ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ಯಾಸಿಗೆ ಹೆಣ್ಣ ಕೊಡಿ!

Last Updated 11 ಜನವರಿ 2019, 20:00 IST
ಅಕ್ಷರ ಗಾತ್ರ

ಹೊಸ ವರ್ಷಕ್ಕ ಕಣ್ಣುಜ್ಜಿಕೊಂಡು ಇನ್ನೇನ್‌ ಏಳ್‌ಬೇಕ್‌ ಅನ್ನೂದ್ರಾಗ್‌, ಮೊಬೈಲ್‌ ಬಡ್ಕೊಳಾಕತ್ತು. ವರ್ಷದ ಮೊದಲ ಕರೆ ಕಿವಿಗೆ ಇಂಪಾಗಿರಲಿ ಎಂದು ಬೇಡಿಕೊಳ್ಳುತ್ತ ಆಕಳಿಸುತ್ತಲೇ ‘ಹಲೋ...’ ಎಂದೆ. ‘ಹಲೋ ಫ್ರೆಂಡ್‌, ಹ್ಯಾಪಿ ನ್ಯೂ ಇಯರ್‌...’ ಎಂದು ಕುಡುಕನ ತೊದಲು ಧಾಟ್ಯಾಗಿನ ಮಾತ್‌ ಕೇಳಿ, ‘ಲೇ ಬೇವರ್ಸಿ, ಹೊಸ ವರ್ಷಾ ಬಂತ್‌. ಇನ್ನ ಹ್ವಾದ ವರ್ಷದ ನಿಶೇದಾಗ ಅದಿಯಲ್ಲ’ ಎಂದು ಬೈದೆ. ತಟ್ಟನೆ ನಾಲ್ಗಿ ಕಚ್ಚಿಕೊಂಡು, ಹೊಸಾ ವರ್ಷದ ಹೊಸ್ತಲ್‌ದಾಗ್‌ ಬೈಗುಳ ಬಳಸೋದು ಬ್ಯಾಡ ಅಂತ ತೀರ್ಮಾನಿಸಿದೆ.

‘ಹೊಸ ವರ್ಷದಾಗ ಏನ್‌ ಆಗ್ಬೆಕಂತಿಲೇ’ ಎಂದೆ.
‘ಲಗ್ನಾ... ಹಹಹ ’ ಎಂದು ಗಹಗಹಿಸಿ ನಕ್ಕ.
‘ಈ ವಯಸ್‌ನ್ಯಾಗ ಲಗ್ನಾನ...‘ ಎಂದೆ ಅನುಮಾನದಿಂದ.

‘ಹೊಸ ವರ್ಷದಾಗ್‌ ರಾಜಕೀಯದೊಳಗ್‌ ಏನ್‌ ಬೇಕಾದ್ರೂ ಆಗಬಹುದು’ ಅಂತ ನಮ್ಮ ಯಡಿಯೂರಪ್ಪ ಸಾಹೇಬ್ರು ಹೇಳ್ಯಾರ್‌. ಹಂಗs, ನನ್ನ ಜೀವನದಾಗೂ ಏನಾದ್ರೂ ಆಗಬಹುದು. ಲಗ್ನಾನ ಯಾಕ್‌ ಮಾಡ್ಕೊಬಾರ್ದು ಅಂತ ಠರಾವ್‌ ಮಾಡೀನಿ’ ಅಂದ.

‘ರಾಜಕೀಯದಾಗ್‌ ಏನಾದ್ರೂ ಆಗಬಹುದು ಅನ್ನೋದು ಸಾರ್ವತ್ರಿಕ ಹೇಳಿಕೆ. ಸಂಕ್ರಾಂತಿ ಹೊತ್ತಿಗೆ ಮೈತ್ರಿ ಸರ್ಕಾರ ಬೀಳದೆ ಇರೋದು ಕೂಡ ಏನಾದ್ರೂ ಆಗಬಹುದು ಅನ್ನೋದಕ್ಕ ಸಾಕ್ಷಿ. ಅದಿರಲಿ. ನೀ ಲಗ್ನ ಆಗ್‌ ಮಾರಾಯಾ. ಯಾರ್‌ ಬ್ಯಾಡ್‌ ಅಂತಾರ. ಅದ್ಕೂ ಮೊದ್ಲ, ಇವತ್‌ ಎಡಕ್‌ ಎದ್ದಿ, ಏನ್‌ ಬಲಕ್‌ ಎದ್ದಿ ಖರೆ ಹೇಳ್‌’ ಎಂದೆ.

‘ನಾ ಹೆಂಗ್‌ ಎದ್ದ ಕುಂತ್ರೇನ್‌. ಹೆಣ್ಣ ನೋಡುದಕ್ಕೂ ಅದಕ್ಕೂ ಏನ್‌ ಸಂಬಂಧ ಅದಲೇ’ ಅಂದ.
‘ಲೇ, ನೀ ಮೊದ್ಲ ಬಲಪಂಥದಾಂವಾ. ನಿನ್ನ ಕಟ್ಕೊಳ್ಳಾಕಿ ಎಡಪಂಥೀಯಳಿದ್ರ ನಿನ್ನ ಸಂಸಾರ ಸುಸೂತ್ರ ಆದ್ಹಂಗ್‌. ನೀ ಕಮಲ ಪಕ್ಷದ ಹಿಂದನ ಹೋಗಾಂವಾ. ಕಮಲ ಅಂದ್ರ ಸವತಿ ಅಂತನ ಕಿಡಿಕಾರುವ ನಿನ್ನ ಹೆಂಡ್ತಿಕುಡಗೋಲು ಹಿಡ್ಕೊಂಡು ಅಡ್ಡ ನಿಲ್ತಾಳ. ಅಂಥಾ ಹೆಂಡ್ತಿ ಏಳೇಳು ಜನ್ಮಕ್ಕೂ ಬ್ಯಾಡ ಅಂದ್ರ ಈಗಿಂದೀಗ್‌, ಸೂಪರ್‌ ಸಿಎಂ ಪಾತ್ರ ಮಾಡ್ತಿರೋ, ಹಾಸನದ ದೊರೆಗೆ ಹಸ್ತರೇಖೆ ತೋರ್ಸಿಕೊಂಡು ಬಾ. ಇಲ್ಲಂದ್ರ ನಿನ್ನ ಹೆಂಡ್ತಿ ಸ್ಪಲ್ಪ ದಿನದಾಗ ನಿನ್ನ ದಾರಿ ನಿನಗ್‌, ನನ್ನ ದಾರಿ ನನಗ್‌ ಅಂತ ಮುಖಾ ತಿರುಗಿಸಿಕೊಂಡು ಹೋಗ್ತಾಳ್‌ ನೋಡ್’ ಎಂದು ಹೆದರಿಸಿದೆ.

‘ನಂದು, ಭಾವಿ ಹೆಂಡ್ತಿದು 24 ಗುಣಾ ಕೂಡಿ ಬಂದ್ರ, ಯಾರ‍್ದೂ ಆಟ ನಡೆದಿಲ್ಲೇಲ್‌’ ಅಂದ. ‘ರಾಜ್ಯದ ಬಜೆಟ್‌ ಮಂಡ್ಸಾಕ್‌, ಅಣ್ಣನs ಮುಹೂರ್ತ ಫಿಕ್ಸ್‌ ಮಾಡಬೇಕಂತ ತಮ್ಮ ಹೇಳ್ಕೊಂಡಿರೋದನ್ನ ಕೇಳಿ ಇಲ್ಲ ಮಗನ’ ಎಂದೆ.

‘ನಾನೂ ಕುಠಾರಸ್ವಾಮಿ ಅಂತ ತಿಳ್ಕೊಂಡಿಯೇನ್‌ ನೀ’ ಎಂದು ದಬಾಯಿಸಿದ.

‘ಸಿಟ್‌ ಮಾಡ್ಕೊಬ್ಯಾಡಪಾ. ಇಬ್ರಾಹಿಂ ಸಾಹೇಬ್ರು ಹೇಳ್ದಂಗ್‌ ಹೆಣ್ಣು ಹುಡ್ಕೊಂಡ್‌ ಬರ್ತಿ ಏನ್‌, ಇಲ್ಲಾ ತಾಳಿ ಕಟ್ಟಿಕೊಂಡ ಮಾಜಿ ಪ್ರೇಯಸಿಯ ಕಿಡ್ನ್ಯಾಪ್‌ ಮಾಡ್ಕೊಂಡ್‌ ತರ್ತೀಯಾ’ ಎಂದು ಕಾಲೆಳೆದೆ.

‘ನಾ ಸನ್ಯಾಸಿ ಅಲ್ಲಲೇ. ನಂಗೂ ಹೆಣ್‌ ಕರ್ದು ಕೊಡಾಕ್‌ ‘ಕನ್ಯಾಪಿತೃ’ಗಳು ಸಾಲುಗಟ್ಟಿ ನಿಂತಾರ’ ಅಂದ ಠೇಸಿನಿಂದ.

‘ಸಹವಾಸದೋಷದಿಂದ ಸನ್ಯಾಸಿ ಕೆಟ್ಟ ಅನ್ನು ಹಂಗ, ರಾಜಕೀಯ ಸನ್ಯಾಸಿಗಳ ಸಹವಾಸದಿಂದ ನೀನೂ ಕೆಟ್ಟ ಕೆರಾ ಹಿಡಿದಿ ಬಿಡು. ನಿನ್ನ ಲಗ್ನದ ಮಾತ್‌ ಕೇಳಿ, ವಾನಪ್ರಸ್ತದ ತುದಿಯಲ್ಲಿ ಇದ್ದವರೂ ನಾವು ರಾಜಕೀಯ ಸನ್ಯಾಸಿಗಳಲ್ಲ ಅಂತ ಹೇಳಿದ್ದ ಮಾತ್‌ ನೆನಪಾತ್‌ ನೋಡ್‌. ಸಿಎಂ ಆಗಾಕ್‌ ಪಕ್ಷಾಂತರಿ (ಹೆಂಡತಿ) ಸಿಗ್ತಾರೇನ್‌ ಅಂತ ತಿರುಬೋಕಿಗಳಂಗ್‌, ಕಂಡ ಕಂಡ ಎಂಎಲ್‌ಎಗಳ ಮನಿಗಿ ತಿರುಗೋದು, ಗಪ್‌ಚಿಪ್ಪಾಗಿ ರೊಕ್ಕದ ಆಸೆ ತೋರ್ಸೊ ರಾಜಕೀಯ ಸನ್ಯಾಸಿಗಳ ದೈನೇಸಿ ಸ್ಥಿತಿ ನೋಡಿ ಜನಾ ಬಿದ್ದ ಬಿದ್ದ
ನಗಾಕತ್ತಾರ್‌. ಊರು ಹೋಗು, ಕಾಡು ಬಾ ಅನ್ನುವಾಗ ಕೂಡಿಕಿನಾದ್ರು ಸರಿ ‘ಮುಮ’ ಆಗಾಕ್‌ ಹೊಂಟವ್ರ ಹಪಹಪಿಗೆ ಕತ್ತಿನೂ ಹ್ಙೈಂಕು ಹ್ಙೈಂಕು ಅಂತ ಸಾತ್‌ ಕೊಡಾಕತ್ತದ್‌. ಸಂಕ್ರಾಂತಿ ಹತ್ರ ಬಂದ್ರೂ ಹೆಣ್‌ ಕೊಡಾಕ್‌ ಯಾರೂ ಮುಂದೆ ಬರ್ಲಾರ‍್ದು ನೋಡಿ ಸನ್ಯಾಸಿಗೋಳಿಗೆ ಶ್ಯಾಣೆ ಬೇಜಾರ್‌ ಆಗೇದ್‌’ ಎಂದೆ.

‘ನೀ ಹುಚ್ಚ ಅದೀಲೆ. ಏನೇನೋ ಬಡಬಡಸ್ತಿ. ಅತಿಯಾಯ್ತು ನಿಂದು, ಝಾಡಿಸಿ ಒದೀಬೇಕು ನೋಡ ನಿಂಗ್‌’ ಅಂದ.

‘ಯಾಕಲೇ, ನಾ ಏನ್‌ ಅಂಥಾ ತಪ್ಪ ಮಾಡೀನಿ’ ಎಂದೆ.

‘ಯಾಕ್‌ ಅಂತ ಮತ್ತ ಮ್ಯಾಲೆ ಕಣಿ ಕೇಳ್ತಿ ಏನ್‌ ಮಗ್ನ. ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟು ಭೂಗತನಾದ್ರೂ ಪೇಪರ್‌, ಟಿವಿನೋರು ಸಾಹುಕಾರನ ಬೆನ್ನ ಬಿಡಲಿಲ್ಲ. ಏಳೆಂಟು ಎಂಎಲ್‌ಎಗಳನ್ನ ಒಟ್ಟುಗೂಡಿಸಿ ಸನ್ಯಾಸಿಗೋಳಿಗೆ ಹೆಣ್ಣ ತಂದ್‌ ಮದ್ವಿ ಮಾಡ್ಸಿ ಅವರ ರಾಜಕೀಯ ಸನ್ಯಾಸತ್ವಕ್ಕ ಕೊನೆ ಹಾಡ್ಸಾಕ್‌ ತಿಪ್ಪರಲಾಗ್‌ ಹಾಕ್ದಾ. ಆದ್ರೂ ಒಬ್ರೂ ಹೆಣ್‌ ಕೊಡಾಕ್‌ ಮುಂದ್‌ ಬರ್ಲಾರ‍್ದು ನೋಡಿ ಸಿಟ್‌ನ್ಯಾಗ್‌ ಬೈದಾನ್‌ ಬಿಡಲೆ’ ಎಂದ.

‘ಎ(ಕ)ತ್ತಿಗೆ ಜ್ವರ ಬಂದ್ರ ಎಮ್ಮೆಗೆ ಬರೆ ಎಳೆದ್ರಂತ ಅನ್ನೂ ಹಂಗ, ಎಂಎಲ್‌ಎಗಳ ಮೇಲಿನ ಸಿಟ್ಟನ್ನ ಯಾರರ್‌ ಮ್ಯಾಲೆ ತೋರ್ಸಿದ್ರ ನಡ್ಯಾಂಗಿಲ್ಲಪಾ’ ಎಂದೆ.

ಅದೇ ಹೊತ್ತಿಗೆ, ರೇಡಿಯೊದಾಗ್‌ ಕೇಳಿಬಂದ ‘ಸಂಕ್ರಾಂತಿ... ಬಂತು ರತ್ತೊ ರತ್ತೊ... ಮನಸಲ್ಲಿ ಮನಸು ಬಿತ್ತೊ ಬಿತ್ತೊ. ಎಳ್ಳು ಬೆಲ್ಲ ಬೀರಾಯಿತು. ಕೊಟ್ಟು ತಗೊ ಮಾತಾಯಿತು...’ ಹಾಡು ನನ್ನ ಪಾಲಿಗೆ, ‘ಸಂಕ್ರಾಂತಿ.. ಬಂತು ರತ್ತೊ, ರತ್ತೊ, ಕನಸಲ್ಲೇ ಸರ್ಕಾರ
ಬಿತ್ತೊ ಬಿತ್ತೊ ’ ಎಂದು ಕೇಳಿದಂಗಾಗಿ, ‘ಸಂಕ್ರಾಂತಿ ದಿನ ಸಿಗೋಣ’ ಎಂದು ಹೇಳಿ ಫೋನ್‌ ಕಟ್‌ ಮಾಡ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT