ಸಸ್ಯಶಾಸ್ತ್ರ ಸಂಶೋಧನೆಯಲ್ಲಿ ಕರ್ನಾಟಕಕ್ಕೆ ಜಾಗತಿಕವಾಗಿ ಪ್ರಖ್ಯಾತಿ ತಂದುಕೊಟ್ಟ ಪ್ರೊ.ಬಿಜಿಎಲ್ ಸ್ವಾಮಿ ಅವರ ಜೀವನಾಧಾರಿತ ‘ಹಸಿರೇ ಹೊನ್ನು’ ನಾಟಕವು ಕನ್ನಡದ ಮಟ್ಟಿಗೆ ಹೊಸ ಪ್ರಯೋಗ. 2023ರ ಉತ್ಸವದ ಹೊತ್ತಿಗೆ ಮೊಳಕೆಯೊಡೆದಿದ್ದ ಪರಿಕಲ್ಪನೆ ಈ ಬಾರಿ ರಂಗಕ್ಕೆ ಬಂದಿದೆ. ಆಗ ‘ಸಲೀಂ ಆಲಿ’ ಜೀವನಚರಿತ್ರೆ ಆಧರಿಸಿ ನಾಟಕ ಬರೆದಿದ್ದ ಡಾ.ಸಿ.ಮನೋಹರ್ ಅವರೇ ಇದನ್ನೂ ರಚಿಸಿದ್ದಾರೆ. ಮೈಸೂರಿನ ಅರಿವು ರಂಗ ಪ್ರಸ್ತುತಪಡಿಸಿದ ಈ ನಾಟಕದಲ್ಲಿ ಸ್ವಾಮಿಯವರಲ್ಲಿದ್ದ ಹಾಸ್ಯ ಪ್ರವೃತ್ತಿಗೇ ಹೆಚ್ಚಿನ ಒತ್ತು ಕೊಟ್ಟಿದ್ದರಿಂದ ಅವರ ಸಂಶೋಧಕ ಮತ್ತು ವಿಜ್ಞಾನ ಲೇಖಕ ಪ್ರತಿಭೆಯ ಮೇಲೆ ಹಾಸ್ಯದ ದಪ್ಪ ಪರದೆ ಹೊದಿಸಿದಂತಾಗಿತ್ತು. ವಿಜ್ಞಾನದ ಅಂಶಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಹಾಸ್ಯ ಇರಲೇಬೇಕು ಎಂಬ ಸರಳ ನಿಲುವೂ ಇದಕ್ಕೆ ಕಾರಣವಿರಬಹುದು. ಸ್ವಾಮಿಯವರ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರೊ.ಎ.ಆರ್.ಕೃಷ್ಣಶಾಸ್ತ್ರಿ ಎಂ.ಜಿ.ಆರ್ ನಾಡಿಗ ಕೃಷ್ಣಮೂರ್ತಿಯವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟ ಬಗೆಯಲ್ಲೂ ಹಾಸ್ಯವೇ ಪ್ರಧಾನವಾಗಿತ್ತು. ಉತ್ಸವದಲ್ಲಿ ಪ್ರದರ್ಶನಗೊಂಡ ‘ಗೆಲಿಲಿಯೋಸ್ ಡಾಟರ್’ ನಾಟಕದುದ್ದಕ್ಕೂ ಹಾಸ್ಯವಿತ್ತು. ಆದರೆ ಗೆಲಿಲಿಯೋನ ಸಂಶೋಧನೆಗಳು ಅವುಗಳನ್ನು ಕಂಡುಕೊಂಡ ಮಂಡಿಸುತ್ತಿದ್ದ ಬಗೆ ವಿಜ್ಞಾನದ ಮೇಲೆ ಧರ್ಮ ಗೆಲುವು ಸಾಧಿಸುವ ಅಂಶಗಳಿಗೂ ಹೆಚ್ಚಿನ ಒತ್ತು ನೀಡಲಾಗಿತ್ತು.