ಟೀವ್ಯಾಗಿನ ಎಲೆಕ್ಷನ್ ರಿಸಲ್ಟ್ ಗದ್ದಲದಿಂದ ತಲೆಚಿಟ್ ಅನಿಸಿ ಮನಿ ಹೊರಗ್ ಬಂದ್ರ ಕಮಲ ಪಕ್ಷದ ಕಾರ್ಯಕರ್ತರ ಕುಣಿತ, ಕೇಕೆ, ಬ್ಯಾಂಡ್ ಬಾಜಾ ಸದ್ದು ಜೋರಾಗಿ ಕೇಳಿ ಬರಾಕತ್ತಿತ್ತು. ವಿಜಯೋತ್ಸವದ ಮೆರವಣಿಗೆ ನೋಡ್ಕೋಂತ್ ಮನಿ ಮುಂದ ನಿಂತಿದ್ದೆ.
‘ಹೆಂಗೈತಿ ‘ನಮೋ’ ಕಮಾಲ್. ಎಲೆಕ್ಷನ್ ರಿಸಲ್ಟ್ ನೋಡಿ ನಿನ್ನ ಎದೆ ಒಡ್ದು ಹೋಗಿರಬೇಕಲ್ಲ. ಎಕ್ಸಿಟ್ ಪೋಲ್ ಬರೀ ಪೊಳ್ಳು–ಸುಳ್ಳಂತ ಹಾರ್ಯಾಡ್ತಿದ್ಯಲ್ಲ. ಈಗ ನಮ್ಮ ಹಾರಾಟ ನೋಡ್ ಮಗ್ನ. ನಮ್ಮ ಪಾರ್ಟಿ ಎಲ್ಲಾ ಕಡೆ ಗೆದ್ಕೊಂಡ್ ಬರ್ತಾ ಇರೋದು ಈಗರ ಖಾತ್ರಿ ಆಗೇದಿಲ್ಲ’ ಅನಕೋಂತ ಪ್ರಭ್ಯಾ ಹತ್ರ ಬಂದ.
‘ಇದೇನೋ ಮೈಯೆಲ್ಲ ಕೇಸರಿಮಯ ಆಗೆದಲ್ಲಾ. ಬಜಾರ್ದಾಗ್ ಬಣ್ಣಾ ಉಳ್ಸಿರೊ ಇಲ್ಲೊ’ ಎಂದೆ.
‘ಕಣ್ ಕಿಸಿದು ನನ್ನ ಮಾರಿ ಏನ್ ನೋಡ್ತಿ. ಕಣ್ ಬಿಟ್ಕೊಂಡ್ ಇಡೀ ರಾಜ್ಯಾನ ನೋಡ್ ಹೋಗ್.
ಬೆಂ.ಗ್ರಾ., ಹಾಸ್ನಾ ಬಿಟ್ರ, ಮಂಡ್ಯ ಅರ್ಧಮರ್ಧ ಸೇರಿ ಇಡೀ ರಾಜ್ಯಾನ ಕೇಸರಿ ಬಣ್ಣದಾಗ ಮುಳುಗಿ ಎದ್ದದ. ನಿನಗೂ ಕೇಸರಿ ಬಣ್ಣಾ ಬಳಿತೀನಿ ಬಾ’ ಎಂದ.
‘ಏಯ್ ಬ್ಯಾಡೊ ಮಾರಾಯಾ. ನಂಗ್ ಕೇಸರಿ ಬಣ್ಣ ಅಂದ್ರ ಆಗಿಬರೂದಿಲ್ಲ. ರಾಜ್ಯದಾಗ ಕೆಲ ಕಪ್ಪಿಗೋಳು ಗ್ವಾಡಿ ಮ್ಯಾಗ್ ಕುಂತು ಕಮಲದ ಕೊಳಕ್ಕೆ ಜಿಗ್ಯಾಕ್ ಹೊಸ ಶುಭ ಮುಹೂರ್ತಕ್ಕ ಕಾದು ಕುಂತಾವಂತ ಹೇಳಾಕತ್ತಾರಲ್ಲ. ಅವುಗಳಿಗೆಲ್ಲ ಆಪರೇಷನ್ ಹೆಸರ್ನಾಗ್ ಕೇಸರಿ ಬಣ್ಣ ಬಳ್ಯಾಕ್ ಹೋಗ್. ಪಕ್ಷಾಂತರಿ ಕಪ್ಪಿಗೋಳು ಕೇಸರಿ ಬಣ್ಣದಾಗ ಮುಳುಗಿ ಎದ್ದು ಪಾವನವಾದ್ರ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸದಸ್ಯರ ಬಣ್ಣನ ಬದಲಾಗ್ತದ. ಹೊಸ ಸರ್ಕಾರದ ಬಣ್ಣಾನೂ ಕೇಸರಿಮಯ ಆಗ್ತದ್’ ಅಂತ ಹುರಿದುಂಬಿಸಿದೆ.
‘ಸುನಾಮೋ’ ಸುಂಟರಗಾಳಿಗೆ ರಾಹು, ಬಾಬು, ಮಾಯಾ, ದೀದಿ ಹೆಂಗ್ ಛಿದ್ರ ಛಿದ್ರ ಆಗ್ಯಾರ ನೋಡಿ ಇಲ್ಲ. ದುರಹಂಕಾರಿ ದುರ್ಯೋಧನನ ಊರುಭಂಗ ಮಾಡ್ತೀನಿ ಅಂತ ತೊಡೆ ತಟ್ಟಿದವರೆಲ್ಲ ಸೊಂಟಾ ಮುರ್ಕೊಂಡ್ ಬಿದ್ದಾರ್. ಮಹಾಘಟಬಂಧನದ ಘನಂದಾರಿಗಳ ಗರ್ವಭಂಗ ಆಗೇದ’ ಎಂದು ಎದೆ ಉಬ್ಬಿಸಿಕೊಂಡು ಹೇಳ್ದ.
‘ಅದೇನೊ ಊರುಭಂಗ. ಒಗಟ್ ಬಿಡಿಸಿ ಮಾತಾಡ್’ ಎಂದೆ.
‘ಏಯ್ ದಡ್ಡಾ, ಹೈಸ್ಕೂಲ್ನ್ಯಾಗ್ ದುರ್ಯೋಧನನ ಊರುಭಂಗ ಪಾಠಾ ಇತ್ತು ಅನ್ನೋದು ನೆನಪೈತಿ ಇಲ್ಲ. ಊರುಭಂಗ ಅಂದ್ರ ಸಂಸ್ಕೃತದಾಗ ತೊಡೆ ಭಂಗ ಅಂತ ಅರ್ಥ’ ಎಂದು ಅರ್ಥೋಪದೇಶ ನೀಡಿದ.
‘ಸುನಾಮಿ ಧಾಟಿ ಒಳ್ಗ ಸುನಾಮೋ ಬಳಸ್ಬ್ಯಾಡಲೆ ಛಲೋ ಅಲ್ಲ. ಸುನಾಮಿ ಬಂದ್ರ ಎದುರಿಗೆ ಸಿಕ್ಕಿದ್ದನ್ನೆಲ್ಲ ಅಡ್ಡಡ್ಡ ನುಂಗಿಬಿಡ್ತದ. ಹಂಗ್ ‘ಸುನಾಮೋ’ ಕೂಡ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸರ್ಕಾರ್ ಇರೋ ರಾಜ್ಯಗಳನ್ನ ನುಂಗಾಕ್ ಹೊಂಟಿರೊಹಂಗ್ ಕಾಣ್ಸಾಕತ್ತದ. ಸಂವಿಧಾನಕ್ಕೆ ನಮಸ್ಕರಿಸಿರೊ ‘ನಮೋ’ ಹೀಂಗ್ ಆಪರೇಷನ್ ಮಾಡ್ಸಿ ಸರ್ಕಾರ ಕಬಳಿಸ್ಕೋತ್ ಹೋದ್ರ, ಸಂವಿಧಾನಕ್ಕೆ ಅಪಪ್ರಚಾರ ಮಾಡಿದ್ಹಂಗ್ ಆಗುದಿಲ್ಲೇನ್’ ಎಂದು ಕಾಲೆಳೆದೆ.
‘ಎಚ್ಎಂಟಿ’ನ್ಯಾಗ್, ಎಚ್ ಮಾತ್ರ ಉಳಿದು, ತೆನೆಹೊತ್ತ ಮಹಿಳೆಯ ಭಾರ ಖಾಲಿ (ಎಂಟಿ) ಆಗೇದ್. ‘ಕೈ’ಯಾಗೂ ಒಂದ್ ಬಿಟ್ ಏನೂ ಉಳಿದಿಲ್ಲ. ಸಮ್ಮಿಶ್ರ ಸರ್ಕಾರ ರಾಜೀನಾಮೆ ಕೊಟ್ಟು ಸೀದಾ ಮನಿಗೆ ಹೋಗಬೇಕಪಾ’ ಎಂದ ತಣ್ಣಗೆ.
‘ಅಲ್ಲಲೇ ವಿಧಾನಸಭೆ ಎಲೆಕ್ಷನ್ದಾಗ್ ಯಾವ್ದರ ಪಕ್ಷ ಗೆದ್ದ ಬಂದ್ರ ಮುನ್ಸಿಪಾಲ್ಟಿ ಮೆಂಬರ್ಗಳು ರಾಜೀನಾಮೆ ಕೊಡ್ತಾರೇನ್. ಎರಡೂ ಬ್ಯಾರೆ, ಬ್ಯಾರೆ ಎಲೆಕ್ಷನ್ ಅನ್ನೋದನ್ನ ಮೊದ್ಲ ತಿಳ್ಕೊ. ಬಾಯಿಗೆ ಬಂದ್ಹಂಗ್ ಮಾತಾಡಬ್ಯಾಡಾ’ ಎಂದು ದಬಾಯಿಸಿದೆ.
‘ಹೋಗ್ಲಿ ಬಿಡು, ‘ನಮೋ’ ಮತ್ತೊಮ್ಮೆ ಗೆದ್ರ, ನಿಖಿಲ್, ‘ರಾಗಾ’ ಸೋತ್ರ ರಾಜಕೀಯ ಸನ್ಯಾಸ ತಗೋತಿನಿ ಅಂತ ಹೇಳಿದ್ದವರೆಲ್ಲ ಜಲ್ದಿ ಸನ್ಯಾಸತ್ವ ತಗೊಬೇಕಪಾ. ಮೌಂಟ್ ಎವರೆಸ್ಟ್ ಶಿಖರ ಹತ್ತಾಕ್ ಪರ್ವತಾರೋಹಿಗಳು ಸಾಲಗಟ್ಟಿ ನಿಂತಂಗ್ಹ, ಕೇದಾರನಾಥ್ ಗುಹೆಗೆ ಭೇಟಿ ಕೊಟ್ಟು ಧ್ಯಾನ ಮಾಡ್ಕೋತ್ ಸನ್ಯಾಸತ್ವ ಸ್ವೀಕರಿಸಬೇಕಪಾ. ಗುಹೆ ಒಳ್ಗ, ನಮೋ 303, ಲಾಲೂ ಉಪವಾಸ, ರಾಹುಲ್ ವನವಾಸ, ಪ್ರಜ್ಞಾ(ವಂತ?) ಮೌನವ್ರತ ಹೀಂಗ್ ಬ್ಯಾರೆ, ಬ್ಯಾರೆ ಹೆಸರಿನ ಧ್ಯಾನ ಮಾಡಾಕ್ ಅವಕಾಶ ಮಾಡಿಕೊಟ್ರ ಎಲ್ಲಾ ಪಕ್ಷದವ್ರು ಸಾಲುಗಟ್ಟಿ ನಿಲ್ತಾರ್ ನೋಡ್. ಬೇಕಿದ್ರ ಬಾಜಿ ಕಟ್ಟು’ ಎಂದ.
‘ಸನ್ಯಾಸ ತಗೊಂಡ್ರೂ ಕೇಸರಿ ಬಣ್ಣ ಅವರ ಬೆನ್ನ ಬಿಡುದಿಲ್ಲಲೇ. ಕಾವಿ ಬಟ್ಟೀನ ತೊಡಬೇಕಾಗ್ತೈತಿ. ‘ರಾಗಾ’ ಹೇಳ್ದಂಗ್, ಅವರವರ ಕರ್ಮ ಅವರಿಗಾಗಿ ಕಾಯ್ತದ ಏಳ್. ಚಾಣಕ್ಯ ನುಡಿದ್ಹಂಗ್– ಘಟಬಂಧನದ ತುಕಡೆ ತುಕಡೆ ಗ್ಯಾಂಗ್ ತುಂಡು ತುಂಡಾಗಿ ಹೋಯ್ತಲ್ಲ. ಕಬ್ಬಿಣ ಸರಪಳಿ ಹರಿದೀತಲೇ ಪರಾಕ್– ಕಾರಣಿಕೋತ್ಸವದ ಅರ್ಥ ಖರೆ ಆಯ್ತಲ್ಲ’ ಎಂದು ಹುರಿದುಂಬಿಸಿದೆ.
‘ನೀ ಏನೇ ಅನ್ನು, ‘ರಾಗಾ’ನ ಟೈಮ್ ಸರಿ ಇರ್ಲಿಲ್ಲ ಬಿಡು. ಹಸ್ತದ ಸಾಧನೆ 44ರಿಂದ 52ಕ್ಕಷ್ಟೇ ಏರಲು ಚೌಕೀದಾರನ ವಿರುದ್ಧ ಇಷ್ಟ ಪರಿ ಗಂಟ್ಲು ಹರ್ಕೊಬೇಕಾಗಿತ್ತಾ. ಪಾಪ, ರಾಗಾ’ ಎನ್ನುತ್ತ ಪ್ರಭ್ಯಾ ಲೊಚಗುಟ್ಟಿದ.
‘ಟೈಮ್ ನಿಯತಕಾಲಿಕೆಯೂ ‘ಪ್ರಧಾನ ವಿಭಜಕ’ನ ಹೆಸರನ್ನು ಈಗ ‘ಭಾರತ ಒಗ್ಗೂಡಿಸುವ ಮುಖ್ಯಸ್ಥ’ ಅಂತ ರಾಗ ಬದಲಿಸಿದೆ. ಇನ್ನೂ ಯಾರ್ಯಾರ್ ಏನೇನ್ ರಾಗಾ ಬದಲಸ್ತಾರೊ ಗೊತ್ತಿಲ್ಲ’ ಎಂದು ಉತ್ತರಿಸಿ ಪ್ರಭ್ಯಾನ ಬೆನ್ನ ತಟ್ಟಿ ಮೆರವಣಿಗೆಗೆ ದಬ್ಬಿದೆ.
ಅದೇ ಹೊತ್ತಿಗೆ ರೇಡಿಯೊದಲ್ಲಿ ಕೇಳಿ ಬಂದ, ಮುಸ್ಸಂಜೆ ಮಾತು ಚಿತ್ರದ, ‘...ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ (ಚುನಾವಣೇಲಿ)... ಹಾಡು, ‘ರಾಗಾ’ ಪಾಲಿಗೆ ಬರೋಬ್ಬರಿ ಹೊಂದ್ತದ ಅಂತ ಭಾಸವಾಗಿ ಭಾರವಾದ ಹೃದಯದಿಂದಲೇ ಮನೆ ಒಳಗೆ ನಡೆದೆ. ಕಮಲ ಕಲಿಗಳ ಹರಹರ ಮಹಾದೇವ ಘೋಷಣೆಯ ಅಬ್ಬರದಲ್ಲಿ ಹಾಡೂ ಕ್ಷೀಣವಾಗುತ್ತಾ ಹೋಯ್ತು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.