ಕೇಂಬ್ರಿಡ್ಜ್, ಇಂಗ್ಲೆಂಡ್: ಭಾರತದ ಅಭಿವ್ಯಕ್ತಿ ಕ್ಷೇತ್ರಗಳಾದ ಸಂಸತ್ತು, ಚುನಾವಣಾ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಇದರಿಂದ ಈ ಕ್ಷೇತ್ರಗಳಲ್ಲಿ ದಿವ್ಯ ಮೌನ ಆವರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಇಂಡಿಯಾ ಅಟ್ 75’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್, ‘ಭಾರತವು ಮಾತನಾಡಿದಾಗ ಜೀವಂತವಾಗುತ್ತದೆ. ಆದರೆ ದೇಶ ಮೌನವಾದರೆ ಭಾರತವೇ ಸಾಯುತ್ತದೆ’ ಎಂದು ಹೇಳಿದರು.
ಭಾರತವು ಒಂದು ರಾಷ್ಟ್ರವಾಗಿರುವ ಬದಲು ‘ರಾಜ್ಯಗಳ ಒಕ್ಕೂಟ’ವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ರಾಹುಲ್, ‘ಈ ಪದವು ಪ್ರತಿಯೊಂದು ರಾಜ್ಯದ ಜನರಿಗೆ ಸುಂದರವಾದ ಕಲ್ಪನೆಯನ್ನು ನೀಡುತ್ತದೆ’ ಎಂದು ಹೇಳಿದರು.