ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಉರಿಧಗೆಯ ಬದುಕಿನ ಬಿಡಿ ಚಿತ್ರಗಳು– ‘ಏಳು ಮಲ್ಲಿಗೆ ತೂಕದವಳು’

Published 8 ಅಕ್ಟೋಬರ್ 2023, 2:30 IST
Last Updated 8 ಅಕ್ಟೋಬರ್ 2023, 2:30 IST
ಅಕ್ಷರ ಗಾತ್ರ

– ಗೌರಿ

ಧಣೇರ ಬಾವಿ’ ಸಂಕಲನದ ಮೂಲಕ ಗಮನಸೆಳೆದಿದ್ದ ಶರಣಬಸವ ಕೆ. ಗುಡದಿನ್ನಿ ಅವರ ಇತ್ತೀಚೆಗಿನ ಕಥಾಸಂಕಲನ ‘ಏಳು ಮಲ್ಲಿಗೆ ತೂಕದವಳು’. ಬಿಸಿಲನಾಡಿನ ಉರಿಧಗೆಯ ಬದುಕಿನ ಬಿಡಿ ಚಿತ್ರಗಳು ಈ ಕಥೆಗಳಲ್ಲಿ ಹೊಗೆಯಾಡುತ್ತಿವೆ.

ಸಂಕಲನದ ಮೊದಲ ಕಥೆ ‘ಭೂಮಿಗೆ ಅರ್ಧ ಬೆಳದಿಂಗಳು’ ವಸ್ತುವಿನ ಕಾರಣಕ್ಕೆ, ಗ್ರಹಿಕೆಯ ಕಾರಣಕ್ಕೆ ಗಮನಸೆಳೆಯುತ್ತದೆ. ವಾದಿರಾಜನ ಗೆಳೆಯ ರಾಘು ಮುತ್ತು ಕಟ್ಟಿಸಿಕೊಳ್ಳುವ ಪ್ರಸಂಗದೊಂದಿಗೆ ಕಥೆ ಆರಂಭವಾಗುತ್ತದೆ. ವಾದಿಯ ತಂದೆಯೂ ಸಲಿಂಗಿಯಾಗಿದ್ದವನು. ಜನ್ಮದತ್ತವಾಗಿ ಬಂದಿರುವ ‘ಜೆಂಡರ್‌’ ಅನ್ನು, ಒಂದು ಊನವಾಗಿ ನೋಡುವ ವಾದಿ, ತಂದೆಯನ್ನು ದ್ವೇಷಿಸುತ್ತಲೇ ಬೆಳೆಯುತ್ತಾನೆ. ಅವನ ದ್ವೇಷ ತುಂಬಿದ ಕಣ್ಣಿಗೆ ತಂದೆಯ ಉಳಿದ ಯಾವ ಗುಣವೂ, ತನ್ನೆಡೆಗಿನ ಅಮಿತವಾದ ಪ್ರೀತಿಯೂ ಕಾಣಿಸುವುದೇ ಇಲ್ಲ. ಆದರೆ ತಂದೆ ತೀರಿಕೊಂಡಾಗ ಸೇರಿದ್ದ ಅಪಾರ ಪ್ರಮಾಣದ ಜನರನ್ನು ನೋಡಿ ಅವನಿಗೆ ದಿಗ್ಭ್ರಮೆಯಾಗುತ್ತದೆ. ಈ ಕಥೆ, ಇತ್ತೀಚೆಗೆ ಜಗತ್ತಿನ ಸಾಹಿತ್ಯಲೋಕದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಲಿಂಗ ಸಂವೇದನೆಯ ಅದರಲ್ಲಿಯೂ ಎಲ್‌ಜಿಬಿಟಿಕ್ಯೂ ಸಮುದಾಯದವರ ಸಮಸ್ಯೆಯನ್ನು ಹೊರಗಿನ ಕಣ್ಣಿನಿಂದ ನೋಡುತ್ತದೆ. ಎರಡು ತಲೆಮಾರಿನ ಚಿತ್ರಣವನ್ನು ಕಟ್ಟಿಕೊಡುತ್ತಲೇ ಸಮಾಜದೊಳಗೇ ಇರುವ ಒಂದು ಚಲನೆಯನ್ನೂ ಹಿಡಿಯಲು ಯತ್ನಿಸುತ್ತಿರುವುದು ಈ ಕಥೆಯನ್ನು ಇನ್ನಷ್ಟು ಜೀವಂತಗೊಳಿಸಿದೆ. ರಾಘು ಜೋಗತಿಯಾಗುವುದನ್ನು ನೋವಿನಿಂದಲಾದರೂ ಒಪ್ಪಿಕೊಳ್ಳುವ ಅವನ ಅಮ್ಮನ ನಿಲುವು ಈ ಚಲನೆಯ ಸೂಚನೆಯೇ ಆಗಿದೆ.

‘ತಾಂಬೇಲು’ ಈ ಸಂಕಲನದ ಇನ್ನೊಂದು ಗಮನಾರ್ಹವಾದ ಕಥೆ. ಜೈನಾಬಿ ಎಂಬ ಮುಸ್ಲಿಂ ಸಮುದಾಯದ ಹೆಣ್ಣಿನ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಈ ಕಥೆ, ಅವಳ ಛಲವನ್ನು, ಬದುಕುವ ಹಟವನ್ನು ಹೇಳುತ್ತಲೇ, ಅವಳ ಜೀವಪರವಾದ ನಿಲುವನ್ನು ಬಹುಸಶಕ್ತವಾಗಿ ಕಟ್ಟಿಕೊಡುತ್ತದೆ. ಬದುಕಿನುದ್ದಕ್ಕೂ ಹಿಂಸಿಸಿ ಕಾಡಿದ ಗಂಡ, ಹರೆಯಕ್ಕೆ ಬರುತ್ತಲೇ ತನ್ನ ಬಿಟ್ಟುಹೋದ ಮಗ ಅವಳ ಬದುಕನ್ನು, ಜೀವದೃಷ್ಟಿಯಲ್ಲಿನ ಶ್ರೀಮಂತಿಕೆಯನ್ನು ಬರಡುಗೊಳಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಕಥೆಯ ಕೊನೆಯೇ ಸೂಚಿಸುತ್ತದೆ. 

‘ಏಳುಮಲ್ಲಗೆ ತೂಕದವಳು’ ಕಥೆ ಸರಾಗವಾಗಿ ಓದಿಸಿಕೊಂಡು ಹೋಗುವಂತಿದ್ದರೂ ಈಗಾಗಲೇ ಬಹುವಾಗಿ ಬಳಕೆಯಾಗಿಬಿಟ್ಟಿರುವ ವಸ್ತು ಮತ್ತು ರಚನೆಯ ಕಾರಣಕ್ಕೆ ಮನಸ್ಸಿಗೆ ಅಷ್ಟಾಗಿ ತಾಕುವುದಿಲ್ಲ. ಹಳೆಯ ವಸ್ತುವನ್ನು ಆಯ್ದುಕೊಂಡ ಕಥೆ ಗೆಲ್ಲಬಾರದು ಎಂದೇನಿಲ್ಲ. ಆದರೆ ಅನುಭವದ ಮೂಲಕ ಆ ವಸ್ತುವಿಗೆ ಹೊಸ ನೋಟವನ್ನು, ಜೀವನದೃಷ್ಟಿಯನ್ನು ಕೊಡುವ ಸಾಮರ್ಥ್ಯ ಕತೆಗಾರನಿಗಿರಬೇಕು. ಅಂಥ ಹೊಸ ಅನುಭವವಾಗಲಿ, ಜೀವನದೃಷ್ಟಿಯಾಗಲಿ ಈ ಕಥೆಯಲ್ಲಿ ಕಾಣಿಸುವುದಿಲ್ಲ.

ಇಲ್ಲಿನ ಬಹುತೇಕ ಎಲ್ಲ ಕಥೆಗಳಲ್ಲಿಯೂ ಕೆಳವರ್ಗದ ಜನರ ಬವಣೆಯ ಬದುಕು ದಟ್ಟವಾಗಿ ಚಿತ್ರಿತಗೊಂಡಿದೆ. ಸಾಲುಸಾಲಿಗೂ ಎದುರಾಗುವ ಕಾಗುಣಿತ ದೋಷ ಓದಿಗೆ ತೊಡಕೇ ಹೌದು. ಭಾಷೆಯ ಬಳಕೆ ಮತ್ತು ಅನುಭವವನ್ನು ಹೊಸ ರೀತಿಯಲ್ಲಿ ಗ್ರಹಿಸುವ ಬಗ್ಗೆ ಗಮನಹರಿಸಿದರೆ ಖಂಡಿತ ಶರಣಬಸವ ಅವರಿಂದ ಇನ್ನಷ್ಟು ಗಟ್ಟಿಯಾದ ಕಥೆಗಳನ್ನು ನಿರೀಕ್ಷಿಸಬಹುದು.

ಏಳು ಮಲ್ಲಿಗೆ ತೂಕದವಳು

ಲೇ: ಶರಣಬಸವ ಕೆ. ಗುಡದಿನ್ನಿಪ್ರ: ಟಾಮಿ ಪ್ರಕಾಶನ

ಸಂ: 8217337933

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT