ಮಹಾತ್ಮಾ ಗಾಂಧಿ ಅವರ ಹತ್ಯೆ ಕುರಿತಂತೆ ಅಂದಿನ ಕೇಂದ್ರ ಗೃಹ ಸಚಿವ ಸರ್ದಾರ್ ವಲ್ಲಭಾಬಾಯ್ ಪಟೇಲ್ ಅವರು 1948ರ ಫೆ. 27ರಂದು ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಪತ್ರ ಬರೆದು, ‘ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾದ ಮತಾಂಧರ ಗುಂಪೊಂದು ಪಿತೂರಿಯನ್ನು ಮಾಡುತ್ತಿದೆ. ತಮ್ಮ ಪಿತೂರಿ ನಡೆಯುವಂತೆ ನೋಡಿಕೊಳ್ಳುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದರು. ಆದರೆ ಇಂದಿನ ಹಿಂದುತ್ವ ಅನುಯಾಯಿಗಳು ಅದೇ ಸವರ್ಕರ್ ಅವರನ್ನು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದೆನ್ನುತ್ತಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಅಧ್ಯಾಪಕ ಡಾ. ಶಂಸುಲ್ ಇಸ್ಲಾಂ ಅವರು ‘ಸಾವರ್ಕರ್ ಅನ್ಮಾಸ್ಕ್ಡ್’ ಕೃತಿ ಮೂಲಕ ಈ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದರು. ಈ ಇಂಗ್ಲಿಷ್ ಕೃತಿಯನ್ನು ತಡಗಳಲೆ ನರೇಂದ್ರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಕನ್ನಡ ಕೃತಿಯಲ್ಲಿ ವಿನಾಯಕ ದಾಮೋದರ ಸಾವರ್ಕರ್ ನಿಜವಾಗಿಯೂ ದಂತೆಕತೆಯಾದ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಹೌದೇ..? ಸಾವರ್ಕರ್ ತಮ್ಮ ಬದುಕಿನ ಬಹುಪಾಲನ್ನು ಸೆಲ್ಯುಲರ್ ಜೈಲಿನಲ್ಲೇ ಕಳೆದರೇ..? ಸಾವರ್ಕರ್ ಕ್ಷಮಾಯಾಚನೆ ಅರ್ಜಿಗಳು ಸ್ವಾತಂತ್ರ್ಯ ಗಳಿಕೆಗೆ ಒಂದು ತಂತ್ರವೇ..? ಮುಸ್ಲಿಂ ಲೀಗ್ನ ವಿರುದ್ಧ ಸಾವರ್ಕರ್ ಬಂಡೆಯಂತೆ ನಿಂತಿದ್ದರೇ..? ಸಾವರ್ಕರ್ ಒಬ್ಬ ವಿಚಾರವಾದಿ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ್ದರೇ..? ಗಾಂಧಿ ಹತ್ಯೆಯ ಪ್ರಕರಣದಲ್ಲಿ ಆರೋಪ ಸಾಬೀತಾಯಿತೇ..? ಸಾವರ್ಕರ್ ಹಿಂದುತ್ವವು ಭಾರತದ ವೈಜ್ಞಾನಿಕ ಆಧಾರದಲ್ಲಿತ್ತೇ..? ಎಂಬಿತ್ಯಾದಿ ಮಿಥ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ.
ಇದಕ್ಕಾಗಿ ಆರ್ಎಸ್ಎಸ್ನ ಮುಖವಾಣಿ ಆರ್ಗನೈಸರ್ ಒಳಗೊಂಡಂತೆ ಹಲವು ವರದಿಗಳು, ಅಂದಿನ ಕೃತಿಗಳು, ಗಣ್ಯರ ಮಾತುಗಳು ಒಳಗೊಂಡಂತೆ ಹಲವು ಆಕರಗಳನ್ನು ಟಿಪ್ಪಣಿ ರೂಪದಲ್ಲಿ ಬಳಸಿಕೊಳ್ಳಲಾಗಿದೆ. ಮಿಥ್ಯೆ ಏನು ಹಾಗೂ ಅದರ ವಾಸ್ತವಾಂಶವೇನು ಎಂಬುದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಈ ಕೃತಿಯಲ್ಲಿದೆ.
ವಿ.ಡಿ.ಸಾವರ್ಕರ್: ಏಳು ಮಿಥ್ಯೆಗಳು
ಲೇ: ಶಂಸುಲ್ ಇಸ್ಲಾಂ
ಅನು: ತಡಗಳಲೆ ನರೇಂದ್ರ ರಾವ್
ಪ್ರ: ಕ್ರಿಯಾ ಮಾಧ್ಯಮ ಪ್ರೈ. ಲಿ.
ಸಂ: 9036082005