ಜಕಾರ್ತ (ಇಂಡೋನೇಷ್ಯಾ):ಇಂಡೋನೇಷ್ಯಾದ ಬಾಲಿ ದ್ವೀಪದ ಸಮೀಪ ಬುಧವಾರ ಸಮರಾಭ್ಯಾಸದ ವೇಳೆ ನಾಪತ್ತೆಯಾಗಿರುವ ಕೆ.ಆರ್.ಐ. ನಂಗಲ್ಲಾ 402 ಜಲಾಂತರ್ಗಾಮಿಯಲ್ಲಿ ಸಂಗ್ರಹವಿರುವ ಆಮ್ಲಜನಕ ಶನಿವಾರ ಬೆಳಿಗ್ಗೆ 3 ಗಂಟೆಯ ವೇಳೆಗೆ ಕೊನೆಗೊಳ್ಳಲಿದ್ದು, 53 ಮಂದಿ ನಾವಿಕರ ಬಗ್ಗೆ ಆತಂಕ ಹೆಚ್ಚತೊಡಗಿದೆ.
‘ಜಲಾಂತರ್ಗಾಮಿ ಎಲ್ಲಿದೆ ಎಂಬುದು ಇನ್ನೂ ತಿಳಿದಿಲ್ಲ. ಅದನ್ನು ಪತ್ತೆಹಚ್ಚುವ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು. ಆಮ್ಲಜನಕ ಖಾಲಿಯಾಗುವ ಮೊದಲಾಗಿಯೇ ಅದನ್ನು ಪತ್ತೆಹಚ್ಚಲು ಭಾರಿ ಪ್ರಯತ್ನ ನಡೆಸಲಾಗಿದೆ’ ಎಂದು ಸೇನಾ ವಕ್ತಾರ ಮೇ.ಜ.ಅಚ್ಮಡ್ ರಿಯಾದ್ ತಿಳಿಸಿದರು.
24ಕ್ಕೂ ಅಧಿಕ ನೌಕಾಪಡೆ ಮತ್ತು ಇತರ ಹಡಗುಗಳು ಜಲಾಂತರ್ಗಾಮಿಗಾಗಿ ಶೋಧ ನಡೆಸುತ್ತಿವೆ. ಸೋನಾರ್ ಉಪಕರಣಗಳ ಸಹಿತ ಅತ್ಯಾಧುನಿಕ ಶೋಧ ಉಪಕರಣಗಳನ್ನು ಒಳಗೊಂಡ ಆಸ್ಟ್ರೇಲಿಯಾದ ಹಡಗೊಂದು ಸಹ ಶುಕ್ರವಾರ ಬರಲಿದ್ದು, ಶೋಧ ತೀವ್ರಗೊಳ್ಳಲಿದೆ.