ಇತ್ತೀಚೆಗೆ ಬಿಡುಗಡೆಯಾದ ‘777 ಚಾರ್ಲಿ’ ಸಿನಿಮಾ ಹಲವರ ಮನಸ್ಸಿನ ಮೇಲೆ ಪ್ರಭಾವ ಬೀರಿತ್ತು. ಇಂಥ ಕಥೆಯೊಂದು ಈ ಕೃತಿಯ ಆರಂಭದಲ್ಲೇ ಇದೆ. ‘ತುಂಟಿ ರೂಬಿಯ ದಶಾವತಾರ’ದ ಭಾವಲೋಕದಲ್ಲಿ ಮಿಂದೆದ್ದ ಲೇಖಕರು ಒಂದು ಅದ್ಭುತವಾದ ಚಿತ್ರಣವನ್ನೇ ಓದುಗರ ಮುಂದಿರಿಸಿದ್ದಾರೆ. ಲೇಖಕರಿಗಷ್ಟೇ ಕೇಳಿಸಿರುವ ರೂಬಿಯ ಮನಸ್ಸಿನ ಮಾತುಗಳನ್ನು ಕಟ್ಟಿಕೊಟ್ಟ ರೀತಿ ಮನಸ್ಸನ್ನು ಮುಟ್ಟುತ್ತದೆ. ಬರವಣಿಗೆ, ಭಾಷೆ, ನಿರೂಪಣೆ, ವರ್ಣನೆ ದೃಷ್ಟಿಯಿಂದ ಉತ್ತಮವಾದ ಲಲಿತ ಪ್ರಬಂಧವಿದು. ‘ರೆಕ್ಕೆ ಬಾಲಗಳ ಲೋಕ’, ‘ಗುಬ್ಬಚ್ಚಿಗಳ ಶೋಕ ಪ್ರಸಂಗ’ದಲ್ಲಿ ಪ್ರಾಣಿಗಳ ಹೊಸ ಲೋಕವೊಂದಿದೆ. ಖುಷ್ವಂತ್ ಸಿಂಗ್ ಬದುಕು, ಬರಹ, ಬೇಹುಗಾರಿಕೆಯೊಳಗಿನ ಲೋಕ, ವಂಡಾರು ಕಂಬಳದ ವೈಶಿಷ್ಟ್ಯ ಸೇರಿದಂತೆ ಆಸಕ್ತಿದಾಯಕ ವಿಚಾರಗಳನ್ನು ಇಲ್ಲಿನ ಲೇಖನಗಳಲ್ಲಿ ಕಟ್ಟಿಕೊಡಲಾಗಿದೆ.