ಪತ್ರಕರ್ತ ಬಸವರಾಜು ಮೇಗಲಕೇರಿ ಅವರು ಪತ್ರಿಕೆಗೆ ಬರೆದ ವ್ಯಕ್ತಿಚಿತ್ರಗಳ ಸಂಕಲನವೇ ‘ಅವರಿವರು’ ಕೃತಿ. ಆಯಾ ಸಂದರ್ಭದಲ್ಲಿ ಸುದ್ದಿಯಲ್ಲಿರುವ ವ್ಯಕ್ತಿಗಳ ಸುತ್ತ ಹುಟ್ಟಿಕೊಂಡ ಸಾಹಿತ್ಯ ಇದಾದರೂ ವ್ಯಕ್ತಿತ್ವದ ಮೇಲೆ ಬೀರಿರುವ ಒಳನೋಟಗಳ ಕಾರಣಕ್ಕಾಗಿ ಸಂದರ್ಭದಾಚೆಯೂ ಪ್ರಸ್ತುತವೆನಿಸುವ ಗುಣ ಈ ಬರಹಗಳಿಗೆ ಸಿದ್ಧಿಸಿದೆ. ಸಾಹಿತ್ಯ, ಕಲೆ, ಕ್ರೀಡೆ, ರಾಜಕೀಯ, ಉದ್ಯಮ, ಅಧಿಕಾರಶಾಹಿ... ಹೀಗೆ ನಾನಾವಲಯಗಳ ವ್ಯಕ್ತಿಗಳನ್ನು ಇಲ್ಲಿನ ಬರಹಗಳು ಮುಟ್ಟಿವೆ. ತಟ್ಟಿ, ಮೈದಡವಿ ಮಾತನಾಡಿಸಿವೆ. ಒಳ್ಳೆಯದನ್ನು ಎತ್ತಿತೋರಿವೆ. ವ್ಯಕ್ತಿತ್ವದ ಸುತ್ತಲಿನ ನಕಾರಾತ್ಮಕ ಸಂಗತಿಗಳ ಕುರಿತು ಹೇಳದೇ ಮೌನವೇನೂ ತಾಳಿಲ್ಲ. ಎಷ್ಟೋ ವ್ಯಕ್ತಿಗಳ ಕುರಿತು ಓದುಗರು ಭಾವಿಸಿದ್ದಕ್ಕಿಂತ ಭಿನ್ನವಾದ ಚಿತ್ರಣಗಳು ಇಲ್ಲಿನ ಬರಹಗಳಲ್ಲಿವೆ. ಯಾವುದೇ ವ್ಯಕ್ತಿಯನ್ನು ಹೊಗಳಿಕೆಯ ಅಟ್ಟಕ್ಕೆ ಏರಿಸದೆ, ಸರಿ–ತಪ್ಪುಗಳ ತಕ್ಕಡಿ ತೂಗುವುದು ಈ ಬರಹಗಳ ವಿಶೇಷ.