ಶ್ರೀರಂಗಪಟ್ಟಣ: ಆಹಾರದ ಕೊರತೆ ನೀಗಬೇಕಾದರೆ ಕಡಿಮೆ ವಿಸ್ತೀರ್ಣದಲ್ಲಿ ಹೆಚ್ಚು ಇಳುವರಿ ನೀಡುವ ಸುಧಾರಿತ ತಳಿಯ ಭತ್ತ, ರಾಗಿ, ಜೋಳ ಬೆಳೆಗಳನ್ನು ರೈತರು ಬೆಳೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕಾವ್ಯಾ ಶಿವಕುಮಾರ್ ಸಲಹೆ ನೀಡಿದರು.
ತಾಲ್ಲೂಕಿನ ಚಂದಗಾಲು ಗ್ರಾಮದ ಪ್ರಗತಿಪರ ರೈತ ಸಿ.ಎಸ್.ಲೋಕೇಶ್ ಅವರ ಜಮೀನಿನಲ್ಲಿ ಗುರುವಾರ ದಾವಣಗೆರೆಯ ಕಾವೇರಿ ಸೀಡ್ಸ್ ಕಂಪನಿ ಏರ್ಪಡಿಸಿದ್ದ ಕೆಪಿಎಚ್– 468 ಹೈಬ್ರಿಡ್ ತಳಿ ಭತ್ತದ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಹಿಡುವಳಿ ಜಮೀನು ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಿದೆ. ಶೇ 70ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರೇ ಇದ್ದಾರೆ. ಕಡಿಮೆ ವಿಸ್ತೀರ್ಣದಲ್ಲಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವುದು ಅನಿವಾರ್ಯವಾಗಿದ್ದು, ಸುಧಾರಿತ ತಳಿಗಳನ್ನೇ ಬೆಳೆಯಬೇಕು. ಕೃಷಿ ಇಲಾಖೆ ಅಧಿಕಾರಿಗಳು ಈ ದಿಸೆಯಲ್ಲಿ ರೈತರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ಕಾವೇರಿ ಸೀಡ್ಸ್ ಕಂಪನಿ ಮುಖ್ಯಸ್ಥ ರಮೇಶ್ ಜೋಗಿ ಮಾತನಾಡಿ, ‘ಕೆಪಿಎಚ್–468 ತಳಿಯ ಭತ್ತ ಬೆಳೆದರೆ ಎಕರೆಗೆ 40 ಕ್ವಿಂಟಲ್ವರೆಗೂ ಇಳುವರಿ ಪಡೆಯಬಹುದು. ಈ ತಳಿ ರೋಗ ನಿರೋಧಕಶಕ್ತಿ ಹೊಂದಿದ್ದು, ಕಡಿಮೆ ನೀರು ಮತ್ತು ಗೊಬ್ಬರ ಬಯಸುತ್ತದೆ. ಕೀಟನಾಶಕ ಸಿಂಪಡಿಸುವ ಅಗತ್ಯವೂ ಇರುವುದಿಲ್ಲ. ಪ್ರತಿ ಗೊನೆಯಲ್ಲಿ 500ಕ್ಕೂ ಹೆಚ್ಚು ಕಾಳುಗಳು ಕಟ್ಟುತ್ತವೆ. ರೈತರಿಗೆ ಖರ್ಚು ಉಳಿಸುವ ಜತೆಗೆ ಲಾಭ ತಂದುಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ವಿಜಯಲಕ್ಷ್ಮೀ ಕೊಂಗಾಳಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಂದಕುಮಾರ್, ಸದಸ್ಯ ನಾಗೇಂದ್ರು, ಮಾರಾಟ ಅಧಿಕಾರಿ ಕಿರಣಕುಮಾರ್ ಇದ್ದರು. ಚಂದಗಾಲು, ನಗುವನಹಳ್ಳಿ, ಮೇಳಾಪುರ, ನಾಗಯ್ಯನಹುಂಡಿ ಇತರ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.