ಜಗನ್ನಾಥದಾಸರು ಅನೇಕ ಪದ, ಪದ್ಯ, ಸುಳಾದಿಗಳನ್ನು ರಚಿಸಿದ್ದಾರೆ. ಅವು ಅತ್ಯಂತ ಪ್ರೌಢವೂ ಸಂಸ್ಕೃತಜಟಿಲವೂ ಆಗಿವೆ. ಇವೆಲ್ಲಕ್ಕಿಂತ ಇವರಿಂದ ರಚಿತವಾದ ‘ಹರಿಕಥಾಮೃತಸಾರ’ದಿಂದ ಇವರ ಹೆಸರು ಅತ್ಯಂತ ಪ್ರಸಿದ್ಧವಾಯಿತು. ಉಪನಿಷತ್ತುಗಳು. ಪುರಾಣಗಳು, ಪಾಂಚರಾತ್ರಾಗಮ, ಪ್ರಕಾಶಸಂಹಿತೆಯೇ ಮೊದಲಾದ ಅನೇಕ ಗ್ರಂಥಗಳ ಸಾರವೆಲ್ಲ ಇದರಲ್ಲಿ ಸಂಗ್ರಹಿತವಾಗಿರುವವುವು. ಇದರಲ್ಲಿ ಮಧ್ವಮತದ ಅತ್ಯಂತ ಕ್ಲಿಷ್ಟ ಪ್ರಮೇಯಗಳು ವಿಸ್ತಾರವಾಗಿ ರಚಿತವಾಗಿವೆ. ಹರಿಕಥಾಮೃತಸಾರವಲ್ಲದೆ ಇವರು 600 ನುಡಿಗಳ ‘ತತ್ತ್ವಸುವಾಲಿ’ ಎಂಬ ಪ್ರಬಂಧವನ್ನೂ ರಚಿಸಿರುವರು. ಪಂಢರಪುರದಲ್ಲಿ ವಿಠಲನ ಅನುಗ್ರಹಕ್ಕೆ ಇವರು ಪಾತ್ರರಾದುದರಿಂದ ಇವರಿಗೆ ‘ರಂಗನೊಲಿದದಾಸ’ರೆಂದು ಹೆಸರಾಯಿತು.