ಕಾಣೆಯಾಗಿದ್ದ ಇಬ್ಬರು ಭಾರತೀಯರ ಹತ್ಯೆ: ಕೀನ್ಯಾ ಅಧ್ಯಕ್ಷರ ಆಪ್ತರ ಮಾಹಿತಿ

ನೈರೋಬಿ: ಕೀನ್ಯಾದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಭಾರತೀಯರನ್ನು ಹತ್ಯೆ ಮಾಡಲಾಗಿದೆ ಎಂದು ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ಅವರ ಆಪ್ತ ಸಹಾಯಕರೊಬ್ಬರು ಶುಕ್ರವಾರ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಕೀನ್ಯಾದ ಕ್ವಾಂಝಾ ಡಿಜಿಟಲ್ ಪ್ರಚಾರ ತಂಡದ ಭಾಗವಾಗಿದ್ದ ಭಾರತದ ಜುಲ್ಫಿಕರ್ ಅಹ್ಮದ್ ಖಾನ್ ಮತ್ತು ಅವರ ಸ್ನೇಹಿತ ಮೊಹಮ್ಮದ್ ಝೈದ್ ಸಮಿ ಕಿದ್ವಾಯಿ ಅವರು ಜುಲೈನಲ್ಲಿ ಮೊಂಬಾಸಾ ರಸ್ತೆಯಲ್ಲಿ ಟ್ಯಾಕ್ಸಿ ಚಾಲಕ ನಿಕೋಡೆಮಸ್ ಮ್ವಾನಿಯಾ ಅವರ ಜೊತೆ ನಾಪತ್ತೆಯಾಗಿದ್ದರು.
ರುಟೊ ಅವರ ಅಭಿಯಾನದ ಯಶಸ್ಸಿಗೆ ಈ ಇಬ್ಬರೂ ಅಪಾರ ಕೊಡುಗೆ ನೀಡಿದ್ದಾರೆ ಎಂದು ರುಟೊ ಅವರ ಅಧ್ಯಕ್ಷೀಯ ಪ್ರಚಾರದಲ್ಲಿ ಪ್ರಮುಖರಾಗಿರುವ ಇಟುಂಬಿ ಹೇಳಿದ್ದಾರೆ ಎಂದು ದಿ ನೇಷನ್ ಪತ್ರಿಕೆ ವರದಿ ಮಾಡಿದೆ.
‘ನಾವು ಅವರ ಮೇಲೆ ಬಹಳ ಅವಲಂಬಿತವಾಗಿದ್ದೆವು. ನಮಗೆ ಗ್ರಾಫಿಕ್ಸ್ ಅಗತ್ಯವಿದ್ದಾಗ, ನಾನು ಅವರಿಗೆ ಮಾಹಿತಿ ಕಳುಹಿಸಿಕೊಡುತ್ತಿದ್ದೆ. ಅವರು, ತಮ್ಮೆಲ್ಲ ಕೆಲಸಬಿಟ್ಟು ನಮಗಾಗಿ ಕೆಲಸ ಮಾಡಿಕೊಡುತ್ತಿದ್ದರು’ಎಂದು ಅವರು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
‘ಅವರು ಮೊಂಬಾಸಾ, ಹೋಮಾ ಬೇ, (ಮಸಾಯಿ) ಮಾರ, ನ್ಯಾಮ ಚೋಮ ಜಾಯಿಂಟ್ಗಳಿಗೆ ಭೇಟಿ ನೀಡಿದ್ದರು ನಮ್ಮ ಸಾಂಪ್ರದಾಯಿಕ ನೃತ್ಯಗಳನ್ನು ಇಷ್ಟಪಟ್ಟಿದ್ದ ಅವರು, ನನ್ನನ್ನು ಭಾರತಕ್ಕೆ ಆಹ್ವಾನಿಸಿದ್ದರು. ಚುನಾವಣೆಯ ನಂತರ ಭೇಟಿ ನೀಡುತ್ತೇನೆ ಎಂದು ಹೇಳಿದ್ದೆ. ಅವರು ಕೀನ್ಯಾ ಪರಿಸರವನ್ನು ಆನಂದಿಸುತ್ತಿದ್ದರು. ಕುಳಿತಾಗ, ಅಷ್ಟೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು’ಎಂದು ಅವರು ಹೇಳಿದ್ದಾರೆ.
ಕಾನೂನುಬಾಹಿರ ಹತ್ಯೆಗಳ ಆರೋಪ ಹೊತ್ತಿರುವ ಮತ್ತು ಈಗ ವಿಸರ್ಜನೆಗೊಂಡಿರುವ ವಿಶೇಷ ಸೇವಾ ಘಟಕದ (ಎಸ್ಎಸ್ಯು) ಮೇಲೆ ಈ ಹತ್ಯೆ ಆರೋಪ ಕೇಳಿಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.