ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಸಾಕ್ಷಾತ್ಕಾರವೇ ಸಂಗೀತ ಸಾರ್ಥಕ್ಯ: ವಿದುಷಿ ನಾಗವಲ್ಲಿ ನಾಗರಾಜ್‌

Published 11 ನವೆಂಬರ್ 2023, 20:30 IST
Last Updated 11 ನವೆಂಬರ್ 2023, 20:30 IST
ಅಕ್ಷರ ಗಾತ್ರ

ಸಂಗೀತ ಕಲಾವಿದರೇ ಸೇರಿ ಕಟ್ಟಿ ಬೆಳೆಸಿದ ರಾಜ್ಯದ ದೊಡ್ಡ ಸಂಗೀತ ಸಂಸ್ಥೆ ಕರ್ನಾಟಕ ಗಾನಕಲಾ ಪರಿಷತ್ತಿನ  ಈ ಬಾರಿಯ ಸಮ್ಮೇಳನದ ಅಧ್ಯಕ್ಷೆಯಾಗಿ  ಹಿರಿಯ ಸಂಗೀತಗಾರ್ತಿ ನಾಗವಲ್ಲಿ ನಾಗರಾಜ್‌ ಆಯ್ಕೆಯಾಗಿದ್ದಾರೆ. ಇವರಿಗೆ ‘ಗಾನಕಲಾಭೂಷಣ’ ಬಿರುದು ಲಭಿಸಲಿದೆ. ಯುವ ಸಂಗೀತಗಾರರ ಸಮ್ಮೇಳನಕ್ಕೆ ಹಾಡುಗಾರ ಸಂಪಗೋಡು ವಿಘ್ನರಾಜ್‌ ಅಧ್ಯಕ್ಷರು ಹಾಗೂ ಇವರಿಗೆ ‘ಗಾನ ಕಲಾಶ್ರೀ’ ಬಿರುದು ನೀಡಿ ಗೌರವಿಸಲಾಗುತ್ತಿದೆ. 

ಬೆಂಗಳೂರಿನವರಾದ ವಿದುಷಿ ನಾಗವಲ್ಲಿ ನಾಗರಾಜ್ ಅವರು ಕರ್ನಾಟಕ ಸಂಗೀತದ ಮೇರು ಗಾಯಕಿ. ತ್ರಿಸ್ಥಾಯಿಗಳಲ್ಲಿಯೂ ಲೀಲಾಜಾಲವಾಗಿ, ಮಧುರಾತಿಮಧುರವಾಗಿ ಹಾಡುವ ಇವರು, ಲಯ ಪರಿಜ್ಞಾನ ಇರುವ, ರಾಗವನ್ನು ರಸವತ್ತಾಗಿ ಪ್ರಸ್ತುತಪಡಿಸುವ ಸಾಮರ್ಥ್ಯ ಇರುವ ಕಲಾವಿದೆ. ‘ಗಾನಕಲಾಭೂಷಣ’ ಪ್ರಶಸ್ತಿಗೆ ಭಾಜನರಾಗುತ್ತಿರುವ ವಿದುಷಿ ನಾಗವಲ್ಲಿ ನಾಗರಾಜ್‌ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಪ್ರ

ನಿಮ್ಮ ಕರ್ನಾಟಕ ಸಂಗೀತ ಜೀವನದ ಹಾದಿಯನ್ನೊಮ್ಮೆ ಅವಲೋಕನ ಮಾಡುವಿರಾ?

ನನ್ನದು ಸಂಗೀತದಲ್ಲಿ ಬೇರೂರಿದ ಮನೆತನ. ಕೀರ್ತಿಶೇಷ ಕೊಳತ್ತೂರು ರಾಮಕೃಷ್ಣ ಶಾಸ್ತ್ರಿಗಳು ನನ್ನ ತಾತ. ಅವರು ವಾಗ್ಗೇಯಕಾರರಾಗಿದ್ದರು. ನನ್ನ ತಂದೆ ದಿ. ಸತ್ಯನಾಥ್ ಅವರಿಂದಲೇ ಸಮಸ್ತ ಸಂಗೀತವನ್ನು ಪಡೆದುಕೊಂಡೆ. ಹನ್ನೆರಡನೆ ವಯಸ್ಸಿನಿಂದಲೇ ಪೂರ್ಣ ಪ್ರಮಾಣದ ಕಛೇರಿಗಳನ್ನು ನೀಡುತ್ತಾ ಬಂದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಮಾಡುತ್ತಿದ್ದಾಗ ಗಾನಕಲಾಭೂಷಣ ಆನೂರು ರಾಮಕೃಷ್ಣರ ಸಂಪರ್ಕವಾಗಿ ಅವರಿಂದ ಸಂಗೀತದಲ್ಲೇ ನೆಲೆಯೂರುವಂತಾಯಿತು. ಬಾಲಮುರಳಿಕೃಷ್ಣ ಅವರ ಕೃತಿಗಳನ್ನು ಪ್ರಸ್ತುತಪಡಿಸಿದುದರ ಸಲುವಾಗಿ ಚೆನ್ನೈನ ಮುರಳೀ ರವಲಿ ಟ್ರಸ್ಟ್‌ ವತಿಯಿಂದ ಚಿನ್ನದ ಪದಕ ಬಂತು. ದೇಶ ವಿದೇಶಗಳಲ್ಲಿ ಸಂಗೀತ ಕಛೇರಿಗಳನ್ನು ನೀಡಿದ್ದು, ಅನೇಕ ಧ್ವನಿಮುದ್ರಣಗಳನ್ನೂ ತಂದಿದ್ದೇನೆ.

ಪ್ರ

ಕಾಲೇಜು ದಿನಗಳಲ್ಲೇ ನಿಮ್ಮ ಸಂಗೀತ ಬದುಕು ರೋಚಕ ತಿರುವು ಪಡೆದುಕೊಂಡಿತು ಎಂದಿರಿ. ಅದು ಹೇಗೆ?

ನಾನು ಮಹಾರಾಣಿ ಕಾಲೇಜಿನಲ್ಲಿ ಮೊದಲನೇ ಬಿ.ಎ. ಮಾಡುತ್ತಿದ್ದಾಗ ಅದಾಗಲೇ ಸೆಂಟ್ರಲ್ ಕಾಲೇಜಿನಲ್ಲಿ ಆರಂಭವಾಗಿದ್ದ ಸಂಗೀತ, ನೃತ್ಯ ಹಾಗೂ ನಾಟಕ ವಿಭಾಗದ ಮುಖ್ಯಸ್ಥರು ಬಲವಂತವಾಗಿ ಸೆಂಟ್ರಲ್ ಕಾಲೇಜಿಗೆ ಸೇರುವಂತೆ ಹೇಳಿ, ಅಡ್ಮಿಷನ್ ಕೊಡಿಸಿದರು. ಅದಾಗಿ ಕೆಲದಿನಗಳ ನಂತರ ‘ನೀನು ಸಭೆಗಳಲ್ಲಿ ಕಛೇರಿಗಳನ್ನು ನೀಡಬಾರದು’ ಎಂದು ಆದೇಶಿಸಿದರು. ಈ ಆಘಾತದ ವಿಷಯವನ್ನು ನನ್ನ ತಂದೆಯವರಲ್ಲಿ ತಿಳಿಸಿದಾಗ, ಅವರು ‘ನೀನು ಕಾಲೇಜನ್ನೇ ಬಿಟ್ಟುಬಿಡು, ಸಂಗೀತದ ಅನುಸಂಧಾನವನ್ನು ಬಿಡಬೇಡ’ ಎಂದು ದೃಢವಾಗಿ ಹೇಳಿದರು. ಇದು ಅವರು ನನ್ನ ಸಂಗೀತಕ್ಕೆ ಹಾಕಿದ ಭದ್ರಪಾಯ.

ಪ್ರ

ನಿಮ್ಮ ದೃಷ್ಟಿಯಲ್ಲಿ ಸಂಗೀತ ಕಛೇರಿ ಸಾರ್ಥಕತೆ ಪಡೆಯುವುದು ಯಾವಾಗ?

ಸಂಗೀತ ಕಛೇರಿಗಳೆಂದರೆ ಭಾವನೆಗಳ ಸಾಕ್ಷಾತ್ಕಾರ. ಇದಷ್ಟೇ ಏಕಮಾತ್ರ ಉದ್ದೇಶವಾದಲ್ಲಿ ಕಛೇರಿಗಳು ಸಾರ್ಥಕತೆಯನ್ನು ಪಡೆಯುತ್ತವೆ. ಲಯದ ಅಬ್ಬರವನ್ನು ಮಿತಿಗೊಳಿಸಿ, ವಿನಿಕೆಯನ್ನು ಹೃದ್ಯಗೊಳಿಸುವುದು ಕಛೇರಿಯ ಪರಮ ಉದ್ದೇಶವೆಂಬುದು ನನ್ನ ಅನಿಸಿಕೆ. ಇದನ್ನು ನಾನು ಮನೋಧರ್ಮ ಸಂಗೀತದಲ್ಲಿ ಅಭಿವ್ಯಕ್ತಿಸುತ್ತೇನೆ. ಜೊತೆಗೆ ಲಕ್ಷ್ಯ-ಲಕ್ಷಣಗಳು ಸರಸ್ವತಿಯ ಎರಡು ಕಣ್ಣುಗಳು. ಲಕ್ಷಣ ಗೊತ್ತಿದ್ದು ಪ್ರದರ್ಶನದಲ್ಲಿ ಎಡವಿದರೂ ಕಛೇರಿ ಕೆಡುತ್ತದೆ. ಲಕ್ಷ್ಯ ಗೊತ್ತಿದ್ದು ಲಕ್ಷಣವನ್ನು ಅಳವಡಿಸಿಕೊಳ್ಳದಿದ್ದರೆ ಕಛೇರಿಯ ರಸಮಯ ಮನೋಧರ್ಮಕ್ಕೆ ಧಕ್ಕೆಯಾಗುತ್ತದೆ.

ಪ್ರ

ಗಾನಕಲಾಭೂಷಣ ಪ್ರಶಸ್ತಿ ನಿಮಗೆ ಈ ಬಾರಿ ಒಲಿದಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ವಿದ್ವಾನ್‌ ಆರ್‌.ಕೆ. ಪದ್ಮನಾಭ ಅವರ ಅಧ್ಯಕ್ಷತೆಯ ಪರಿಷತ್‌ ಪ್ರತಿವರ್ಷ ಕಲಾವಿದರಿಗೆ ಪುರಸ್ಕಾರ ನೀಡಿ ಸತ್ಕರಿಸುವುದು ಹೆಮ್ಮೆಯ ಸಂಗತಿ. ಈ ಬಾರಿ ನನಗೊಲಿದ ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ. ನನ್ನ ಗುರುಗಳು ಹಾಗೂ ಇನ್ನಿತರ ಸ್ಥಳೀಯ ವಿದ್ವಾಂಸರಿಂದ ಪೋಷಿಸಲಾದ ಸಂಸ್ಥೆಯಿಂದಲೇ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಅದೃಷ್ಟ.

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಂಗಣದಲ್ಲಿ ನ.15ರಿಂದ 19ರವರೆಗೆ ಐದು ದಿನಗಳ ಕಾಲ ಕರ್ನಾಟಕ ಗಾನಕಲಾ ಪರಿಷತ್‌ನ ರಾಜ್ಯ ಸಮ್ಮೇಳನ ಆಯೋಜನೆಗೊಂಡಿದೆ.

ಗಾನ ಕಲಾಶ್ರೀ ಸಂಪಗೋಡು

ಇದೇ ಕಾರ್ಯಕ್ರಮದ ಯುವ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಹಾಗೂ ಗಾನಕಲಾಶ್ರೀ ಬಿರುದು ವಿದ್ವಾನ್‌ ಸಂಪಗೋಡು ವಿಘ್ನರಾಜ್‌ ಅವರಿಗೆ ಈ ಬಾರಿ ಒಲಿದಿದೆ.

ಶೃಂಗೇರಿ ಸಮೀಪದ ಸಂಪಗೋಡು ಎಂಬ ಹಳ್ಳಿಯಲ್ಲಿ ಜನಿಸಿದ ವಿಘ್ನರಾಜ್‌ ಅವರದು ಕರ್ನಾಟಕ ಸಂಗೀತದಲ್ಲಿ ಛಾಪು ಮೂಡಿಸಿರುವ ಹೆಸರು. ಐದನೇ ವಯಸ್ಸಿನಿಂದಲೇ ತಂದೆ ಸಂಗೀತವಾರಿಧಿ ಡಿ.ಎಸ್. ಸೂರ್ಯನಾರಾಯಣ ಭಟ್ ಅವರ ಬಳಿ ಹಾಗೂ ಮುಂದೆ ವಿದ್ವಾನ್ ಡಿ.ಎನ್. ಸುಬ್ರಹ್ಮಣ್ಯ ಭಟ್ ಇವರಲ್ಲಿಯೂ ಸಂಗೀತ ಅಭ್ಯಾಸ ಮಾಡಿದವರು. ತಮ್ಮ 15ನೇ ವಯಸ್ಸಿನಿಂದಲೇ ಕಛೇರಿ ನೀಡಲಾರಂಭಿಸಿದ್ದಲ್ಲದೆ ಕೊಳಲು ವಾದನವನ್ನು ಸ್ವತಂತ್ರವಾಗಿ ಕಲಿತವರು. ಸಂಗೀತ ವಾದ್ಯಗಳ ಮೇಲಿನ ತುಡಿತ, ಆಸಕ್ತಿ ಮೇಲಾಗಿ ಪ್ರೀತಿ ಇವರನ್ನು ಸ್ಲೈಡ್ ಗಿಟಾರ್ ಕಲಿಯುವಂತೆ ಪ್ರೇರೇಪಿಸಿತ್ತು. ಬೆಂಗಳೂರಿನಲ್ಲಿ ತಮ್ಮದೇ ಆದ ಸಂಗೀತ ಸಂಸ್ಥೆ ಸೂರ್ಯ ಗ್ಲೋಬಲ್ ಮ್ಯೂಸಿಕ್ ಅಕಾಡೆಮಿ ಆರಂಭಿಸಿ ಮಕ್ಕಳಿಗೆ ಗಾಯನ, ಕೊಳಲು, ಗಿಟಾರ್, ವೀಣೆ ಕಲಿಸತೊಡಗಿದರು. ಹಲವು ಪ್ರಶಸ್ತಿಗಳಿಗೂ ಭಾಜನರಾದ ಸಂಪಗೋಡು ಅವರ ಸಂಗೀತ ಪಯಣದಲ್ಲಿ ತಾಯಿ ನಾಗಲಕ್ಷ್ಮಿ ಎಸ್. ಭಟ್ ಅವರ ಮಾರ್ಗದರ್ಶನ ಹಾಗೂ ಪತ್ನಿ ಮಧುವಂತಿ ಅವರ ಸಹಕಾರವಿದೆ.

ಶೃಂಗೇರಿ ಶಾರದಾಪೀಠದ ಆಸ್ಥಾನ ವಿದ್ವಾನ್‌ ಬಿರುದು, ಅನನ್ಯ ಯುವ ಪುರಸ್ಕಾರಗಳಿಗೆ ಭಾಜನರಾದ ಸಂಪಗೋಡು ಅವರಿಗೆ ಸದ್ಯ ಗಾನಕಲಾಶ್ರೀ ಕಿರೀಟ ಮುಡಿಗೇರಿಸಿದ ಅಗ್ಗಳಿಕೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT