ಗಾಯಕ ಕೆ. ಗುರುರಾಜ್ ಅವರುಆಯ್ದ ಕನ್ನಡ ಗೀತೆಗಳ ಭಂಡಾರ‘ಮಧುರ ಮಧುರವೀ ಮಂಜುಳಗಾನ’ ಸಂಚಿಕೆ –2 ಪುಸ್ತಕ ಹೊರ ತಂದಿದ್ದು, ನಟ ಶರಣ್ ಮಂಗಳವಾರ ಈ ಕೃತಿಯನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಜನಪ್ರಿಯ ಹಾಡುಗಳನ್ನು ಸಂಗ್ರಹಿಸಿ ಕೃತಿಯಾಗಿ ಹೊರತಂದಿರುವುದು ಒಳ್ಳೆಯ ಪ್ರಯತ್ನ. ಜನಪ್ರಿಯ ಗೀತೆಗಳ ಸಾಹಿತ್ಯ ರಚನೆಕಾರರು, ಗಾಯಕರು ಹಾಗೂ ಸಂಗೀತ ಸಂಯೋಜಿಸಿದವರ ವಿವರವನ್ನೂ ಈ ಕೃತಿಯಲ್ಲಿ ದಾಖಲಿಸಿ ಕಲಾವಿದರು ಮತ್ತು ಸಾಹಿತಿಗಳಿಗೆ ಗೌರವ ಸಲ್ಲಿಸಿರುವುದು ಪ್ರಶಂಸನೀಯ ಎಂದರು.
ಕೃತಿ ಸಂಪಾದಿಸಿರುವ ಗುರುರಾಜ್ ಮಾತನಾಡಿ, ಮೊದಲ ಸಂಚಿಕೆಯೂ ಅಪಾರ ಜನಪ್ರಿಯಗೊಂಡಿದ್ದು ಕಲಾವಿದರಿಗೆ ಉಪಯುಕ್ತವಾಗಿದೆ. ಮೊದಲ ಸಂಚಿಕೆಯ ಆರು ಸಾವಿರ ಕೃತಿಗಳುರಾಜ್ಯದಲ್ಲಿ ಮಾರಾಟವಾಗಿವೆ. ಎರಡನೇ ಸಂಚಿಕೆಯ ಕೃತಿ ಕೂಡ ಯಶಸ್ವಿಯಾಗುವ ನಂಬಿಕೆ ಇದೆ.ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸುವ ಕಲಾವಿದರಿಗಂತೂ ಈ ಪುಸ್ತಕ ತುಂಬಾ ಉಪಯುಕ್ತವಾಗಿದೆ ಎಂದರು.
ಸೌಂಡ್ ಆಫ್ ಮ್ಯೂಸಿಕ್ ವತಿಯಿಂದ ಹೊರ ತಂದಿರುವ ಈ ಪುಸ್ತಕದಲ್ಲಿ ಸಿನಿಮಾ, ಭಕ್ತಿ ಗೀತೆ, ಭಾವಗೀತೆ, ಜಾನಪದ ಹಾಗೂ ದೇಶಭಕ್ತಿಗೆ ಸಂಬಂಧಿಸಿದ 525 ಗೀತೆಗಳು ಇವೆ.