ಇಸ್ಲಾಮಾಬಾದ್: ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ನೇಮಕಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಭುಗಿಲೆದ್ದ ನಂತರಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖ್ವಮರ್ ಜಾವೇದ್ ಬಾಜ್ವಾ ಅವರೊಂದಿಗಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಮಾಜಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆಂದು ಗುರುವಾರ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವಾರ ಇಮ್ರಾನ್ ಖಾನ್ ಮೇಲೆ ದಾಳಿಯಾದ ಕಾರಣ ಪಾಕಿಸ್ತಾನ ತಾರೀಖ್–ಇ–ಇನ್ಸಾಫ್ (ಪಿಟಿಐ) ಪಕ್ಷವು ಮಂಗಳವಾರ ಆರಂಭಿಸಬೇಕಾದ ಯಾತ್ರೆಯನ್ನು ಗುರುವಾರಕ್ಕೆ ಮುಂದೂಡಲಾಗಿತ್ತು.
ಪಾಕಿಸ್ತಾನದ ಸೇನೆಯು ತುಂಬಾ ಶಕ್ತಿಶಾಲಿಯಾದುದು, ದೇಶದಲ್ಲಿ ಕಾನೂನು ಬದ್ಧವಾಗಿ ಆಡಳಿತವನ್ನು ನಿರ್ವಹಿಸಲು ಸೇನೆಯು ತುಂಬಾ ಸಹಕಾರಿಯಾಗಿತ್ತು ಎಂದು ‘ಡಾನ್‘ ಪತ್ರಿಕೆಯ ಸಂದರ್ಶನದಲ್ಲಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಇಂತಹ ಶಕ್ತಿಶಾಲಿ ಸೇನೆ ಹಾಗೂ ನಿಮ್ಮ ನಡುವಿನ ಬಿರುಕು ಯಾವಾಗಿನಿಂದ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೇಶವು ಭ್ರಷ್ಟಾಚಾರವನ್ನು ತಡೆಯುವಲ್ಲಿ ಎಡವಿದ ನಂತರ ಹಾಗೂ ಪಂಜಾಬ್ ಮುಖ್ಯಮಂತ್ರಿ ಆಯ್ಕೆಯಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದ ಪಾಕಿಸ್ತಾನ ಸೇನೆ ಹಾಗೂ ನಮ್ಮ ನಡುವೆ ಬಿರುಕು ಮೂಡಿತ್ತು ಎಂದರು.