ಶಿವಮೊಗ್ಗ: ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಸಿನಿಮಾ, ಸಾಹಿತ್ಯ ಪ್ರಭಾವ ಇರುತ್ತದೆ. ಅವುಗಳ ಉತ್ತಮ ಅಂಶಗಳು ಮನುಷ್ಯನ ಜೀವನದ ಆಗುಹೋಗುಗಳ ಮೇಲೆ ಗಾಢ ಪರಿಣಾಮ ಬೀರಬಲ್ಲದು ಎಂದು ಕವಿ ಜಯಂತ ಕಾಯ್ಕಿಣಿ ಹೇಳಿದರು.
ಇಲ್ಲಿನ ಮಾನಸ ಟ್ರಸ್ಟ್ ಡಾ.ಕಟೀಲ್ ಅಶೋಕ್ ಪೈ ಸ್ಮರಣಾರ್ಥ ನೀಡುವ ‘ಮಾನಸ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿನಿಮಾ ಹಾಗೂ ಸಾಹಿತ್ಯ ಬದುಕಿಗೆ ಅತ್ಯಂತ ಹತ್ತಿರವಾಗಿವೆ. ಪ್ರತಿಯೊಬ್ಬ ಮನುಷ್ಯನೂ ಅರ್ಥೈಸಿಕೊಂಡು ಮನಮಿಡಿಯುವ ವಿಷಯಗಳಾಗಿವೆ. ಸಿನಿಮಾ ರಂಜನೆಯ ಜತೆಗೆ ಸಮಾಜದಲ್ಲಿನ ಆಗು ಹೋಗುಗಳನ್ನು ತೆರೆದಿಡುತ್ತವೆ. ಸಾಹಿತ್ಯ ಭರವಸೆಯ ಬದುಕಿಗೆ ಪೂರಕವಾಗಿದೆ. ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.
ಬೆಂಗಳೂರಿನ ಮನೋವೈದ್ಯ ಡಾ.ಸ್ವಾಮಿನಾಥ ಗೋಪಾಲರಾವ್, ನಿಮ್ಹಾನ್ಸ್ ಪ್ರಾಧ್ಯಾಪಕ ಡಾ.ಜಗದೀಶ್ ತೀರ್ಥಹಳ್ಳಿ ಅವರಿಗೆ ತಲಾ ₹ 75 ಸಾವಿರ ನಗದು, ಫಲಕ ಒಳಗೊಂಡ ಮಾನಸ ಪ್ರಸಸ್ತಿ ಪ್ರಸಸ್ತಿ ನೀಡಿ ಪುರಸ್ಕರಿಸಲಾಯಿತು.