<p>ಹೊತ್ತೊತ್ತಿಗೂ ಒತ್ತುವ, ಮುಖ ಕೆತ್ತುವ ದಿನಗಳ ನಡುವೆಯೇ ಇಲ್ಲಿ ಕವಿತೆಯ ರಚನೆ ನಡೆದಿದೆ. ಕನ್ನಡ ಕವಿತೆಯ ಓದಿನ ನೆರವಿನಿಂದಲೇ ಹೇಳುವುದಾದರೆ, ಕವಿತೆ ಅಖಂಡತೆಯ ರೂಪವೇ ತಾನಾಗಿದೆ.<br /> <br /> ಹೃದ್ಗತವಾದ, ಸುವಿಶಾಲ ಆಗಿರುವಂತಹ ಮೈಯನ್ನು ಕನ್ನಡದ ಕವಿತೆ ಪಡೆದುಕೊಂಡಿರುವ ಕಾರಣದಿಂದಾಗಿಯೇ ಇಲ್ಲಿಯವರೆಗೂ ನಡೆದುಬಂದಿದೆ. ಕವಿತೆ ಏಕಕಾಲದಲ್ಲಿ ಒಂದು ಪ್ರಕ್ರಿಯೆಯೂ, ಆತ್ಮಶೋಧವೂ ಆಗಿರುವುದರಿಂದ ಪ್ರತಿ ಕವಿಯೂ ತನ್ನ ಕವಿತೆಯಲ್ಲಿ ಅಖಂಡತೆಯ ಬಿಂಬವನ್ನು ಪ್ರತಿಫಲಿಸಲು ಇರುವಷ್ಟು ಕಾಲ ಒದ್ದಾಡುತ್ತಾನೆ.<br /> <br /> ಹೀಗಿದ್ದಾಗಲೂ ಸರ್ವರಿಗೂ ಕವಿತೆ ಸಂಬಂಧಪಟ್ಟಿದೆ ಎಂಬ ನಂಬಿಕೆ ಈಗೀಗ ಮುಕ್ಕಾಗುತ್ತಿದೆ. ಕವಿತೆಯ ಅಖಂಡತೆಯೊಳಗೆ ತಮ್ಮದೊಂದು ಖಂಡವನ್ನು ಹುಟ್ಟಿಸಿಕೊಳ್ಳುವ ಉಮೇದನ್ನು ಇಂದಿನ ಅನೇಕ ಕವಿಗಳು ಪ್ರಕಟಿಸುತ್ತಿದ್ದಾರೆ. <br /> <br /> ದೇಸಿ, ನಗರ, ಅನುಭಾವ, ಅಲ್ಪಸಂಖ್ಯಾತ, ದಲಿತ, ಮುಸ್ಲಿಂ, ಸ್ತ್ರೀ, ಮಧ್ಯಮವರ್ಗ ಹೀಗೆ ಖಂಡಗಳು ಕವಿಗಳಿಂದ, ಕವಿಗಳಿಗಾಗಿ ತಲೆಯೆತ್ತುತ್ತಿವೆ. (ಕನ್ನಡ ಕವಿತೆ ಬರೆಯುವಂತಾಗಬೇಕು ಎನ್ನುತ್ತಾರೆ ಕೆ.ವಿ. ನಾರಾಯಣ. ಈ ಚಿಂತನೆಯ ಪೂರ್ವದಲ್ಲಿಯೇ, ಸಾಹಿತ್ಯದಲ್ಲಿಯೂ ಮೀಸಲು ಕೇಳಬೇಡಿ ಎನ್ನುತ್ತಾರೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ).<br /> <br /> ಪಾಲು ಮಾಡಿಕೊಳ್ಳಲೆಂದೇ ಕವಿತೆ ಬರೆಯುತ್ತಿರುವ ಹಲವರ ಮಧ್ಯೆ ಕವಿ ಆನಂದ ಝುಂಜರವಾಡ ಭಿನ್ನವಾಗಿ ನಿಲ್ಲುತ್ತಾರೆ. ಅವರು ಕನ್ನಡದ ಕವಿತೆ ಬರೆಯುವ ಪ್ರಾಮಾಣಿಕ ಪ್ರಯತ್ನದಲ್ಲಿ ಕೆಳೆದ ನಾಲ್ಕೂವರೆ ದಶಕಗಳಿಂದಲೂ ತೊಡಗಿಕೊಂಡಿದ್ದಾರೆ. ಮುಖ್ಯವಾಗಿ ಕವಿತೆಯೆಂಬ ಹರಿಗೋಲನ್ನು ಹಿಡಿದು ಬಾಳನದಿಯನ್ನು ದಾಟುವ ಹಂಬಲವನ್ನು ತೋರುತ್ತಿದ್ದಾರೆ. <br /> <br /> ಆನಂದ ಝುಂಜರವಾಡರ `ಪದಗಳ ಪರಿಧಿಯಲ್ಲಿ~, `ಖನನೋದ್ಯಮ~, `ಎಲ್ಲಿದ್ದಾನೆ ಮನುಷ್ಯ~, `ಶಬ್ದ ಪ್ರಸಂಗ~, `ದಿಂಡೀ ಮತ್ತು ದಾಂಡೀ~, `ಗಂಡ ಭೇರುಂಡ~ ಕವನ ಸಂಕಲನಗಳು ಈಗ `ಪ್ರೇತಕಾಂಡ~ ಹೆಸರಿನಲ್ಲಿ ಒಟ್ಟಾಗಿ ಹೊರಬರುತ್ತಿದೆ. ಕವಿ ಸಹಜವಾಗಿಯೇ ತಮ್ಮ ಸಂವೇದನೆಯ ಭಾಗವಾಗಿರುವ ಗರುಡಪುರಾಣದ ಪ್ರೇರಣೆಯಿಂದ ಈ ಸಂಕಲನಕ್ಕೆ `ಪ್ರೇತಕಾಂಡ~ ಎಂದು ಹೆಸರಿಟ್ಟಿದ್ದಾರೆ. <br /> <br /> ಲೋಕದ ಕಟ್ಟಳೆಯಲ್ಲಿ ಜೀವಿಸುವುದೆಂದರೆ, ಯಾತನಾಶಿಬಿರದಲ್ಲಿ ಭಾಗವಹಿಸುವುದಾಗಿದೆ ಎಂಬ ತಿಳಿವು ಪ್ರೇತಕಾಂಡದಲ್ಲಿದೆ. ಈ ಮೂಲಕ ಕವಿ ಹಾಕಿಕೊಟ್ಟಿರುವ ಚೌಕಟ್ಟನ್ನು ಮೀರಿ ಇಲ್ಲಿನ ಕವಿತೆಗಳು ವರ್ತಿಸುತ್ತವೆ. <br /> <br /> ಅಜ್ಜ ತನ್ನ ಮನೆ ಮಕ್ಕಳು, ಮೊಮ್ಮಕ್ಕಳೊಡನೆ ನಡೆಸುತ್ತಿರುವ ಆಪ್ತಸಲ್ಲಾಪ ಎನಿಸುವ ಈ ಕವಿತೆಗಳು, ಎಳೆಯ ಜೀವಗಳು ಪಕ್ಕಾಗಿ ಬಲಿತುಕೊಳ್ಳಲಿ ಎಂಬ ಇರಾದೆಯಲ್ಲಿ ಮಾತಿಗಿಳಿಯುತ್ತವೆ. ಹಾಗೆ ನೋಡಿದರೆ, ನಮ್ಮ ಕವಿಗಳು ಹೊಸಗನ್ನಡದಲ್ಲಿ ಎರಡು ಪ್ರಧಾನ ಧಾರೆಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಒಂದನ್ನು ಭಾವಪೂರ್ಣಧಾರೆ ಎಂದೂ, ಇನ್ನೊಂದನ್ನು ಚಿತ್ರಪಟಧಾರೆ ಎಂದೂ ಕರೆಯಬಹುದಾಗಿದೆ. <br /> <br /> ಭಾವಪೂರ್ಣವು ಆದಷ್ಟೂ ಆಗುವ ನಡೆಯೊಂದಿಗೆ ಬದುಕಿನ ತಣಿಗೆಯನ್ನು ತುಂಬಿಕೊಳ್ಳುವ ಅಪೇಕ್ಷೆಯನ್ನು ಹೊಂದಿದೆ. ಈ ಧಾರೆ ಅನುಭವಕ್ಕಿಂತಲೂ ಮನುಷ್ಯ ಸಣ್ಣವನೆಂದು ಒಪ್ಪಿಕೊಳ್ಳುತ್ತದೆ. ಹಾಗಾಗಿ ಇಲ್ಲಿ ಜೀವಕೇಂದ್ರವೊಂದು ನಿರ್ಮಾಣವಾಗುತ್ತದೆ. ಚಿತ್ರಪಟವು ತನಗೆ ಬೇಕಾದ ಹಳ್ಳದಲ್ಲಿ ಭಾವವನ್ನು ತುಂಬುತ್ತದೆ. ಆಳವಾದ ವಿಚಾರ ಪರಂಪರೆಯ (Ideology) ಸಹವರ್ತಿಯಾಗಿರುತ್ತದೆ. <br /> <br /> ಈ ಧಾರೆ ವ್ಯಕ್ತಿ, ಪುರಾಣ, ಚರಿತ್ರೆ ಮತ್ತು ರೂಢಿಯ ಕಡೆಗೆ ಹೋಗಿ ಬರುತ್ತಿರುತ್ತದೆ. ಆದರಿಂದ ಇಲ್ಲಿ ಶಕ್ತಿಕೇಂದ್ರವೊಂದು ನಿರ್ಮಾಣವಾಗುತ್ತದೆ. ಜೀವಕೇಂದ್ರ ಮತ್ತು ಶಕ್ತಿಕೇಂದ್ರವು ಒಬ್ಬ ಕವಿಯಲ್ಲಿಯೇ ಅಂತಸ್ಥವಾಗಿರುವ ಸಾಧ್ಯತೆ ಹೆಚ್ಚಿದೆ. ಇವು ಬೇರೆಯಾಗಿ ಬಿಡಿ ಕವಿತೆಗಳಲ್ಲಿ ಕಾಣಿಸಿಕೊಳ್ಳುವ ಅವಕಾಶವೂ ಇದೆ.<br /> <br /> ಅನೇಕ ವೇಳೆ ಶಕ್ತಿಕೇಂದ್ರವು ಒಟ್ಟುಮಾಡುವ ಜವುಳು ಚಹರೆಗಳನ್ನು ಜೀವಕೇಂದ್ರದಿಂದ ಹೊರಡುವ ಚಿಲುಮೆ ಒರೆಸಿದೆ. ಅಪರೂಪಕ್ಕೆ ಈ ಕೇಂದ್ರಗಳು ಪರಸ್ಪರ ಕೈಹಿಡಿದು ಸಮಹೆಜ್ಜೆ ಹಾಕಿರುವುದೂ ಉಂಟು. ಬೇಂದ್ರೆ, ಕುವೆಂಪು, ಪು.ತಿ.ನರಸಿಂಹಾಚಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎಂ.ಗೋಪಾಲಕೃಷ್ಣ ಅಡಿಗ ಅವರು ಈ ಎರಡು ಕೇಂದ್ರಗಳನ್ನು ಸೂರೆಹೊಡೆದಿದ್ದಾರೆ. ಆ ಹಾದಿಯೊಂದಿಗೆ ಸಹ ಪ್ರಯಾಣ ಬೆಳೆಸುತ್ತಿರುವ ಆನಂದ ಝುಂಜರವಾಡರ ಕವಿತೆಗಳು ಅನೇಕ ಏರಿಳಿತವನ್ನು ಆರಂಭದಿಂದಲೂ ಅನುಭವಿಸಿವೆ. ಅವರ ಮುಖ್ಯ ಆಸ್ಥೆ ಜೀವಕೇಂದ್ರವೇ ಆಗಿದೆ.</p>.<p>ಒಳಹೊಕ್ಕು ಅಗುಳಿ ಹಾಕಿಕೊಳ್ಳುವ ಅಗುಳಿಗೂ<br /> ಕುದಿಯುಕ್ಕಿ ಅಕ್ಕಿ ಅನ್ನವಾಗುವ ಕುದಿತ<br /> ಹಲವು ಹಸೀ ಕಾಳುಗಳ ಮೊಳಕೆಯೊಡಿಸಿ ಕುದ್ದ<br /> ಸಾಂಬಾರಿನಲ್ಲೂ ನಂಬಿ ಕಲಿಸಿಕೊಂಡಷ್ಟೇ<br /> ತುತ್ತಾಗುವ ಸತ್ವ<br /> ತಥಾಗತನ ಬೆತ್ತಲೆ ಬೊಗಸೆಗೂ ಒದಗಿದಷ್ಟೇ ಸತ್ಯ <br /> ಗುಂಡಿಗೆದೆಗೊಟ್ಟ ಜನಗಣಮನದ ಸ್ವತಂತ್ರ ಸಾತತ್ಯ<br /> <br /> ಉರುಳುವ ದಿನಗಳನ್ನು ಎದುರಿಸಿ ನಿಲ್ಲಬೇಕಾದರೆ ಗಾಂಧಿಯಂತಹ ಎಂಟೆದೆ ಬೇಕು. ಕುಕ್ಕೆಯೊಳಗಿನ ಕೋಳಿಯಂತೆ ಮಿಸುಕಾಡುವ ಜೀವ. ಆದರೂ ಈ ಬದುಕಿಗೆ ನಂಬಿಕೆಯೂ ಬೇಕು. ಅದರ ಬೆಳಕಲ್ಲಿ ಕಂಡಷ್ಟನ್ನು ಮಾತ್ರ ಕಾಣಿಸಬೇಕು. ನಮ್ಮನ್ನು ನಾವಷ್ಟೇ ನಂಬಿಕೊಂಡು ಇರಲು ಸಾಧ್ಯವಿಲ್ಲವಾದ್ದರಿಂದ, ಇನ್ನೊಂದು ಜೀವಿಯ ಸಾಮೀಪ್ಯವೂ ನಮಗೆ ಬೇಕಾಗಿರುವುದರಿಂದ ಇಲ್ಲಿ ಮಾತು ಸೇತುವೆಯಾಗಿದೆ. ಅಂತಹ ಮಾತು ಇರಬೇಕು ಹೇಗೆ? <br /> <br /> ಮಾತು ಸಾಕು ಎನಿಸುವಂಥ<br /> ಮಾತಿಗೂ ಮಾತ ಬಳಸಬೇಕು<br /> ಮಾತಿನಿಂದಲೇ ಮಾತ ನಿಂದಿಸುತ<br /> ಮಾತಿನ ಮಾತೃತ್ವ ಹೊಳೆಸಬೇಕು</p>.<p>ಯಾರೂ ಇಲ್ಲಿ ಇನ್ನೊಬ್ಬರ ಮಾತನ್ನು ಕಿವಿಗೆ ಹಾಕಿಕೊಳ್ಳುವಂತಿಲ್ಲ. ಅಂತಹ ವ್ಯವಧಾನವೂ ಇದ್ದಂತಿಲ್ಲ. ಏನೋ ದುಗುಡ ರಕ್ತಗತವಾದಂತಿದೆ. ಕವಿ ಕೇಳಿಕೊಳ್ಳುತ್ತಾರೆ: </p>.<p>ಮನುಷ್ಯನ ಮುಖ ಬಿಡಿಸಲು<br /> ಎಷ್ಟು ವಕ್ರರೇಖೆಗಳು ಬೇಕು?</p>.<p>ಲೆಕ್ಕ ಹಾಕಬೇಕು ಅನಿಸುತ್ತದೆ. ಎಲ್ಲರೂ ಎಲ್ಲಿಗೋ ಹೊರಟು ನಿಂತಂತಿದೆ. ಹಾಗೆ ಹೊರಟಿರುವವರ ಮಧ್ಯೆ ಸಾಮಾನ್ಯವಾದ ಕವಿಯೂ ಇರಬೇಕಾಗಿದೆ. ಕವಿಗೆ ಸಮಾಜವೆಂಬುದು ಹೊರಗಿಲ್ಲ, ಒಳಗಿದೆ; ಬದುಕಿನಲ್ಲಿ ಬೆರೆತುಹೋಗಿದೆ. ಕಣ್ಣಮುಂದಿನ ವಿದ್ಯಮಾನವನ್ನು ನೋಡಿ ಕೇಳಬೇಕೆನಿಸುತ್ತದೆ: <br /> <br /> ಗೆಳೆಯರೆ ಬಾಳಿನ ದುಃಖವನ್ನು <br /> ಸಮಾಜದ ಸಮಸ್ಯೆಯಾಗಿ<br /> ಏಕೆ ಅನುವಾದಿಸುತ್ತಿದ್ದೀರಿ?</p>.<p>ಹೀಗೆ ಕೇಳಿದ ಕವಿಗೆ ಸಿಟ್ಟಿಲ್ಲ. ಭೇದವೂ ಇಲ್ಲ. ಬದಲಿಗೆ ಒಂದು ಖಾತ್ರಿ ಇದೆ:</p>.<p>ನನ್ನ ನಿನ್ನ ಒಳ-ಒಲೆ ಕುದಿತವೇ ಪಾಕ <br /> ಪ್ರಪಂಚದ ಬಾಳೆಲೆಯ ತುಂಬ ಗಡಿಯ ಹರಹು <br /> ಬಡಿಸುವದೆಂದರೂ ಉಣ್ಣುವುದೇ ಮಣ್ಣಿನ <br /> ಅನ್ನ, ಕಂಬನಿಗಡಲಿನ ಅವರವರ ಋಣದ ಉಪ್ಪು <br /> ಉಣ್ಣುವುದೆಂದರೂ ಬಡಿಸುವುದೇ ಯಾರದೋ ಬೆವರು. <br /> ಜೀವಂತವಿರುವುದನ್ನು ಬೆವರು ಊರ್ಜಿತಗೊಳಿಸಿದೆ. ಆ ಬೆವರು ಒಡೆದಾಗೆಲ್ಲಾ ತನಗೆ ತಾನೆ ಹಾದಿ ತೆರೆದುಕೊಂಡಿದೆ: <br /> <br /> ಎದುರು ಬರುವೆ, ಬದಿಗೆ ಸರಿವೆ <br /> ತುಂಬಿ ಎಸರು ಪಾತ್ರೆಗೆ <br /> ದುಡಿತ ಕೊಟ್ಟ ಬದುಕ ಪಡೆದು <br /> ಹೆಜ್ಜೆ ಜೀವ - ಜಾತ್ರೆಗೆ</p>.<p>ಈ ಜಾತ್ರೆಯ ಬೆನ್ನಿಗೆ ಸಂಸಾರವೂ ಇದೆ. ಕೈ ಹಿಡಿದ ಸಂಗಾತಿ ಜೊತೆಗಿದ್ದರೂ ಪ್ರಶ್ನೆಗಳು ಮುಳ್ಳಾಗಿ ಚುಚ್ಚುತ್ತವೆ:</p>.<p>ಮೈ ಮುಟ್ಟಿ ತಿಳಿದೆವು <br /> ಮನ ಮುಟ್ಟಿದೆವು ಎಂದು <br /> ಆ ಮುತ್ತು, ಆ ಉಲುಹು <br /> ಆ ಉಸಿರು, ಆ ಬಸಿರು <br /> ತಿರುಗಣಿಯ ತಿರುಗ ತೊಟ್ಟಿಲ ಜೀಕವೆಂದು</p>.<p>ಹೀಗೆ ಪಡೆದುಕೊಂಡ ಮೇಲೂ ಕಳೆದುಕೊಂಡದ್ದು ಏನೂ ಇಲ್ಲ. ಯಾಕೆಂದರೆ-</p>.<p>ಕಿರೀಟವಾದ ಗರಿಗೆ <br /> ನವಿಲಾಗಿ ಕುಣಿವ ಭಾಗ್ಯವಿಲ್ಲ<br /> ಕೊಳಲು <br /> ಉಳಿದೆಲ್ಲ ಬಿದಿರುಗಳ ಹಾಡು <br /> ಹಾಡುತ್ತದೆ.</p>.<p>ಜೀವಿಸುವುದಕ್ಕೆ ಸಾಮಾನ್ಯತೆಯೇ ಸಾಕಾಗಿದೆ:<br /> <br /> ಎಂಥ ಕಲಾತ್ಮಕ ಆಕಾಶವೆಂದರೂ <br /> ಹಕ್ಕಿಗಳಿಗೇನೂ ಅವಕಾಶವಿಲ್ಲ<br /> ಮೊಟ್ಟೆಯೊಡೆದು ಮರಿಗಳಾದರು <br /> ಎಲ್ಲಿ ಹೊರ ಬರುತ್ತವೆ? <br /> ಚಿತ್ರ ಚೌಕಟ್ಟಿನಲ್ಲಿರುವವರೆಗೆ</p>.<p>ಒಳಹೊರಗಿನ ವರ್ತಮಾನದಲ್ಲಿ ಎಲ್ಲವೂ ನೆಟ್ಟಗಿಲ್ಲ. ಗೋಡೆಗಳ ಮೇಲೆ ಸಾಲು ಚಿತ್ರಗಳಿವೆ. ನೊಂದುಕೊಳ್ಳುವ ಮನ ಮಹಾತ್ಮರನ್ನು ನೆನೆಯುತ್ತದೆ:</p>.<p>ಹಚ್ಚಿಟ್ಟ ದೀಪಕ್ಕೆ ಎಣ್ಣೆ ಎರೆಯುವವರಿಲ್ಲ<br /> ಚಿವುಡವವರಿಲ್ಲ ಕಪ್ಪು ಕುಡಿಗೆ <br /> ಹೊಸ ಬತ್ತಿಗಳ ಹೊಸೆದು ಹೊತ್ತಿಸುವವರಿಲ್ಲ<br /> ಹೇಗೋ ನಡೆದಿದೆ ಕತ್ತಲೆಯ ನಡೆಗೆ <br /> ಮತ್ತೆ ಬರಬಹುದೆ ಆ ಅಜ್ಜ<br /> ಮರುಜನ್ಮ ಪಡೆದು?<br /> ಉಪ್ಪು ತೀರಿದ ಮನೆಯಲಿ ಹಚ್ಚಿಡುವನೆ<br /> ಹೊಸತೊರಿದು ಅರಿವು ದೀಪ</p>.<p>ಇಂತಹ ಹಲವಾರು ನಿಗಿನಿಗಿಸುವ ಬಾಳನೋಟಗಳನ್ನು ಕವಿ ಓದುಗರ ಅಂಗೈಯಲ್ಲಿರಿಸುತ್ತಾರೆ. ಆನಂದ ಝುಂಜರವಾಡರಿಗೆ ಕವಿ ಆಡುವ ಮಾತಿನ ಮೇಲೆ ವಿಪರೀತ ಮೋಹವೂ ಇದ್ದಂತಿದೆ. ಹಾಗಾಗಿ ಅನೇಕ ಕವಿತೆಗಳಲ್ಲಿ ವಾಚಾಳಿತನವು ಅನ್ನದಲಿ ಹರಳು ಸಿಗುವಂತಾಗುತ್ತದೆ. ಆ ಮಾತು ಬೇರೆ. ಕತ್ತಲೆಯೆಂಬುದು ಇತ್ತಲೆಯಯ್ಯ ಎನ್ನುತ್ತಾನೆ ಅಲ್ಲಮಪ್ರಭು. ಈ ಮಾತನ್ನು ತನ್ನ ಅನುಭವ ವಿಸ್ತಾರದಲ್ಲಿ ಕಾಣಿಸುವ ಸಲುವಾಗಿಯೇ ಆನಂದ ಝುಂಜರವಾಡ ಬರೆಯುತ್ತಿದ್ದಾರೆ. <br /> <br /> <strong>ಪ್ರೇತಕಾಂಡ<br /> </strong>ಲೇ: ಆನಂದ ಝುಂಜರವಾಡ<br /> ಪು: 496; ಬೆ: ರೂ. 300<br /> ಪ್ರ: ಕಿಟಕಿ ಪ್ರಕಾಶನ, ಮೈಸೂರು - 570023</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊತ್ತೊತ್ತಿಗೂ ಒತ್ತುವ, ಮುಖ ಕೆತ್ತುವ ದಿನಗಳ ನಡುವೆಯೇ ಇಲ್ಲಿ ಕವಿತೆಯ ರಚನೆ ನಡೆದಿದೆ. ಕನ್ನಡ ಕವಿತೆಯ ಓದಿನ ನೆರವಿನಿಂದಲೇ ಹೇಳುವುದಾದರೆ, ಕವಿತೆ ಅಖಂಡತೆಯ ರೂಪವೇ ತಾನಾಗಿದೆ.<br /> <br /> ಹೃದ್ಗತವಾದ, ಸುವಿಶಾಲ ಆಗಿರುವಂತಹ ಮೈಯನ್ನು ಕನ್ನಡದ ಕವಿತೆ ಪಡೆದುಕೊಂಡಿರುವ ಕಾರಣದಿಂದಾಗಿಯೇ ಇಲ್ಲಿಯವರೆಗೂ ನಡೆದುಬಂದಿದೆ. ಕವಿತೆ ಏಕಕಾಲದಲ್ಲಿ ಒಂದು ಪ್ರಕ್ರಿಯೆಯೂ, ಆತ್ಮಶೋಧವೂ ಆಗಿರುವುದರಿಂದ ಪ್ರತಿ ಕವಿಯೂ ತನ್ನ ಕವಿತೆಯಲ್ಲಿ ಅಖಂಡತೆಯ ಬಿಂಬವನ್ನು ಪ್ರತಿಫಲಿಸಲು ಇರುವಷ್ಟು ಕಾಲ ಒದ್ದಾಡುತ್ತಾನೆ.<br /> <br /> ಹೀಗಿದ್ದಾಗಲೂ ಸರ್ವರಿಗೂ ಕವಿತೆ ಸಂಬಂಧಪಟ್ಟಿದೆ ಎಂಬ ನಂಬಿಕೆ ಈಗೀಗ ಮುಕ್ಕಾಗುತ್ತಿದೆ. ಕವಿತೆಯ ಅಖಂಡತೆಯೊಳಗೆ ತಮ್ಮದೊಂದು ಖಂಡವನ್ನು ಹುಟ್ಟಿಸಿಕೊಳ್ಳುವ ಉಮೇದನ್ನು ಇಂದಿನ ಅನೇಕ ಕವಿಗಳು ಪ್ರಕಟಿಸುತ್ತಿದ್ದಾರೆ. <br /> <br /> ದೇಸಿ, ನಗರ, ಅನುಭಾವ, ಅಲ್ಪಸಂಖ್ಯಾತ, ದಲಿತ, ಮುಸ್ಲಿಂ, ಸ್ತ್ರೀ, ಮಧ್ಯಮವರ್ಗ ಹೀಗೆ ಖಂಡಗಳು ಕವಿಗಳಿಂದ, ಕವಿಗಳಿಗಾಗಿ ತಲೆಯೆತ್ತುತ್ತಿವೆ. (ಕನ್ನಡ ಕವಿತೆ ಬರೆಯುವಂತಾಗಬೇಕು ಎನ್ನುತ್ತಾರೆ ಕೆ.ವಿ. ನಾರಾಯಣ. ಈ ಚಿಂತನೆಯ ಪೂರ್ವದಲ್ಲಿಯೇ, ಸಾಹಿತ್ಯದಲ್ಲಿಯೂ ಮೀಸಲು ಕೇಳಬೇಡಿ ಎನ್ನುತ್ತಾರೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ).<br /> <br /> ಪಾಲು ಮಾಡಿಕೊಳ್ಳಲೆಂದೇ ಕವಿತೆ ಬರೆಯುತ್ತಿರುವ ಹಲವರ ಮಧ್ಯೆ ಕವಿ ಆನಂದ ಝುಂಜರವಾಡ ಭಿನ್ನವಾಗಿ ನಿಲ್ಲುತ್ತಾರೆ. ಅವರು ಕನ್ನಡದ ಕವಿತೆ ಬರೆಯುವ ಪ್ರಾಮಾಣಿಕ ಪ್ರಯತ್ನದಲ್ಲಿ ಕೆಳೆದ ನಾಲ್ಕೂವರೆ ದಶಕಗಳಿಂದಲೂ ತೊಡಗಿಕೊಂಡಿದ್ದಾರೆ. ಮುಖ್ಯವಾಗಿ ಕವಿತೆಯೆಂಬ ಹರಿಗೋಲನ್ನು ಹಿಡಿದು ಬಾಳನದಿಯನ್ನು ದಾಟುವ ಹಂಬಲವನ್ನು ತೋರುತ್ತಿದ್ದಾರೆ. <br /> <br /> ಆನಂದ ಝುಂಜರವಾಡರ `ಪದಗಳ ಪರಿಧಿಯಲ್ಲಿ~, `ಖನನೋದ್ಯಮ~, `ಎಲ್ಲಿದ್ದಾನೆ ಮನುಷ್ಯ~, `ಶಬ್ದ ಪ್ರಸಂಗ~, `ದಿಂಡೀ ಮತ್ತು ದಾಂಡೀ~, `ಗಂಡ ಭೇರುಂಡ~ ಕವನ ಸಂಕಲನಗಳು ಈಗ `ಪ್ರೇತಕಾಂಡ~ ಹೆಸರಿನಲ್ಲಿ ಒಟ್ಟಾಗಿ ಹೊರಬರುತ್ತಿದೆ. ಕವಿ ಸಹಜವಾಗಿಯೇ ತಮ್ಮ ಸಂವೇದನೆಯ ಭಾಗವಾಗಿರುವ ಗರುಡಪುರಾಣದ ಪ್ರೇರಣೆಯಿಂದ ಈ ಸಂಕಲನಕ್ಕೆ `ಪ್ರೇತಕಾಂಡ~ ಎಂದು ಹೆಸರಿಟ್ಟಿದ್ದಾರೆ. <br /> <br /> ಲೋಕದ ಕಟ್ಟಳೆಯಲ್ಲಿ ಜೀವಿಸುವುದೆಂದರೆ, ಯಾತನಾಶಿಬಿರದಲ್ಲಿ ಭಾಗವಹಿಸುವುದಾಗಿದೆ ಎಂಬ ತಿಳಿವು ಪ್ರೇತಕಾಂಡದಲ್ಲಿದೆ. ಈ ಮೂಲಕ ಕವಿ ಹಾಕಿಕೊಟ್ಟಿರುವ ಚೌಕಟ್ಟನ್ನು ಮೀರಿ ಇಲ್ಲಿನ ಕವಿತೆಗಳು ವರ್ತಿಸುತ್ತವೆ. <br /> <br /> ಅಜ್ಜ ತನ್ನ ಮನೆ ಮಕ್ಕಳು, ಮೊಮ್ಮಕ್ಕಳೊಡನೆ ನಡೆಸುತ್ತಿರುವ ಆಪ್ತಸಲ್ಲಾಪ ಎನಿಸುವ ಈ ಕವಿತೆಗಳು, ಎಳೆಯ ಜೀವಗಳು ಪಕ್ಕಾಗಿ ಬಲಿತುಕೊಳ್ಳಲಿ ಎಂಬ ಇರಾದೆಯಲ್ಲಿ ಮಾತಿಗಿಳಿಯುತ್ತವೆ. ಹಾಗೆ ನೋಡಿದರೆ, ನಮ್ಮ ಕವಿಗಳು ಹೊಸಗನ್ನಡದಲ್ಲಿ ಎರಡು ಪ್ರಧಾನ ಧಾರೆಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಒಂದನ್ನು ಭಾವಪೂರ್ಣಧಾರೆ ಎಂದೂ, ಇನ್ನೊಂದನ್ನು ಚಿತ್ರಪಟಧಾರೆ ಎಂದೂ ಕರೆಯಬಹುದಾಗಿದೆ. <br /> <br /> ಭಾವಪೂರ್ಣವು ಆದಷ್ಟೂ ಆಗುವ ನಡೆಯೊಂದಿಗೆ ಬದುಕಿನ ತಣಿಗೆಯನ್ನು ತುಂಬಿಕೊಳ್ಳುವ ಅಪೇಕ್ಷೆಯನ್ನು ಹೊಂದಿದೆ. ಈ ಧಾರೆ ಅನುಭವಕ್ಕಿಂತಲೂ ಮನುಷ್ಯ ಸಣ್ಣವನೆಂದು ಒಪ್ಪಿಕೊಳ್ಳುತ್ತದೆ. ಹಾಗಾಗಿ ಇಲ್ಲಿ ಜೀವಕೇಂದ್ರವೊಂದು ನಿರ್ಮಾಣವಾಗುತ್ತದೆ. ಚಿತ್ರಪಟವು ತನಗೆ ಬೇಕಾದ ಹಳ್ಳದಲ್ಲಿ ಭಾವವನ್ನು ತುಂಬುತ್ತದೆ. ಆಳವಾದ ವಿಚಾರ ಪರಂಪರೆಯ (Ideology) ಸಹವರ್ತಿಯಾಗಿರುತ್ತದೆ. <br /> <br /> ಈ ಧಾರೆ ವ್ಯಕ್ತಿ, ಪುರಾಣ, ಚರಿತ್ರೆ ಮತ್ತು ರೂಢಿಯ ಕಡೆಗೆ ಹೋಗಿ ಬರುತ್ತಿರುತ್ತದೆ. ಆದರಿಂದ ಇಲ್ಲಿ ಶಕ್ತಿಕೇಂದ್ರವೊಂದು ನಿರ್ಮಾಣವಾಗುತ್ತದೆ. ಜೀವಕೇಂದ್ರ ಮತ್ತು ಶಕ್ತಿಕೇಂದ್ರವು ಒಬ್ಬ ಕವಿಯಲ್ಲಿಯೇ ಅಂತಸ್ಥವಾಗಿರುವ ಸಾಧ್ಯತೆ ಹೆಚ್ಚಿದೆ. ಇವು ಬೇರೆಯಾಗಿ ಬಿಡಿ ಕವಿತೆಗಳಲ್ಲಿ ಕಾಣಿಸಿಕೊಳ್ಳುವ ಅವಕಾಶವೂ ಇದೆ.<br /> <br /> ಅನೇಕ ವೇಳೆ ಶಕ್ತಿಕೇಂದ್ರವು ಒಟ್ಟುಮಾಡುವ ಜವುಳು ಚಹರೆಗಳನ್ನು ಜೀವಕೇಂದ್ರದಿಂದ ಹೊರಡುವ ಚಿಲುಮೆ ಒರೆಸಿದೆ. ಅಪರೂಪಕ್ಕೆ ಈ ಕೇಂದ್ರಗಳು ಪರಸ್ಪರ ಕೈಹಿಡಿದು ಸಮಹೆಜ್ಜೆ ಹಾಕಿರುವುದೂ ಉಂಟು. ಬೇಂದ್ರೆ, ಕುವೆಂಪು, ಪು.ತಿ.ನರಸಿಂಹಾಚಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎಂ.ಗೋಪಾಲಕೃಷ್ಣ ಅಡಿಗ ಅವರು ಈ ಎರಡು ಕೇಂದ್ರಗಳನ್ನು ಸೂರೆಹೊಡೆದಿದ್ದಾರೆ. ಆ ಹಾದಿಯೊಂದಿಗೆ ಸಹ ಪ್ರಯಾಣ ಬೆಳೆಸುತ್ತಿರುವ ಆನಂದ ಝುಂಜರವಾಡರ ಕವಿತೆಗಳು ಅನೇಕ ಏರಿಳಿತವನ್ನು ಆರಂಭದಿಂದಲೂ ಅನುಭವಿಸಿವೆ. ಅವರ ಮುಖ್ಯ ಆಸ್ಥೆ ಜೀವಕೇಂದ್ರವೇ ಆಗಿದೆ.</p>.<p>ಒಳಹೊಕ್ಕು ಅಗುಳಿ ಹಾಕಿಕೊಳ್ಳುವ ಅಗುಳಿಗೂ<br /> ಕುದಿಯುಕ್ಕಿ ಅಕ್ಕಿ ಅನ್ನವಾಗುವ ಕುದಿತ<br /> ಹಲವು ಹಸೀ ಕಾಳುಗಳ ಮೊಳಕೆಯೊಡಿಸಿ ಕುದ್ದ<br /> ಸಾಂಬಾರಿನಲ್ಲೂ ನಂಬಿ ಕಲಿಸಿಕೊಂಡಷ್ಟೇ<br /> ತುತ್ತಾಗುವ ಸತ್ವ<br /> ತಥಾಗತನ ಬೆತ್ತಲೆ ಬೊಗಸೆಗೂ ಒದಗಿದಷ್ಟೇ ಸತ್ಯ <br /> ಗುಂಡಿಗೆದೆಗೊಟ್ಟ ಜನಗಣಮನದ ಸ್ವತಂತ್ರ ಸಾತತ್ಯ<br /> <br /> ಉರುಳುವ ದಿನಗಳನ್ನು ಎದುರಿಸಿ ನಿಲ್ಲಬೇಕಾದರೆ ಗಾಂಧಿಯಂತಹ ಎಂಟೆದೆ ಬೇಕು. ಕುಕ್ಕೆಯೊಳಗಿನ ಕೋಳಿಯಂತೆ ಮಿಸುಕಾಡುವ ಜೀವ. ಆದರೂ ಈ ಬದುಕಿಗೆ ನಂಬಿಕೆಯೂ ಬೇಕು. ಅದರ ಬೆಳಕಲ್ಲಿ ಕಂಡಷ್ಟನ್ನು ಮಾತ್ರ ಕಾಣಿಸಬೇಕು. ನಮ್ಮನ್ನು ನಾವಷ್ಟೇ ನಂಬಿಕೊಂಡು ಇರಲು ಸಾಧ್ಯವಿಲ್ಲವಾದ್ದರಿಂದ, ಇನ್ನೊಂದು ಜೀವಿಯ ಸಾಮೀಪ್ಯವೂ ನಮಗೆ ಬೇಕಾಗಿರುವುದರಿಂದ ಇಲ್ಲಿ ಮಾತು ಸೇತುವೆಯಾಗಿದೆ. ಅಂತಹ ಮಾತು ಇರಬೇಕು ಹೇಗೆ? <br /> <br /> ಮಾತು ಸಾಕು ಎನಿಸುವಂಥ<br /> ಮಾತಿಗೂ ಮಾತ ಬಳಸಬೇಕು<br /> ಮಾತಿನಿಂದಲೇ ಮಾತ ನಿಂದಿಸುತ<br /> ಮಾತಿನ ಮಾತೃತ್ವ ಹೊಳೆಸಬೇಕು</p>.<p>ಯಾರೂ ಇಲ್ಲಿ ಇನ್ನೊಬ್ಬರ ಮಾತನ್ನು ಕಿವಿಗೆ ಹಾಕಿಕೊಳ್ಳುವಂತಿಲ್ಲ. ಅಂತಹ ವ್ಯವಧಾನವೂ ಇದ್ದಂತಿಲ್ಲ. ಏನೋ ದುಗುಡ ರಕ್ತಗತವಾದಂತಿದೆ. ಕವಿ ಕೇಳಿಕೊಳ್ಳುತ್ತಾರೆ: </p>.<p>ಮನುಷ್ಯನ ಮುಖ ಬಿಡಿಸಲು<br /> ಎಷ್ಟು ವಕ್ರರೇಖೆಗಳು ಬೇಕು?</p>.<p>ಲೆಕ್ಕ ಹಾಕಬೇಕು ಅನಿಸುತ್ತದೆ. ಎಲ್ಲರೂ ಎಲ್ಲಿಗೋ ಹೊರಟು ನಿಂತಂತಿದೆ. ಹಾಗೆ ಹೊರಟಿರುವವರ ಮಧ್ಯೆ ಸಾಮಾನ್ಯವಾದ ಕವಿಯೂ ಇರಬೇಕಾಗಿದೆ. ಕವಿಗೆ ಸಮಾಜವೆಂಬುದು ಹೊರಗಿಲ್ಲ, ಒಳಗಿದೆ; ಬದುಕಿನಲ್ಲಿ ಬೆರೆತುಹೋಗಿದೆ. ಕಣ್ಣಮುಂದಿನ ವಿದ್ಯಮಾನವನ್ನು ನೋಡಿ ಕೇಳಬೇಕೆನಿಸುತ್ತದೆ: <br /> <br /> ಗೆಳೆಯರೆ ಬಾಳಿನ ದುಃಖವನ್ನು <br /> ಸಮಾಜದ ಸಮಸ್ಯೆಯಾಗಿ<br /> ಏಕೆ ಅನುವಾದಿಸುತ್ತಿದ್ದೀರಿ?</p>.<p>ಹೀಗೆ ಕೇಳಿದ ಕವಿಗೆ ಸಿಟ್ಟಿಲ್ಲ. ಭೇದವೂ ಇಲ್ಲ. ಬದಲಿಗೆ ಒಂದು ಖಾತ್ರಿ ಇದೆ:</p>.<p>ನನ್ನ ನಿನ್ನ ಒಳ-ಒಲೆ ಕುದಿತವೇ ಪಾಕ <br /> ಪ್ರಪಂಚದ ಬಾಳೆಲೆಯ ತುಂಬ ಗಡಿಯ ಹರಹು <br /> ಬಡಿಸುವದೆಂದರೂ ಉಣ್ಣುವುದೇ ಮಣ್ಣಿನ <br /> ಅನ್ನ, ಕಂಬನಿಗಡಲಿನ ಅವರವರ ಋಣದ ಉಪ್ಪು <br /> ಉಣ್ಣುವುದೆಂದರೂ ಬಡಿಸುವುದೇ ಯಾರದೋ ಬೆವರು. <br /> ಜೀವಂತವಿರುವುದನ್ನು ಬೆವರು ಊರ್ಜಿತಗೊಳಿಸಿದೆ. ಆ ಬೆವರು ಒಡೆದಾಗೆಲ್ಲಾ ತನಗೆ ತಾನೆ ಹಾದಿ ತೆರೆದುಕೊಂಡಿದೆ: <br /> <br /> ಎದುರು ಬರುವೆ, ಬದಿಗೆ ಸರಿವೆ <br /> ತುಂಬಿ ಎಸರು ಪಾತ್ರೆಗೆ <br /> ದುಡಿತ ಕೊಟ್ಟ ಬದುಕ ಪಡೆದು <br /> ಹೆಜ್ಜೆ ಜೀವ - ಜಾತ್ರೆಗೆ</p>.<p>ಈ ಜಾತ್ರೆಯ ಬೆನ್ನಿಗೆ ಸಂಸಾರವೂ ಇದೆ. ಕೈ ಹಿಡಿದ ಸಂಗಾತಿ ಜೊತೆಗಿದ್ದರೂ ಪ್ರಶ್ನೆಗಳು ಮುಳ್ಳಾಗಿ ಚುಚ್ಚುತ್ತವೆ:</p>.<p>ಮೈ ಮುಟ್ಟಿ ತಿಳಿದೆವು <br /> ಮನ ಮುಟ್ಟಿದೆವು ಎಂದು <br /> ಆ ಮುತ್ತು, ಆ ಉಲುಹು <br /> ಆ ಉಸಿರು, ಆ ಬಸಿರು <br /> ತಿರುಗಣಿಯ ತಿರುಗ ತೊಟ್ಟಿಲ ಜೀಕವೆಂದು</p>.<p>ಹೀಗೆ ಪಡೆದುಕೊಂಡ ಮೇಲೂ ಕಳೆದುಕೊಂಡದ್ದು ಏನೂ ಇಲ್ಲ. ಯಾಕೆಂದರೆ-</p>.<p>ಕಿರೀಟವಾದ ಗರಿಗೆ <br /> ನವಿಲಾಗಿ ಕುಣಿವ ಭಾಗ್ಯವಿಲ್ಲ<br /> ಕೊಳಲು <br /> ಉಳಿದೆಲ್ಲ ಬಿದಿರುಗಳ ಹಾಡು <br /> ಹಾಡುತ್ತದೆ.</p>.<p>ಜೀವಿಸುವುದಕ್ಕೆ ಸಾಮಾನ್ಯತೆಯೇ ಸಾಕಾಗಿದೆ:<br /> <br /> ಎಂಥ ಕಲಾತ್ಮಕ ಆಕಾಶವೆಂದರೂ <br /> ಹಕ್ಕಿಗಳಿಗೇನೂ ಅವಕಾಶವಿಲ್ಲ<br /> ಮೊಟ್ಟೆಯೊಡೆದು ಮರಿಗಳಾದರು <br /> ಎಲ್ಲಿ ಹೊರ ಬರುತ್ತವೆ? <br /> ಚಿತ್ರ ಚೌಕಟ್ಟಿನಲ್ಲಿರುವವರೆಗೆ</p>.<p>ಒಳಹೊರಗಿನ ವರ್ತಮಾನದಲ್ಲಿ ಎಲ್ಲವೂ ನೆಟ್ಟಗಿಲ್ಲ. ಗೋಡೆಗಳ ಮೇಲೆ ಸಾಲು ಚಿತ್ರಗಳಿವೆ. ನೊಂದುಕೊಳ್ಳುವ ಮನ ಮಹಾತ್ಮರನ್ನು ನೆನೆಯುತ್ತದೆ:</p>.<p>ಹಚ್ಚಿಟ್ಟ ದೀಪಕ್ಕೆ ಎಣ್ಣೆ ಎರೆಯುವವರಿಲ್ಲ<br /> ಚಿವುಡವವರಿಲ್ಲ ಕಪ್ಪು ಕುಡಿಗೆ <br /> ಹೊಸ ಬತ್ತಿಗಳ ಹೊಸೆದು ಹೊತ್ತಿಸುವವರಿಲ್ಲ<br /> ಹೇಗೋ ನಡೆದಿದೆ ಕತ್ತಲೆಯ ನಡೆಗೆ <br /> ಮತ್ತೆ ಬರಬಹುದೆ ಆ ಅಜ್ಜ<br /> ಮರುಜನ್ಮ ಪಡೆದು?<br /> ಉಪ್ಪು ತೀರಿದ ಮನೆಯಲಿ ಹಚ್ಚಿಡುವನೆ<br /> ಹೊಸತೊರಿದು ಅರಿವು ದೀಪ</p>.<p>ಇಂತಹ ಹಲವಾರು ನಿಗಿನಿಗಿಸುವ ಬಾಳನೋಟಗಳನ್ನು ಕವಿ ಓದುಗರ ಅಂಗೈಯಲ್ಲಿರಿಸುತ್ತಾರೆ. ಆನಂದ ಝುಂಜರವಾಡರಿಗೆ ಕವಿ ಆಡುವ ಮಾತಿನ ಮೇಲೆ ವಿಪರೀತ ಮೋಹವೂ ಇದ್ದಂತಿದೆ. ಹಾಗಾಗಿ ಅನೇಕ ಕವಿತೆಗಳಲ್ಲಿ ವಾಚಾಳಿತನವು ಅನ್ನದಲಿ ಹರಳು ಸಿಗುವಂತಾಗುತ್ತದೆ. ಆ ಮಾತು ಬೇರೆ. ಕತ್ತಲೆಯೆಂಬುದು ಇತ್ತಲೆಯಯ್ಯ ಎನ್ನುತ್ತಾನೆ ಅಲ್ಲಮಪ್ರಭು. ಈ ಮಾತನ್ನು ತನ್ನ ಅನುಭವ ವಿಸ್ತಾರದಲ್ಲಿ ಕಾಣಿಸುವ ಸಲುವಾಗಿಯೇ ಆನಂದ ಝುಂಜರವಾಡ ಬರೆಯುತ್ತಿದ್ದಾರೆ. <br /> <br /> <strong>ಪ್ರೇತಕಾಂಡ<br /> </strong>ಲೇ: ಆನಂದ ಝುಂಜರವಾಡ<br /> ಪು: 496; ಬೆ: ರೂ. 300<br /> ಪ್ರ: ಕಿಟಕಿ ಪ್ರಕಾಶನ, ಮೈಸೂರು - 570023</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>