ಕೊಲಂಬೊ: ನೆರೆಯ ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳು ಒಪ್ಪುವ ವ್ಯಕ್ತಿಯನ್ನು ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡುವಂತೆ ಸ್ಪೀಕರ್ ಮಹಿಂದ ಯಪ ಅಬ್ಯೆವರ್ದನ ಅವರಿಗೆ ಹಂಗಾಮಿ ಅಧ್ಯಕ್ಷ ಮತ್ತು ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಸೂಚಿಸಿದ್ದಾರೆ.
ಪ್ರಧಾನಿ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಸೋಮವಾರ ಈ ಸಂಬಂಧ ಸಚಿವ ಸಂಪುಟಸಭೆ ನಡೆಸಿ ಚರ್ಚಿಸಿರುವುದಾಗಿ ತಿಳಿಸಲಾಗಿದೆ.
ಆದಷ್ಟು ಬೇಗ ಎಲ್ಲ ಪಕ್ಷಗಳ ಸರ್ಕಾರ ರಚನೆಯಾಗಬೇಕು ಮತ್ತು ನಾವು ನಮ್ಮ ಜವಾಬ್ದಾರಿಗಳನ್ನು ಅವರಿಗೆ ಹಸ್ತಾಂತರಿಸಬೇಕು ಎಂಬುದು ಸಭೆಯಲ್ಲಿ ಭಾಗವಹಿಸಿದ್ದ ಸಚಿವರ ಅಭಿಪ್ರಾಯವಾಗಿದೆ ಎಂದೂ ತಿಳಿಸಲಾಗಿದೆ.
ಆದ್ದರಿಂದ, ಈಗ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಸೇರಿ ಎಲ್ಲ ಪಕ್ಷಗಳ ಸರ್ಕಾರ ರಚಿಸುವುದು ಅನಿವಾರ್ಯವಾಗಿದೆ.
ಗೊಟಬಯ ರಾಜಪಕ್ಸ ಅವರಿಂದ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿರುವ ರಾನಿಲ್ ವಿಕ್ರಮ ಸಿಂಘೆ ಪ್ರತಿಭಟನಾಕಾರರ ತೀವ್ರ ಆಕ್ರೋಶ ಎದುರಿಸುತ್ತಿದ್ದಾರೆ.
ಬುಧವಾರ ವಿಕ್ರಮಸಿಂಘೆ ಅವರು ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಸಂದರ್ಭ ಕಚೇರಿ ಎದುರು ಸೇರಿದ್ದ ಪ್ರತಿಭಟನಾಕಾರರು ಸಂಸತ್ ಭವನದ ಆವರಣಕ್ಕೆ ನುಗ್ಗಲು ಯತ್ನಿಸಿದರು. ಅಶ್ರುವಾಯು ಪ್ರಯೋಗಿಸಿದ ಪೊಲೀಸರು ಸ್ಪೀಕರ್ ಅಧಿಕೃತ ಕಚೇರಿ ಬಳಿಯಿಂದ ಪ್ರತಿಭಟನಾಕಾರರನ್ನು ಚದುರಿಸಿದರು.
ಪ್ರತಿಭಟನಾಕಾರರ ಪೈಕಿ 26 ವರ್ಷದ ವ್ಯಕ್ತಿ ಉಸಿರಾಟ ಸಮಸ್ಯೆಯಿಂದ ಅಸುನೀಗಿದ್ದಾರೆ. ಇತರೆ 37 ಮಂದಿ ಸಹ ಗಾಯಗೊಂಡಿದ್ದಾರೆ.