ಮನುಷ್ಯನ ಪಂಚಕೋಶಗಳು: ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ. ಈ ಸ್ಥೂಲ ಶರೀರವೇ ಅನ್ನ ಪರಿಣಾಮವಾದುದರಿಂದ ಪ್ರತ್ಯಕ್ಷವಾದ ಕೋಶವು ಅನ್ನಮಯ.
ಕುವೆಂಪು ಅವರು ಕಾಡಿನಲ್ಲಿ ಹುಟ್ಟಿ ಬೆಳೆದು ಅದರ ಭವ್ಯಾನುಭವದಲ್ಲಿ ಕವಿಯಾಗಿ ರೂಪುಗೊಂಡಿರುವವರು. ಹಾಗಾಗಿ ಅವರು ತಮಗೊಂದು ‘ಅರಣ್ಯಮಯಕೋಶ’ವಿದೆ ಎಂದು ಹೀಗೆ ಕಾವ್ಯದಲ್ಲಿ ಅಭಿವ್ಯಕ್ತಿಸಿದ್ದಾರೆ. ಅದು ಅವರ ಅರಣ್ಯಾನುಭವದ ವಿಶಿಷ್ಟ ಪದ ಸೃಷ್ಟಿ.
‘ಅನ್ನಮಯದಾಚೆಯಲಿ
ಪ್ರಾಣಮಯದೀಚೆಯಲಿ
ನನಗಿರುವುದೊಂದಲೆ, ಅರಣ್ಯಮಯ ಕೋಶ?’
ಬರಲುವೋಗು
ಬರಲುವೋಗು (ಕ್ರಿ). ಎಲೆಗಳು ಉದುರಿ ಬೋಳಾಗಿರು
(ಬರಲು + ಪೋಗು) ಸೀತೆಯನ್ನು ಆಕರ್ಷಿಸುತ್ತ ಸುಳಿದಾಡಿದ ಬಂಗಾರದ ಜಿಂಕೆಯನ್ನು ಕವಿ ಅನನ್ಯವಾಗಿ ವರ್ಣಿಸಿದ್ದಾರೆ. ಅದರ ಕೊಂಬುಗಳನ್ನು ವರ್ಣಿಸುವಾಗ, ಅದು ಮಾಗಿಯ ಕಾಲದಲ್ಲಿ ಎಲೆಗಳು ಉದುರಿ ಬೋಳಾಗಿರುವ ಬೂರುಗ ಮರ ಕವಲುಗಣೆಗಳಿಂದ ಮಲೆ ತಲೆಗೆ ಕೋಡು ಮೂಡಿದಂತೆ ಹೇಗೊಹಾಗೆ ಇದ್ದಿತು ಎಂದು ಅರಣ್ಯಾನುಭವವನ್ನು ಹೊಸ ಪ್ರತಿಮೆಯಲ್ಲಿ ಮೂಡಿಸಿದ್ದಾರೆ. ಇಂದ್ರಿಯಾನುಭವದ ‘ಬರಲುವೋಗು’ ಪದ ಅವರ ಬೌದ್ಧಿಕ ಕಲ್ಪನೆಯಲ್ಲಿ ಹೊಸ ನುಡಿಯಾಗಿ ಜಿಂಕೆಯ ಕೋಡಿನ ಚಿತ್ರಣದಲ್ಲಿ ಕನ್ನಡ ಕಾವ್ಯದಲ್ಲಿ ಸೇರ್ಪಡೆಗೊಂಡಿದೆ.