ನಮ್ಮ ತಂದೆ ಕೃಷಿಕ. ಪ್ರತಿ ದಿನ ಹೊಲದಲ್ಲಿ ಕಷ್ಟ ಪಟ್ಟು ದುಡಿದರೂ ಆ ಕಷ್ಟಗಳು ನಮಗೆ ತಿಳಿಯಬಾರದು ಎಂದು ಎಚ್ಚರ ವಹಿಸಿ ನಮ್ಮನ್ನು ಬೆಳೆಸಿದ್ದಾರೆ. ಶಿಕ್ಷಣಕ್ಕೂ ಹೆಚ್ಚು ಆದ್ಯತೆ ನೀಡುತ್ತಿದ್ದ ಅವರು ಹೆಚ್ಚೇನೂ ಓದಿಲ್ಲ. ಅಂದಿನ ಕಾಲದಲ್ಲಿ 5ನೇ ತರಗತಿಗೇ ಶಿಕ್ಷಣಕ್ಕೆ ವಿರಾಮ ಹೇಳಿದ ಅವರು ದುಡಿಮೆಯನ್ನೇ ನೆಚ್ಚಿಕೊಂಡರು. ನಾನು ಈಗ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಹೇಳುವಂತಾಗಲು ನಮ್ಮ ಅಪ್ಪನೇ ಕಾರಣ. ಮಾದರಿ ವ್ಯಕ್ತಿತ್ವ ಹೊಂದಿರುವ ಅವರು ಸ್ನೇಹಿತನಂತೆ ನಮ್ಮ ಜೊತೆ ಇರುತ್ತಾರೆ. ನಮ್ಮ ಯಾವುದೇ ಸಮಸ್ಯೆಗಳಿಗೆ ಕ್ಷಣಾರ್ಧದಲ್ಲಿ ಪರಿಹಾರ ಸೂಚಿಸುವ ಅವರು ತನಗಿಲ್ಲದಿದ್ದರೂ ಇನ್ನೊಬ್ಬರ ಸಹಾಯಕ್ಕೆ ತುಡಿಯುವಂತಹ ವ್ಯಕ್ತಿತ್ವ ಹೊಂದಿದ್ದಾರೆ. ನಮ್ಮ ಜೀವನವನ್ನು ರೂಪಿಸಿದ ಅವರು ದೇವರ ಸಮಾನ. ಬೌದ್ಧಿಕ, ಸಾಮಾಜಿಕ ಹಾಗೂ ನೈತಿಕವಾಗಿ ಹೇಗೆ ಬೆಳವಣಿಗೆ ಹೊಂದಬೇಕು ಎಂಬುದನ್ನು ನಿದರ್ಶನಗಳ ಮೂಲಕ ವಿವರಿಸುತ್ತಾರೆ. ಪರೋಪಕಾರ, ನಿಷ್ಠೆ, ಪ್ರಾಮಾಣಿಕತೆಗೆ ಆರಾಧ್ಯಮೂರ್ತಿಯಾಗಿ ನನ್ನ ಅಪ್ಪ ಕಾಣುತ್ತಾರೆ.