ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಚನ ಪ್ರವೀಣ ಸ್ವಾಮೀ ಚಿನ್ಮಯಾನಂದ.. ಚಿನ್ಮಯಾನಂದರ 108ನೇ ಜನ್ಮದಿನದ ಲೇಖನ

2024ರಲ್ಲಿ ಇಡೀ ವಿಶ್ವದಾದ್ಯಂತ ಗುರುದೇವ ಸ್ವಾಮಿ ಚಿನ್ಮಯಾನಂದರ 108ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಸ್ವಾಮೀ ಆದಿತ್ಯಾನಂದ
Published 11 ಮೇ 2024, 22:37 IST
Last Updated 11 ಮೇ 2024, 22:37 IST
ಅಕ್ಷರ ಗಾತ್ರ

ಸ್ವಾಮೀ ಚಿನ್ಮಯಾನಂದರು ಮನೆಯ ಪೂಜಾಕೋಣೆಯಲ್ಲಿ ಬಟ್ಟೆಯಿಂದ ಬಂಧಿಸಲ್ಪಟ್ಟಿದ್ದ ಭಗವದ್ಗೀತೆ ಗ್ರಂಥವನ್ನು ಕೇವಲ ಆ ಗ್ರಂಥ ಪೂಜಿಸಲು ಮಾತ್ರವಲ್ಲ ಎಂದರಿತು, ಜನರ ಮನದಲ್ಲಿ ನಿಲ್ಲುವಂತೆ ಮಾಡಿದರು. ಭಗವದ್ಗೀತೆಯು ನಮಗೆ ಬದುಕುವ ಕಲೆಯನ್ನು ತಿಳಿಸುತ್ತದೆ. ಅದರ ಜ್ಞಾನವು ನಮಗೆ ಆನಂದವನ್ನು ನೀಡುವುದರಲ್ಲಿ ಸಂಶಯವಿಲ್ಲ ಎಂಬುದು ಸ್ವಾಮೀ ಚಿನ್ಮಯರ ದೃಢ ನಂಬಿಕೆಯಾಗಿತ್ತು.

ಸ್ವಾಮೀ ಚಿನ್ಮಯಾನಂದರು ಮೇ 8, 1916 ರಂದು ಕೇರಳದ ಎರ್ನಾಕುಳಂನಲ್ಲಿ ಜನಿಸಿದರು. ತಂದೆ ತಾಯಿ ಇಟ್ಟ ಹೆಸರು ಬಾಲಕೃಷ್ಣ ಮೆನನ್. ಪ್ರಾಥಮಿಕ ವಿದ್ಯಾಭ್ಯಾಸ ಕೇರಳದಲ್ಲಿ ಹಾಗೂ ಹೆಚ್ಚಿನ ವ್ಯಾಸಂಗವನ್ನು ಲಖನೌದಲ್ಲಿ ಮಾಡಿದರು. ತಂದೆಯ ಇಚ್ಛೆಯಂತೆ ಸ್ನಾತಕೋತ್ತರ ಕಾನೂನು ಪದವಿ ಪಡೆದರು. ಆದರೆ ಬಾಲಕೃಷ್ಣ ಮೆನನ್‌ ಅವರ ಆಸಕ್ತಿಯಿದ್ದದ್ದು ಪತ್ರಿಕೋದ್ಯಮದಲ್ಲಿ. ದೆಹಲಿಯ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಉಪ ಸಂಪಾದಕ ವೃತ್ತಿಯನ್ನು ಮಾಡತೊಡಗಿದರು.

ಅದು ಸ್ವಾತಂತ್ರ‍್ಯ ಸಂಗ್ರಾಮದ ಕಾಲ. ಬಾಲಕೃಷ್ಣ ಮೆನನ್ ಸಂಪೂರ್ಣವಾಗಿ ತಮ್ಮನ್ನು ಅದರಲ್ಲಿ ತೊಡಗಿಸಿಕೊಂಡು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಬ್ರಿಟಿಷರ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಪಂಜಾಬ್ ರಾಜ್ಯದ ಮೊರೆಹೊಕ್ಕರು. ಸ್ವಾತಂತ್ರೋತ್ತರದಲ್ಲಿ ಮತ್ತೆ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡರು.

‘ಭಾರತದ ಆರ್ಥಿಕ ಹಿನ್ನಡೆಗೆ ಸಾಧು ಸಂತರೇ ಕಾರಣ. ಅವರು ದುಡಿದರೆ ದೇಶಕ್ಕೆ ಹಿತವೆಂಬ ಮನೋಭಾವದಿಂದ ಸಂತ ಮಹಾಂತರ ಜೀವನವನ್ನು ಹಾಗೂ ಕಪಟವನ್ನು ಜಗತ್ತಿಗೆ ಪರಿಚಯಿಸುತ್ತೇನೆ’ ಎಂಬ ದೃಢ ವಿಶ್ವಾಸದಿಂದ ದೆಹಲಿಯಿಂದ ಹೃಷೀಕೇಶಕ್ಕೆ ಹೋಗಿ ಸ್ವಾಮೀ ಶಿವಾನಂದರ ದಿವ್ಯಜೀವನಸಂಘದಲ್ಲಿ ತಂಗಿದರು. ಸ್ವಾಮೀ ಶಿವಾನಂದರು ತಮಿಳುನಾಡಿನವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಇವರು ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮಜ್ಞಾನದಲ್ಲಿ ಜಿಜ್ಞಾಸೆ ಹೊಂದಿದವರಾಗಿ ಭಾರತಕ್ಕೆ ಹಿಂತಿರುಗಿ ವಿಧಿವತ್ತಾಗಿ ಸಂನ್ಯಾಸ ಸ್ವೀಕರಿಸಿ, ಹೃಷೀಕೇಶದಲ್ಲಿ ದಿವ್ಯಜೀವನ ಸಂಘವನ್ನು ಸ್ಥಾಪಿಸಿದರು. ಬಾಲಕೃಷ್ಣ ಮೆನನ್ ಸ್ವಾಮೀ ಶಿವಾನಂದರ ಜೀವನ ಹಾಗೂ ಅವರ ಕಾರ್ಯಗಳನ್ನು ನೋಡಿ ತಮ್ಮ ಮನಸ್ಸಿನಲ್ಲಿದ್ದ ತಪ್ಪು ತಿಳಿವಳಿಕೆಯನ್ನು ಬದಲಿಸಿಕೊಂಡು, ಕೆಲಕಾಲ ಅಲ್ಲೆ ವಾಸಿಸತೊಡಗಿದರು. ಬಾಲಕೃಷ್ಣ ಮೆನನ್‌ಗೆ ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗತೊಡಗಿತು. ನಿತ್ಯವೂ ಸ್ವಾಮೀ ಶಿವಾನಂದರೊಡನೆ ಸಂವಾದ ಮಾಡುತ್ತಿದ್ದರು. ಇವರ ಆಸಕ್ತಿಯನ್ನು ಗುರುತಿಸಿ ಸ್ವಾಮೀ ಶಿವಾನಂದರು 1946ರ ಶಿವರಾತ್ರಿ ದಿನ ಬಾಲಕೃಷ್ಣ ಮೆನನ್‌ಗೆ ಸಂನ್ಯಾಸವನ್ನು ನೀಡಿ, ಸ್ವಾಮೀ ಚಿನ್ಮಯಾನಂದ ಸರಸ್ವತಿ ಎಂಬ ಹೆಸರಿಟ್ಟರು. ಸಂನ್ಯಾಸಿಯಾದರೂ ಚಿನ್ಮಯಾನಂದರ ಜ್ಞಾನದಾಹ ಇಂಗಲಿಲ್ಲ. ಇದನ್ನರಿತ ಶಿವಾನಂದರು ಚಿನ್ಮಯಾನಂದರನ್ನು ಉತ್ತರಕಾಶಿಯಲ್ಲಿದ್ದ ಸ್ವಾಮೀ ತಪೋವನ ಮಹರಾಜರ ಬಳಿ ಹೆಚ್ಚಿನ ವ್ಯಾಸಂಗಕ್ಕಾಗಿ ಕಳುಹಿಸಿದರು.

ಸ್ವಾಮೀ ತಪೋವನ ಮಹರಾಜರು ಸಂಸ್ಕೃತ ಪಂಡಿತರು ಮಾತ್ರವಲ್ಲ, ಶ್ರೋತ್ರಿಯರೂ, ಬ್ರಹ್ಮನಿಷ್ಠರೂ ಆಗಿದ್ದರು. ಅವರನ್ನು ಜನರು ‘ಹಿಮವದ್ ವಿಭೂತಿ’ ಎಂದು ಗೌರವಿಸುತ್ತಿದ್ದರು. ಸ್ವಾಮೀ ಚಿನ್ಮಯಾನಂದರು ಹಲವಾರು ವರ್ಷ ತಪೋವನ ಮಹರಾಜರ ಬಳಿ ವೇದಾಂತವನ್ನು ಕಲಿತರು. ಉತ್ತರಕಾಶಿ ತಪೋವನ ಮಹರಾಜರು ವಾಸಿಸುತ್ತಿದ್ದ ಊರು.

ಸ್ವಾಮೀ ತಪೋವನ ಮಹರಾಜರಿಂದ ಅನುಮತಿ ಪಡೆದು ಹಿಮಾಲಯದಿಂದ ದಕ್ಷಿಣದತ್ತ ಪ್ರಯಾಣ ಬೆಳೆಸಿದರು. ಡಿಸೆಂಬರ್ 31, 1951 ರಂದು ಪುಣೆಯಲ್ಲಿ ತಮ್ಮ ಮೊದಲ ಪ್ರವಚನವನ್ನು ಪ್ರಾರಂಭಿಸಿದರು. ಹೀಗೆ ಆರಂಭವಾದ ಅವರ ಪ್ರವಚನಮಾಲೆ ಅವಿರತವಾಗಿ 43 ವರ್ಷಗಳು ನಡೆಯಿತು. ಸ್ವಾಮೀಜಿ ಪ್ರವಚನಗಳಿಂದ ದೇಶ–ವಿದೇಶಗಳಲ್ಲಿ ವಿಖ್ಯಾತರಾದರು.

ಶಾಂತಿ ಎಲ್ಲಿದೆ?

ಗುರುದೇವ ಸ್ವಾಮೀ ಚಿನ್ಮಯಾನಂದರು ಪ್ರವಚನದಲ್ಲಿ ಪ್ರಸಿದ್ಧರು. ಜನರು ಅವರು ಹೇಳುತ್ತಿದ್ದ ದೃಷ್ಟಾಂತಗಳನ್ನು ಬಹಳ ಇಷ್ಟಪಡುತ್ತಿದ್ದರು. ನಿತ್ಯಜೀವನಕ್ಕೆ ಉಪಯುಕ್ತವಾಗುವ ಹಲವಾರು ನಿದರ್ಶನಗಳನ್ನು ನೀಡುತ್ತಿದ್ದರು. ಒಮ್ಮೆ ಅವರು ಸತ್ಸಂಗವನ್ನು ನಡೆಸಿಕೊಡುತ್ತಿದ್ದಾಗ ಭಕ್ತರೊಬ್ಬರು ಗುರುದೇವರ ಬಳಿ ಬಂದು ‘ಗುರುದೇವ, ದಯವಿಟ್ಟು ನಿಮ್ಮ ಎರಡೂ ಕೈಗಳನ್ನು ನನ್ನ ತಲೆಯ ಮೇಲಿಡಿ’ ಎಂದು ಕೇಳಿದರು. ಗುರುದೇವರು ‘ಏಕೆ’ ಎಂದು ಪ್ರಶ್ನಿಸಿದಾಗ ಆತ ‘ನನಗೆ ಮನಸ್ಸಿನ ಶಾಂತಿ ಬೇಕಿದೆ’ ಎಂದರು. ಆಗ ಗುರುದೇವರು ‘ನಿಮ್ಮ ಪ್ರಕಾರ ನನ್ನ ಎರಡೂ ಕೈಗಳಲ್ಲಿ ಮನಃಶಾಂತಿಯಿದೆ. ಒಂದು ವೇಳೆ ಈ ಎರಡೂ ಕೈಗಳಲ್ಲಿ ಶಾಂತಿಯು ಇರುವುದಾದರೆ ಅದನ್ನು ಮೊದಲು ನನ್ನ ತಲೆಯ ಮೇಲೆ ನಾನೇ ಇಟ್ಟುಕೊಳ್ಳುತ್ತೇನೆ, ಏಕೆಂದರೆ ನನಗೂ ಕೂಡ ಮನಸ್ಸಿನ ಶಾಂತಿ ಬೇಕು. ಆ ಮನಸ್ಸಿನ ಶಾಂತಿ ಹೊರಗಿನಿಂದ ಬರುವುದಿಲ್ಲ. ನಾನು ಮನಸ್ಸಿನ ಶಾಂತಿಗಾಗಿ ಪ್ರವಚನ ನೀಡುತ್ತೇನೆ. ಇತರರು ಮನಸ್ಸಿನ ಶಾಂತಿಗಾಗಿ ಪ್ರವಚನಕ್ಕೆ ಬರುತ್ತಾರೆ, ಕೆಲವರು ಹಾಡನ್ನು ಹಾಡಿದರೆ, ಕೆಲವರು ಲೋಕಕಲ್ಯಾಣದ ಕಾರ್ಯದಲ್ಲಿ ತೊಡಗುತ್ತಾರೆ’
ಎಂದು ಹೇಳಿದರು.


‘ನಿಮ್ಮಿಂದ ಎಷ್ಟು ಮಂದಿ ಉದ್ಧಾರವಾದರು?’

ಅದು 1977ರ ಇಸವಿ. ಚಿನ್ಮಯ ಸಂಸ್ಥೆಗೆ ರಜತ ಮಹೋತ್ಸವದ ಸಂಭ್ರಮ. ಜಗತ್ತಿನ ನಾನಾ ದೇಶಗಳಿಂದ ಬಂದ ಶಿಷ್ಯರು ಹಾಗೂ ಭಕ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಮುಂಬೈ ನಗರದಲ್ಲಿ ಆಯೋಜಿಸಿದ್ದ ಈ 25ರ ಸಂಭ್ರಮದಲ್ಲಿ ಅನೇಕ ಪತ್ರಕರ್ತರೂ ಭಾಗವಹಿಸಿದ್ದರು.

ಪತ್ರಕರ್ತರೊಬ್ಬರು ಸಂಸ್ಥೆಯ ಸಂಸ್ಥಾಪಕರನ್ನು ಉದ್ದೇಶಿಸಿ, ‘ನಿಮ್ಮ ಸಂಸ್ಥೆಗೆ ರಜತ ಮಹೋತ್ಸವ. ಈ 25 ವರ್ಷಗಳಲ್ಲಿ ನಿಮ್ಮಿಂದ ಎಷ್ಟು ಜನರು ಉದ್ಧಾರವಾದರು’ ಎಂದು ಪ್ರಶ್ನಿಸಿದರು. ಅವರ ಪ್ರಶ್ನೆಗೆ ಹಸನ್ಮುಖಿಯಾಗಿ ಉತ್ತರಿಸಿದ ಸ್ವಾಮೀ ಚಿನ್ಮಯಾನಂದರು- ‘ಈ ಇಪ್ಪತ್ತೈದು ವರ್ಷಗಳಲ್ಲಿ ನಾನು ಹಲವಾರು ಊರುಗಳಲ್ಲಿ, ಹಲವಾರು ದೇಶಗಳಲ್ಲಿ ಭಗವದ್ಗೀತೆ, ಉಪನಿಷತ್ತುಗಳು ಹಾಗೂ ಇನ್ನಿತರ ಗ್ರಂಥಗಳ ಕುರಿತು ಪ್ರವಚನ ನೀಡಿದ್ದೇನೆ. ನಾನು ಪ್ರವಚನವನ್ನು ಜನರನ್ನು ಉದ್ಧರಿಸಲು ಮಾಡುವುದಿಲ್ಲ. ನನ್ನ ಪ್ರವಚನದ ಸಮಯದಲ್ಲಿ ಮೊದಲಿಗೆ ನನ್ನ ಮನಸ್ಸು ಶಾಂತವಾಗಿರುತ್ತದೆ. ಪ್ರವಚನದಿಂದ ಇತರರಿಗೆ ಉಪಯೋಗವಾಗುತ್ತದೊ ಇಲ್ಲವೊ ನನಗೆ ಗೊತ್ತಿಲ್ಲ, ನನಗಂತೂ ಅದು ಮಹತ್ತರವಾದ ಉಪಯೋಗವನ್ನು ಮಾಡಿದೆ. ನಿಮ್ಮ ಪ್ರಶ್ನೆಗೆ ಉತ್ತರಿಸಬೇಕಾದಲ್ಲಿ ಆ ಪ್ರವಚನದಿಂದ ಒಬ್ಬ ಉದ್ಧಾರವಾಗಿದ್ದಾನೆ, ಅದು ನಾನೇ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT