ತಣ್ಬೂಳಿಗ (ನಾ). ತಂಪನ್ನುಂಟುಮಾಡುವ ಸೇವೆ; ಶೈತ್ಯೋಪಚಾರ
(ತಣ್ಪು + ಊಳಿಗ)
ಭರತನು ಮಾವನ ಮನೆಯಿಂದ ಶತ್ರುಘ್ನನೊಡನೆ ಹಿಂತಿರುಗಿ ಬಂದನು. ತನ್ನ ತಾಯಿಯ ಕಾರಣದಿಂದ ಅಣ್ಣ ರಾಮಚಂದ್ರನು ವನವಾಸಕ್ಕೆ ಹೋದುದನ್ನು, ತಂದೆ ಮಡಿದುದನ್ನು ತಿಳಿದು ದುಃಖಿತನಾದನು. ತಾಯಿಯಿಂದ ಎಲ್ಲ ವಿಷಯವನ್ನು ಅರಿತು ಮಂಥರೆಯನ್ನು ಹಳಿದನು. ಪತಿ,ಪುತ್ರ ಹೀನೆಯಾದ ದೊಡ್ಡಮ್ಮ ಕೌಸಲ್ಯೆಯನ್ನು ಕಾಣಲು ಹೋದನು.
ಅವಳು ಕೈಕೆಯ ಕುಮಾರನನ್ನು ಕಂಡು ದುಃಖ ಮರುಕೊಳಿಸಿ ಪ್ರಜ್ಞೆ ತಪ್ಪಿ ಒರಗಿದಳು. ಆಗ ಭರತನು ಆ ತಾಯಿಗೆ ಮಾಡಿದ ಶೈತ್ಯೋಪಚಾರವನ್ನು ಕವಿಯು ಆ ಸಂದರ್ಭಕ್ಕೆ ಅನುಸರಿಸಿ ಹೊಸನುಡಿ ‘ತಣ್ಪೂಳಿಗ’ ನೇಯ್ದು ಪ್ರಯೋಗಿಸಿದ್ದಾರೆ.
ಕೈಕೆಯ ಕುಮಾರನಂ ಕಾಣುತಂ
ಮರುಕೊಳಿಸಿದಳಲ ಹೊಡೆತವನಾನಲಾರದೆಯೆ
ಮೈಮರೆತೊರಗಲಾಕೆ, ಪಿಡಿದೆತ್ತಿ ಕುಳ್ಳಿರಿಸಿ
ತಣ್ಪೂಳಿಗವನೆಸಗಿ, ಕರ್ಚಿದನ್ ಕಣ್ಬನಿ ವೊನಲ್ಗಳಿಂ
ಭರತನಾ ರಘುರಾಮನಂಬಿಕೆಯ ಪುಣ್ಯಮಯ
ಪದ್ಮಪಾದಂಗಳಂ.