ಅವಕಾಶ ಒದಗಿಸಲು ಹೀಗೆ ಮಾಡಲಾಗಿತ್ತು.
*ರಾಜೀನಾಮೆ ಕೊಟ್ಟ ಸಚಿವರ ಪೈಕಿ ನಾಲ್ವರನ್ನು ರಾಜಪಕ್ಸ ಅವರು ಮರುನೇಮಕ ಮಾಡಿಕೊಂಡಿದ್ದಾರೆ. ಹಣಕಾಸು ಸಚಿವರಾಗಿದ್ದ ಸಹೋದರ ಬೇಸಿಲ್ ರಾಜಪಕ್ಸ ಅವರ ಸ್ಥಾನಕ್ಕೆ ನ್ಯಾಯಾಂಗದ ಮಾಜಿ ಮುಖ್ಯಸ್ಥರನ್ನು ನೇಮಿಸಲಾಗಿದೆ
*ಶ್ರೀಲಂಕಾದ ಷೇರು ಮಾರುಕಟ್ಟೆಯು ಸೋಮವಾರ ಶೇ 5ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ. ಹಾಗಾಗಿ, ದಿನದ ಮಟ್ಟಿಗೆ ವಹಿವಾಟು ಸ್ಥಗಿತಗೊಂಡಿದೆ
*ರಾಜಪಕ್ಸ ನೇತೃತ್ವದ ಮೈತ್ರಿಕೂಟದ ಕಿರಿಯ ಪಾಲುದಾರ ಪಕ್ಷವೊಂದು ಮೈತ್ರಿಕೂಟ ತೊರೆಯುವುದಾಗಿ ಸೋಮವಾರ ಹೇಳಿದೆ. ಇದರಿಂದ ರಾಜಪಕ್ಸ ಅವರು ಸಂಸತ್ತಿನಲ್ಲಿ ಇನ್ನಷ್ಟು ದುರ್ಬಲರಾಗುತ್ತಾರೆ