ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತರ ಮೇಳದಲ್ಲಿ ಮನಸೆಳೆದ ಫಲ-ಪುಷ್ಪ ಪ್ರದರ್ಶನ...

Last Updated 23 ಸೆಪ್ಟೆಂಬರ್ 2018, 13:18 IST
ಅಕ್ಷರ ಗಾತ್ರ

ಮೋಹಕ ವರ್ಣಮಯ ಲೋಕವನ್ನೇ ತೆರೆದಿಟ್ಟಿರುವ ಫಲ-ಪುಷ್ಪಗಳು, ವಿವಿಧ ರೋಗ ನಿವಾರಕ ಔಷಧೀಯ ಸಸ್ಯಗಳು, ಜತೆಗೆ ಜಲ ಪುಷ್ಪಗಳಂತೆ ಕಾಣುವ ರಂಗುರಂಗಿನ ಮತ್ಸ್ಯಗಳು... ಇವೆಲ್ಲವುಗಳಿಂದ ಕಣ್ಮನ ಸೆಳೆಯುತ್ತಿರುವುದು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ ಈ ಬಾರಿಯ ಕೃಷಿ ಮೇಳ...

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಆರಂಭಗೊಂಡ 2018ನೇ ಸಾಲಿನ ಕೃಷಿ ಮೇಳದ ಫಲ-ಪುಷ್ಪ ಪ್ರದರ್ಶನದಲ್ಲಿ ಒಂದು ಸಾವಿರಕ್ಕೂ ಅಧಿಕ ಫಲ-ಪುಷ್ಪಗಳಿವೆ. ಆಲಂಕಾರಿಕ, ಔಷಧೀಯ ಸಸ್ಯಗಳು ಸೇರಿದಂತೆ ವಿವಿಧ ಬಗೆಯ ಫಲ-ಪುಷ್ಪಗಳು ನೋಡುಗರ ಕಣ್ಣಿಗೆ ತಂಪೆರೆಯುತ್ತಿವೆ. ಬಗೆ-ಬಗೆಯ ಪುಷ್ಪಗಳೊಂದಿಗೆ ಆರೋಗ್ಯ ಹಾಗೂ ಸೌಂದರ್ಯ ವರ್ಧಕ ಔಷಧೀಯ ಸಸ್ಯಗಳ ಸಮಾಗಮ ಈ ಬಾರಿಯ ಫಲ-ಪುಷ್ಪ ಪ್ರದರ್ಶನದ ಪ್ಲಸ್ ಪಾಯಿಂಟ್.

ಔಷಧಿ ಮತ್ತು ಸುಗಂಧ ಸಸ್ಯಗಳಲ್ಲಿ 60ಕ್ಕೂ ಹೆಚ್ಚು ವಿವಿಧ ತಳಿಗಳು ಪ್ರದರ್ಶನಗೊಂಡಿದ್ದು ವಿಶೇಷವಾಗಿದೆ. ಅದರಲ್ಲಿ ವಿವಿಧ ರೋಗಗಳಿಗೆ ರಾಮಬಾಣವಾದ ಸಸ್ಯಗಳ ಬಗ್ಗೆ ಕುತೂಹಲದಿಂದ ಸಾರ್ವಜನಿಕರು ಮಾಹಿತಿ ಪಡೆಯುತ್ತಿದ್ದ ದೃಶ್ಯಗಳು ಕಂಡು ಬಂದವು. ಮೂತ್ರಕೋಶದ ಕಲ್ಲು ನಿವಾರಕ ಹಾಗೂ ವೀರ್ಯ ವರ್ಧಕ ಸಸ್ಯವಾದ ಕರಿನೆಕ್ಕಿ(ಲಕ್ಕಿ), ಸಂದು ನೋವು ನಿವಾರಕ ಹಿಪ್ಪಲಿ, ಹಾವು ಕಡಿತ ಹಾಗೂ ನರದೌರ್ಬಲ್ಯ ನಿವಾರಕ ಸರ್ಪಗಂಧ, ತೊನ್ನು ಮತ್ತು ಹೃದಯ ರಕ್ತನಾಳ ಚಿಕಿತ್ಸಕ ನಾಗದಾಳಿ, ಬಸಳೆ, ಗುಗ್ಗಳ, ಚಕ್ರಮಣಿ, ದಾಸವಾಳ, ನಿಂಬೆ ಹುಲ್ಲು, ಪಚೌಲಿ, ಭೃಂಗರಾಜ, ಜಲಬ್ರಾಹ್ಮಿ ಸೇರಿದಂತೆ ವಿವಿಧ ತಳಿಗಳು ಗಮನ ಸೆಳೆದವು.

ಒಂದೂವರೆ ವರ್ಷದಿಂದ ಹಿಡಿದು 16 ವರ್ಷದವರೆಗಿನ ಸಣ್ಣ ಆಕಾರದ ಆಲ, ಅರಳಿ, ಮಾವು, ಹುಣಸೆ, ಅತ್ತಿ ಸೇರಿದಂತೆ ಸಪ್ಲೇರಾ ಸಸ್ಯಗಳು ನೋಡುಗರ ಗಮನ ಸೆಳೆದಿವೆ. ಇದಲ್ಲದೇ ಜಲಕೃಷಿ ಮಾದರಿಗಳು ಫಲ-ಪುಷ್ಪ ಮೇಳದಲ್ಲಿ ಗಮನ ಸೆಳೆದವು. ಅದರಲ್ಲೂ ಜಲಕೃಷಿಯಲ್ಲಿ ಬೆಳೆದು ನಿಂತ ಸುಧಾರಿತ ತಳಿಯ ಹಕ್ಕರಕಿ, ಶುಂಠಿ, ಜಬೇರಾ ಹೂಗಳು ನೋಡುಗರ ಚಿತ್ತ ಸೆಳೆಯುತ್ತಿವೆ.

ರಂಗು-ರಂಗಿನಿಂದ ಮನಸೆಳೆಯುವ ಆಲಂಕಾರಿಕ ಹೂವುಗಳಾದ ಆಸ್ಟಿಕ್ ಪಿಂಕ್, ಲೇಡಿಸ್ ಲೇಸ್, ವರ್ಬೆನಾ, ಕೆಂಪು ಸ್ಟಾಲಿಯಾ, ರೋಜ್, ಜರ್ಬೇರಾ, ಕಾಬಾಳೆ, ಕಾಸ್ಮಾಸ್ ಇಂಚೇಲಿಯಾ, ಅಡಿಕೆ ಹೂವು, ರಾಜಗಿರಿ ಹೂ, ಪುಷ್ಪಕ ಹೂವು ಸೇರಿದಂತೆ ಹೊಸ-ಹೊಸ ಹೂವುಗಳನ್ನು ಕಾಣಬಹದು. ಮಣ್ಣು ಇಲ್ಲದೆ ಜಲಕೃಷಿಯ ಮೂಲಕ ಸೊಪ್ಪು ಬೆಳೆಯುವುದು, ಮನೆಯ ಛಾವಣಿಯಲ್ಲಿಯೇ ಹನಿ ನೀರಾವರಿಯ ಮೂಲಕ ತರಕಾರಿ ಬೆಳೆಯುವ ಮಾದರಿ ರೈತರನ್ನು ಬಹುವಾಗಿ ಆಕರ್ಷಿಸಿದೆ. ಕೈತೋಟವೇ ಆರೋಗ್ಯ ಸಂವೃದ್ಧಿಗೆ ದಾರಿ ತೋರಿಸಿದೆ. ಸೊರೆಕಾಯಿ, ಕುಂಬಳಕಾಯಿ ಆಹಾರ ತಯಾರಿಕೆ ಜತೆಗೆ ಅಲಂಕಾರಕ್ಕೂ ಸೈ ಎಂದಿವೆ. ಕಲ್ಲಂಗಡಿ, ಕುಂಬಳಕಾಯಿ, ಬಾಳೆ
ಗಿಡದ ಕಾಂಡಗಳಿಂದ ರೂಪ ಪಡೆದ ಗಣೇಶ ಗಮನ ಸೆಳೆಯುತ್ತಿದ್ದು. ಸಂಗೀತ ಕಛೇರಿ ನಡೆಸಿರುವ ಗಣಪನಿಗೆ ವೀಣೆ, ತಂಬೂರಿ, ತಬಲಾ, ಡೋಲು ಹಿಡಿದು ಕುಳಿತ ವನಿತೆಯರು ಸಾಥ್ ನೀಡಿದ್ದಾರೆ.

ಹಾಗೆಯೇ ಕಲ್ಲಂಗಡಿಯಲ್ಲಿ ಅರಳಿದ ಜ್ಞಾನಪೀಠ ಪುರಸ್ಕೃತರು, ಕುಂಬಳಕಾಯಿ ಹಾಗೂ ಸೌತೆಕಾಯಿಯಲ್ಲಿ ರೂಪ ತಳೆದ ಮಹಿಳಾ ಮಣಿಗಳು, ಬದನೆಕಾಯಿಯಲ್ಲಿ ಅರಳಿದ ನವಿಲು, ಹಾಗಲಕಾಯಿಯಲ್ಲಿ ಮೂಡಿ ಬಂದ ಮೊಸಳೆ, ಪಿಸ್ತಾದ ಸಿಪ್ಪೆಯಲ್ಲಿ ಮೂಡಿದ ನವಿಲು ಹಾಗೂ ತೆಂಗಿನಕಾಯಿ ಗಣೇಶ ಸೇರಿದಂತೆ ಹಲವು ಕಲಾಕೃತಿಗಳು ಈ ಸಲದ ಕೃಷಿ ಮೇಳದ ವಿಶೇಷತೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT