ಈ ಅಲಂಕಾರಪದ್ಯಗಳ ಜೊತೆಗೆ ಪುಸ್ತಕದಲ್ಲಿ ‘ಶಾರ್ದೂಲವಿಕ್ರೀಡಿತಶತಕ’ ಎಂಬ ಪದ್ಯಗುಚ್ಛವನ್ನೂ ಸೇರಿಸಿದ್ದಾರೆ. ಶಾರ್ದೂಲವಿಕ್ರೀಡಿತವೃತ್ತದಲ್ಲಿ ನೂರು ಪದ್ಯಗಳನ್ನು ಸುಭಾಷಿತಗಳಾಗಿ ಸಂಸ್ಕೃತದಲ್ಲಿ ರಚಿಸಿ, ಅವುಗಳ ಕನ್ನಡ ಅನುವಾದವನ್ನೂ ಒದಗಿಸಿದ್ದಾರೆ. ಪ್ರಾಚೀನ ಪರಂಪರೆಯಲ್ಲಿರುವಂತೆ ಈ ಸುಭಾಷಿತಗಳನ್ನು ಸಮಸ್ಕಾರಪದ್ಧತಿ, ವಿದ್ವತ್ಪದ್ಧತಿ, ಕವಿಪದ್ಧತಿ, ಧನಪದ್ಧತಿ, ಭಕ್ತಿಪದ್ಧತಿ, ಶೃಂಗಾಪದ್ಧತಿ, ಗುರುಶಿಷ್ಯಪದ್ಧತಿ, ವೈರಾಗ್ಯಪದ್ಧತಿ ಎಂದು ಹಲವು ಪದ್ಧತಿಗಳಲ್ಲಿ ವಿಂಗಡಿಸಲಾಗಿದೆ. ನಾಗರಾಜರಾಯರ ಈ ಕೃತಿಗೆ ಟಿ. ವಿ. ವೆಂಕಟಾಚಲಶಾಸ್ತ್ರಿ ಅವರ ಮುನ್ನುಡಿಯಿದೆ.