ಜೇನು ಗೂಡಿನಿಂದ ಹುಳು ಕಚ್ಚದಂತೆ ತುಪ್ಪ ಪಡೆಯುವುದು ದೊಡ್ಡ ಸಾಹಸ. ಸಾಕಾಣಿಕೆ ಮಾಡಿರುವ ಅಥವಾ ಸಹಜವಾಗಿಯೇ ತೋಟದ ಬೇಲಿಗಳಲ್ಲಿ ಕಟ್ಟಿರುವ ಗೂಡಿನಿಂದ ತುಪ್ಪ ಪಡೆಯಲು ಹೋದಾಗ ಜೇನು ಹುಳುಗಳು ಕಚ್ಚುತ್ತವೆ. ಇದನ್ನು ತಪ್ಪಿಸಲು ಕೆಲವರು ಬೆಂಕಿ ಹಚ್ಚಿ ಅಥವಾ ದೊಡ್ಡದಾಗಿ ಹೊಗೆ ಹಾಕಿ ಹುಳುಗಳನ್ನು ಓಡಿಸಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಹುಳುಗಳು ಬೆಂಕಿಗೆ ಸುಟ್ಟು ಹೋಗುತ್ತವೆ. ಇದನ್ನು ತಪ್ಪಿಸುವ ಸಲುವಾಗಿಯೇ ದೊಡ್ಡಬಳ್ಳಾಪುರ ತಾಲ್ಲೂಕಿನ ಕುಂಟನಹಳ್ಳಿ ಗ್ರಾಮದ ಜೇನು ಕೃಷಿಕ ಲಕ್ಷ್ಮೇಗೌಡ ಪುಟ್ಟ ಹೊಗೆ ತಿದಿ (ಸ್ಮೋಕರ್ ಡ್ರಮ್) ಸಿದ್ಧಪಡಿಸಿದ್ದಾರೆ.
ಕೈಯಲ್ಲಿ ಹಿಡಿದುಕೊಳ್ಳಬಹುದಾದಷ್ಟು, ಸರಳ ತಾಂತ್ರಿಕತೆಯನ್ನು ಬಳಸಿಕೊಂಡು ಈ ತಿದಿ ಸಿದ್ಧಪಡಿಸಲಾಗಿದೆ. ತಿದಿಯಲ್ಲಿ ಒಂದಿಷ್ಟು ಹಳೆ ಬಟ್ಟೆ ಹಾಕಿ ಬೆಂಕಿ ಹಚ್ಚಿ ಮುಚ್ಚಳ ಹಾಕಬೇಕು. ಡ್ರಮ್ ತಳಭಾಗದಲ್ಲಿ ಪ್ಲಾಸ್ಟಿಕ್ ಟ್ಯೂಬ್ನಿಂದ ಸಿದ್ಧಪಡಿಸಿರುವ ತಿದಿ ಇದೆ. ಇದನ್ನು ಬೆರಳಿನಿಂದ ಒತ್ತಿದರೆ ಡ್ರಮ್ ಮೂಲಕ ಗಾಳಿ ಹಾದು ಬರುವಾಗ ಹೊಗೆ ಹೊರಬರುತ್ತದೆ. ಈ ಹೊಗೆಯನ್ನು ಜೇನು ಗೂಡಿನ ಸಮೀಪ ಹಿಡಿದರೆ ಹುಳುಗಳು ಗೂಡಿನಿಂದ ಪಕ್ಕಕ್ಕೆ ಸರಿಯುತ್ತವೆ ಅಥವಾ ಹಾರಿಹೋಗುತ್ತವೆ. ಆಗ ತುಪ್ಪ ಪಡೆಯ ಬಹುದು. ಹುಳುಗಳಿಗೂ ಯಾವುದೇ ಹಾನಿ ಆಗುವುದಿಲ್ಲ.
ಡ್ರಮ್ ತಳಭಾಗದಲ್ಲಿಯೇ ಕನ್ನಡಿಯನ್ನು ಅಳವಡಿಸಲಾಗಿದೆ. ಜೇನು ತೆಗೆಯುವಾಗ ಅಕಸ್ಮಿಕವಾಗಿ ಹುಳುಗಳು ಬಂದು ಮುಖಕ್ಕೆ ಕಚ್ಚಿದರೆ ಜೇನು ಹುಳುಗಳ ಬಾಯಲ್ಲಿನ ಮುಳ್ಳು ಅಲ್ಲಿಯೇ ಉಳಿಯುತ್ತವೆ. ಇದರಿಂದ ಹೆಚ್ಚು ನವೆಯಾಗುತ್ತದೆ, ಮುಖ ಊದಿಕೊಳ್ಳುತ್ತದೆ.
ಜೇನು ಹುಳು ಕಚ್ಚಿದ ತಕ್ಷಣ ಸಣ್ಣದಾಗಿರುವ ಮುಳ್ಳು ತೆಗೆದುಹಾಕಿದರೆ ನವೆ ಮತ್ತು ಮುಖ ಊದಿಕೊಳ್ಳುವುದು ಕಡಿಮೆಯಾಗುತ್ತದೆ. ಡ್ರಮ್ನ(ಹೊಗೆ ತಿದಿ) ತಳಭಾಗದಲ್ಲಿನ ಕನ್ನಡಿಯಲ್ಲಿ ನೋಡಿಕೊಂಡು ಜೇನು ಮುಳ್ಳನ್ನು ತೆಗೆದುಹಾಕಿಕೊಳ್ಳಬಹುದು. ಈ ತಿದಿಯ ಬೆಲೆ
₨ 400 ರಿಂದ ₨ 600. ಹೆಚ್ಚಿನ ಮಾಹಿತಿಗೆ: 9844543335.