ಒಟ್ಟು 96 ಪುಟ್ಟ ಅಧ್ಯಾಯಗಳಲ್ಲಿ ಮುದ್ದುಕೃಷ್ಣ ತಮ್ಮಬದುಕನ್ನು ತೆರೆದಿಟ್ಟಿದ್ದಾರೆ. ಅದನ್ನು ಶಮ ನಂದಿಬೆಟ್ಟ ಅವರು ಅಷ್ಟೇ ಸೊಗಸಾಗಿ ನಿರೂಪಿಸಿದ್ದಾರೆ. ಆತ್ಮಕಥೆ ಬರೆಯುವ ಸಂದರ್ಭದಲ್ಲಿ ಲೇಖಕ ತನ್ನದೇ ಬದುಕನ್ನು ಅಕ್ಷರಕ್ಕಿಳಿಸುತ್ತಾನೆ. ಈ ಸಂದರ್ಭದಲ್ಲಿ ಯಾವುದೇ ಅಳುಕು ಆತನಲ್ಲಿರುವುದಿಲ್ಲ. ಆದರೆ ತನ್ನ ಕಥೆಯನ್ನು ಬೇರೆಯವರೊಬ್ಬರು ಬರೆಯ ಹೊರಟಾಗ ಒಂದಿಷ್ಟು ಹಿಂಜರಿಕೆ ಸಾಮಾನ್ಯ. ಆದರೆ, ಈ ಕೃತಿಯಲ್ಲಿ ಅಂತಹ ಹಿಂಜರಿಕೆ ಮೇಲ್ನೋಟಕ್ಕೆ ಕಾಣುವುದಿಲ್ಲ. ಶಾಲಾ ಜೀವನದಿಂದ ಹಿಡಿದು ವೈವಾಹಿಕ ಜೀವನದಲ್ಲಿ ಉಂಟಾದ ಬಿರುಕಿನವರೆಗೂ ತಮ್ಮ ಅನುಭವಗಳನ್ನು ವೈ.ಕೆ.ಎಂ ಮುಲಾಜಿಲ್ಲದೆ ಬಿಚ್ಚಿಟ್ಟಿದ್ದಾರೆ. ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಎದುರಿಸಿದ ಸವಾಲು, ಆರೋಪಗಳ ಬಗ್ಗೆಯೂ ವಿಸ್ತೃತವಾಗಿ ವಿವರಿಸಿದ್ದಾರೆ.