ಬೆಟ್ಟ–ಕಾಡುಗಳ ನಡುವಿನ ಹೆಬ್ಬಾವಿನಂತೆ ಬಿದ್ದಿರುವ ಹೆದ್ದಾರಿ ಬದಿಯ ಧಾಬಾ ಕಾದಂಬರಿಯ ಕೇಂದ್ರಬಿಂದು. ಕಾಡನ್ನು ಅವಲಂಬಿಸಿದವರು, ಕಾಡಿನ ರಕ್ಷಣೆಗೆ ಹೋರಾಡುವವರು, ಹೋರಾಡಿದಂತೆ ಮಾಡುವವರು, ಆಶಾ ಕಾರ್ಯಕರ್ತೆ ನಳಿನಿ, ಪ್ರೇಮವನ್ನರಸಿ ಹೋದ ನಂದಿನಿ, ಪೆಟ್ಟಿಗೆ ಅಂಗಡಿಯ ಗಾಂವ್ಕಾರ್ ಕುಟುಂಬ. ಹೆಂಡತಿ ಅಗಲಿದಳೆಂದು ಕಣ್ಣೀರಾಗುವ ಕೇಣಿ ಅವರು, ಮಗ ಮನೆಗೆ ಮರಳಿದನೆಂದು ಸಮಾಧಾನಪಡಬೇಕು, ಮಗಳು ಮನೆ ಬಿಟ್ಟಳೆಂದು ದುಃಖಿಸಬೇಕೋ ಎಂಬ ಗೊಂದಲದಲ್ಲಿರುವಾಗಲೇ, ಬದುಕು ಮತ್ತೆ ಮಗ್ಗುಲು ಬದಲಿಸುತ್ತದೆ. ಮಗ ಮತ್ತೆ ಜೈಲು ಪಾಲಾಗುತ್ತಾನೆ. ಲಾರಿಗಳಿಂದಲೇ ಕಳ್ಳಸಾಗಣೆ ಮಾಡುವ ಮಂಜುನಾಥ, ನಂದಿನಿಯ ಪ್ರಿಯಕರ ವೆಂಕಟ್ ಆಚಾರಿ.. ಹೀಗೆ ಕೆಲವೇ ಪಾತ್ರಗಳಾದರೂ ಉತ್ತರ ಕನ್ನಡ ಜಿಲ್ಲೆಯ ತಳಮಳಗಳನ್ನೆಲ್ಲ ಕಾದಂಬರಿ ಒಂದೆಡೆ ಹೆಣೆದಿಡುತ್ತದೆ. ಈ ಯುಗದ ತಲ್ಲಣಗಳು, ಹಿರಿಯ ಜೀವದ ತವಕ, ಯತಾರ್ಥ ಜೀವಗಳು, ಅತ್ಯಾಸೆಯ ಮನುಷ್ಯರು–ಹೀಗೆ ಎಲ್ಲವನ್ನೂ ಒಂದೊಂದೇ ಎಳೆಯಾಗಿ ಬಿಡಿಸುತ್ತಲೇ ನಮ್ಮೊಳಗಿನ ಸಣ್ಣತನವನ್ನೂ, ಇರಬೇಕಾಗಿರುವ ಧಾರಾಳಿತನವನ್ನೂ ಲೇಖಕಿ ಸುನಂದಾ ಕಡಮೆ ಹೇಳುತ್ತ ಹೋಗುತ್ತಾರೆ.