ಪಾರ್ವತೀ–ಪರಮೇಶ್ವರರು ಜಗತ್ತಿನ ತಂದೆ–ತಾಯಿ. ಪಾರ್ವತಿಯ ಇನ್ನೊಂದು ಹೆಸರು ‘ಗೌರೀ.’
ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಪೂಜೆಗೆ ವಿಶೆಷ ಮನ್ನಣೆಯಿದೆ. ಶಕ್ತಿಯ ಸಹಾಯ ಇಲ್ಲದಿದ್ದರೆ ಸೃಷ್ಟಿಕಾರ್ಯವೂ ನಡೆಯದು ಎಂದು ಶಂಕರಾಚಾರ್ಯರು ‘ಸೌಂದರ್ಯಲಹರಿ’ಯಲ್ಲಿ ನಿರೂಪಿಸುತ್ತಾರೆ. ತ್ರಿಮೂರ್ತಿಗಳೂ ಕೂಡ ಶಕ್ತಿಯ ಸಹಾಯವಿಲ್ಲದಿದ್ದರೆ ಏನನ್ನೂ ಮಾಡಲಾರರು ಎನ್ನುವುದು ಆಚಾರ್ಯರ ನಿಲುವು
ಶಿವ ಮತ್ತು ಪಾರ್ವತಿ ಆದರ್ಶ ದಾಂಪತ್ಯಕ್ಕೂ ಸಂಕೇತ. ಶಿವನ ಸಂಸಾರದಲ್ಲಿರುವ ವಿವರಗಳಲ್ಲಿ ಸಾಮರಸ್ಯಕ್ಕಿಂತಲೂ ವೈರವೇ ಹೆಚ್ಚು. ಉದಾಹರಣೆಗೆ, ಪಾರ್ವತಿಯ ವಾಹನ ಸಿಂಹ, ಶಿವನ ವಾಹನ ಎತ್ತು; ಇವೆರಡಕ್ಕೂ ವೈರ. ಸುಬ್ರಹ್ಮಣ್ಯನ ವಾಹನ ನವಿಲು; ಗಣಪತಿಯ ವಾಹನ ಇಲಿ; ಇವೆರಡಕ್ಕೂ ವೈರ. ಹೀಗಿದ್ದರೂ ಪರಸ್ಪರ ವೈರವನ್ನು ಮರೆತು ಶಿವನ ಸಂಸಾರದಲ್ಲಿ ಎಲ್ಲರೂ ಸಾಮರಸ್ಯದಿಂದ ಇದ್ದಾರೆ.
ಹೀಗಾಗಿ ಗೌರೀವ್ರತ ಎನ್ನುವುದು ಕುಟುಂಬದ ಸಾಮರಸ್ಯಕ್ಕೂ ಏಕತೆಗೂ ಮಾಡುವ ಸಂಕಲ್ಪವೂ ಹೌದು.
ಸೃಷ್ಟಿ, ಸ್ಥಿತಿ ಮತ್ತು ಲಯ – ಈ ಮೂರಕ್ಕೂ ಕಾರಣಳಾಗುವವಳೇ ಶಕ್ತಿ. ಇದು ಸೃಷ್ಟಿ ಎಂಬ ಸಂಸಾರದ ಮಾತಾಯಿತು. ಅಂತೆಯೇ ನಮ್ಮ ಸಂಸಾರಗಳೂ ಚೆನ್ನಾಗಿರಬೇಕಾದರೆ ತಾಯಿಯ ಪಾತ್ರ ದೊಡ್ಡದು. ಮಾತೃಶಕ್ತಿಯನ್ನು ಸ್ಮರಿಸಿಕೊಳ್ಳುತ್ತ, ಅದನ್ನು ಪೂಜಿಸುವ, ಆರಾಧಿಸುವ ಪರ್ವವೇ ಸ್ವರ್ಣಗೌರೀವ್ರತ.